ಕೋಮು ವೈರಸ್ಗೆ ಸೌಹಾರ್ದತೆಯೇ ಚಿಕಿತ್ಸೆ: ಡಾ. ಶೇಕ್ ಮುಹಮ್ಮದ್ ಇರ್ಫಾನ್

ಪಡುಬಿದ್ರೆ, ಮೇ 25: ಕೋಮು ವೈರಸ್ ಮೂಲಕ ಹರಡುವ ಕೋಮು ಜ್ವರಕ್ಕೆ ಧಾರ್ಮಿಕ ಸೌಹಾರ್ದತೆಯೇ ಪರಿಣಾಮಕಾರಿ ಚಿಕಿತ್ಸೆಯಾಗಿದೆ ಎಂದು ಆಯುಷ್ ಮೆಡಿಕಲ್ ಆಫೀಸರ್ ಡಾ. ಶೇಕ್ ಮುಹಮ್ಮದ್ ಇರ್ಫಾನ್ ಹೇಳಿದರು.
ಶುಕ್ರವಾರ ಉಚ್ಚಿಲ ಸೇಕ್ರೆಡ್ ಹಾರ್ಟ್ ಚರ್ಚ್ ಆವರಣದಲ್ಲಿ ಜರಗಿದ ಎರ್ಮಾಳ್, ಉಚ್ಚಿಲ ಸೇಕ್ರೆಡ್ ಹಾರ್ಟ್ ಚರ್ಚ್ ಬೆಳ್ಳಿ ಹಬ್ಬದ ಧಾರ್ಮಿಕ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು ಜೀವನದಲ್ಲಿ ಸೌಹಾರ್ದತೆಯನ್ನು ಅಳವಡಿಸಿಕೊಂಡಾಗ ಶಾಂತಿಯುತವಾಗಿ ಬಾಳಲು ಸಾಧ್ಯ ಎಂದರು.
ಮೂಳೂರು ಉಚ್ಚಿಲ ಸಿಎಸೆಐ ಬೆಥೆಲ್ ಚರ್ಚ್ ಧರ್ಮಗುರು ರೆ. ಪಾಸ್ಟರ್ ಜಾನ್ ವೆಸ್ಲಿ ಕುಂದರ್ ಮಾತನಾಡಿ, ಗುರುಗಳ ಅನುಗ್ರಹವಿಲ್ಲದೆ ಯಾವುದೇ ಕೆಲಸಕ್ಕೆ ಪ್ರತಿಫಲವಿಲ್ಲ. ಧಾರ್ಮಿಕ ಕೇಂದ್ರಗಳಲ್ಲಿ ಗುರು ಮುಖೇನ ನಮ್ಮ ಕತ್ತಲೆ ಪರಿಹರಿಸಿ ಜ್ಞಾನದ ಬೆಳಕನ್ನು ಎಲ್ಲರಿಗೂ ಪಸರಿಸುವ ಕೆಲಸವಾಗಲಿ ಎಂದರು.
ದ.ಕ.ಮೊಗವೀರ ಮಹಾಜನ ಸಂಘ ಉಚ್ಚಿಲ ಅಧ್ಯಕ್ಷ ಗಂಗಾಧರ ಕರ್ಕೇರಾ ಮಾತನಾಡಿ, ಶೈಕ್ಷಣಿಕ, ಆರೋಗ್ಯ, ಧಾರ್ಮಿಕ ಹಾಗೂ ಸಾಮಾಜಿಕವಾದ ನಾಲ್ಕು ಕ್ಷೇತ್ರಗಳಲ್ಲಿ ಕ್ರೈಸ್ತರು ಸಾಧನೆಗೈದು ಸಮಾಜಕ್ಕೆ ಕೊಡುಗೆಯಾಗಿ ದ್ದಾರೆ ಎಂದು ನುಡಿದರು.
ಈ ಸಂದರ್ಭ ಪಾಲನಾ ಮಂಡಳಿಯಲ್ಲಿ ಸೇವೆ ಸಲ್ಲಿಸಿದವರು, ದಾನಿಗಳು, ಸೇವೆ ನೀಡಿದ ಗುರುಗಳನ್ನು ಉಡುಪಿ ಧರ್ಮಪ್ರಾಂತ್ಯ ಕುಲಾಧಿಪತಿ ರೆ ವೆಲೇರಿಯನ್ ಮೆಂಡೋನ್ಸಾ ಗೌರವಿಸಿದರು. ಉಡುಪಿ ಧರ್ಮಪ್ರಾಂತ್ಯದ ಧರ್ಮಾಧಿಕಾರಿ ಡಾ. ಜೆರಾಲ್ಡ್ ಐಸಾಕ್ ಲೋಬೋ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನ ಅರ್ಚಕ ವೇ.ಮೂ. ಕೆ.ವಿ. ರಾಘವೇಂದ್ರ ಉಪಾದ್ಯ, ಶಿರ್ವ ಚರ್ಚ್ ಗುರುಗಳಾದ ಸ್ಟಾನಿ ತಾವ್ರೋ, ಶ್ರೇಷ್ಟ ಗುರುಗಳಾದ ರೆ.ಫಾ. ವಲೆರಿಯನ್ ಮೆಂಡೋನ್ಸ, ಉಡುಪಿ ಧರ್ಮಪ್ರಾಂತ್ಯ ವಿಕರ್ ಜೆನರಲ್ ರೆ. ಬಾಪ್ಟಿಸ್ಟ್ ಮೆನೆಜಸ್, ಮೂಳೂರು ಉಚ್ಚಿಲ ಸಿಎಸೆಐ ಬೆಥೆಲ್ ಚರ್ಚ್ ಧರ್ಮಗುರು ರೆ. ಪಾಸ್ಟರ್ ಜಾನ್ ವೆಸ್ಲಿ ಕುಂದರ್, ದ.ಕ.ಮೊಗವೀರ ಮಹಾಜನ ಸಂಘ ಉಚ್ಚಿಲ ಅಧ್ಯಕ್ಷ ಗಂಗಾಧರ ಕರ್ಕೇರಾ, ಬಡಾಗ್ರಾಮ ಪಂಚಾಯತ್ ಅಧ್ಯಕ್ಷೆ ನಾಗರತ್ನ ಕರ್ಕೇರಾ ಉಪಸ್ಥಿತರಿದ್ದರು.
ಫಾ. ಲಾರೆನ್ಸ್ ರೋಡ್ರಿಗಸ್ ಸ್ವಾಗತಿಸಿ, ಜೇಮ್ಸ್ ಡಿಸೋಜಾ ವರದಿ ವಾಚಿಸಿದರು. ಫಾ. ಡೇನಿಸ್ ಡೇಸಾ ನಿರೂಪಿಸಿ, ವೆರೋನಿಕಾ ಬರ್ಬೋಜಾ ವಂದಿಸಿದರು.