ಅವರಿಗೆ ವಿಲನ್ ಆದ್ರೆ… ಡಿ.ಕೆ.ಶಿವಕುಮಾರ್ ಗೆ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದೇನು?

ಬೆಂಗಳೂರು, ಮೇ 25: ‘ವನ್ ಮ್ಯಾನ್ ಫುಡ್ ಈಸ್ ಅನದರ್ ಮ್ಯಾನ್ಸ್ ಪಾಯಿಸನ್. ಅವರಿಗೆ ವಿಲನ್ ಆದ್ರೆ, ನೀವು ಕೆಲವರಿಗೆ ಹೀರೋ ಆಗಿದ್ದೀರಿ. ಆದರೆ ಎಲ್ಲರಿಗೆ ಹೀರೋ ಆಗಲು ಸಾಧ್ಯವಿಲ್ಲ’ ಎಂದು ವಿಧಾನಸಭೆ ನೂತನ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಹಾಸ್ಯ ಚಟಾಕಿ ಹಾರಿಸಿದ್ದು ಸದನವನ್ನು ನಗೆ ಅಲೆಯಲ್ಲಿ ತೇಲಿಸಿತು.
ಶುಕ್ರವಾರ ವಿಧಾನಸಭೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದ ಸಚಿವ ಸಂಪುಟದಲ್ಲಿ ವಿಶ್ವಾಸ ವ್ಯಕ್ತಪಡಿಸಿರುವ ಪ್ರಸ್ತಾವದ ಮೇಲೆ ಮಾತನಾಡಿದ ವಿಪಕ್ಷ ನಾಯಕ ಯಡಿಯೂರಪ್ಪ, ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರದ ರಚನೆಗೆ ಬಹಳ ಮಹತ್ವದ ಪಾತ್ರ ವಹಿಸಿದ್ದ ಡಿ.ಕೆ.ಶಿವಕುಮಾರ್ ಅವರನ್ನು ಹೊಗಳುವ ಮೂಲಕ ಕಾಲೆಳೆದರು.
‘ಸ್ವಾಮಿ... ಶಿವಕುಮಾರ್ ಅವರೇ ನೀವು ನಾಳೆ ಪಶ್ಚಾತ್ತಾಪ ಪಡುವವರಿದ್ದೀರಿ. ಯಾವುದು ಮಾಡಬಾರದಂತಹ ಅಕ್ಷಮ್ಯ ಅಪರಾಧ ಮಾಡಿ, ಎಲ್ಲರನ್ನು ರಕ್ಷಣೆ ಮಾಡಿ, ಈ ನಾಡಿನ ಜನರ ನಂಬಿಕೆ, ವಿಶ್ವಾಸ, ದ್ರೋಹ ಮಾಡಿದಂತಹ ಒಬ್ಬ ವ್ಯಕ್ತಿಯನ್ನು ಮುಖ್ಯಮಂತ್ರಿಯಾಗಿ ಕುಳಿತುಕೊಳ್ಳಲು ರಕ್ಷಣೆ ಕೊಟ್ಟಿದ್ದೀರಿ. ನಾನಿವತ್ತು ಯಾವುದೇ ಮಾತನ್ನು ಹೇಳುವುದಿಲ್ಲ. ಕಾಲವೇ ಎಲ್ಲವನ್ನೂ ಹೇಳುತ್ತೆ. ಮುಳುಗೋ ದೋಣಿಯಲ್ಲಿ ನೀವು ಕುಳಿತ್ತಿದ್ದೀರಿ’ ಎಂದು ಬಿಎಸ್ವೈ, ಶಿವಕುಮಾರ್ ಅವರನ್ನು ಛೇಡಿಸಿದರು.
ಈ ವೇಳೆ ಮಧ್ಯೆ ಪ್ರವೇಶಿಸಿ ಪ್ರತಿಕ್ರಿಯಿಸಿದ ಶಿವಕುಮಾರ್, ನನಗೂ ಬಿಎಸ್ವೈ ಅವರಿಗೂ ಬಹಳ ಹಳೆಯ ಸಂಬಂಧ. ಅವರ ಮೇಲೆ ನನಗೆ ಪ್ರೀತಿ, ವಿಶ್ವಾಸ ಇರಬಹುದು. ಆದರೆ, ನಾನು ‘ಖಳನಾಯಕ’ ಅನ್ನಿಸಿಕೊಳ್ಳಲು ಸಿದ್ದನಿಲ್ಲ. ಕಾಂಗ್ರೆಸ್ ಪಕ್ಷ ಹಾಗೂ ನಮ್ಮ ಪಕ್ಷದ ರಾಷ್ಟ್ರೀಯಾಧ್ಯಕ್ಷ ರಾಹುಲ್ ಗಾಂಧಿಯವರ ಮಾರ್ಗದರ್ಶನದಂತೆ ನನ್ನ ಜವಾಬ್ದಾರಿಯನ್ನು ನಿರ್ವಹಿಸಿದ್ದೇನೆ ಅಷ್ಟೇ. ಹೀಗಾಗಿ ಬಿಎಸ್ವೈ ನನ್ನನ್ನು ‘ಖಳನಾಯಕ’ನೆಂದು ಹೇಳಿದ ಪದವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಬಳಿಕ ಮಾತು ಮುಂದುವರಿಸಿದ ಬಿಎಸ್ವೈ, ‘ಮುಂದಿನ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿರುವ ನಿಮ್ಮನ್ನು ನಾನು ಖಳನಾಯಕ ಅಂತ ಹೇಳ್ತೀನಾ? ಅಷ್ಟೇ ಅಲ್ಲದೆ, ನೀವು ಅಲ್ಲಿದ್ದರೆ (ಮೈತ್ರಿ ಸರಕಾರ) ಮುಖ್ಯಮಂತ್ರಿ ಆಗ್ತೀರಾ’ ಎಂದು ಶಿವಕುಮಾರ್ ಅವರನ್ನು ಮಾತಿನ ಈಟಿಯಿಂದ ತಿವಿದರು.
‘ನಿಮ್ಮನ್ನು ಇನ್ನು ಕೆಲವೇ ತಿಂಗಳುಗಳಲ್ಲಿ ಕಾಂಗ್ರೆಸ್ ಒಂದು ರಾಷ್ಟ್ರೀಯ ಪಕ್ಷ ಅನ್ನೋ ಹೆಸರನ್ನೇ ಇಲ್ಲದಂತೆ ಈ ಅಪ್ಪ-ಮಕ್ಕಳು ಸೇರಿ ಮಾಡದಿದ್ದರೆ ನೀವು ನನ್ನನ್ನು ಯಡಿಯೂರಪ್ಪಅಂತ ಕರಿಯಬೇಡಿ’ ಎಂದು ಬಿಎಸ್ವೈ ಹಾಸ್ಯದ ಧಾಟಿಯಲ್ಲಿ ಕಾಂಗ್ರೆಸ್ ಸದಸ್ಯರ ಕಾಲೆಳೆದರು.
ಈ ಹಂತದಲ್ಲಿ ಮಧ್ಯೆ ಪ್ರವೇಶಿಸಿದ ನೂತನ ಸ್ಪೀಕರ್ ಕೆ.ಆರ್.ರಮೇಶ್ಕುಮಾರ್, ವನ್ ಮ್ಯಾನ್ ಫುಡ್ ಈಸ್ ಅನದರ್ ಮ್ಯಾನ್ಸ್ ಪಾಯಿಸನ್ ಎಂಬಂತೆ, ಅವರಿಗೆ ನೀವು ಖಳನಾಯಕನಾದರೆ, ಕೆಲವರಿಗೆ ಹೀರೋ ಆಗಿದ್ದೀರಿ. ಆದರೆ, ಎಲ್ಲರಿಗೂ ಹೀರೋ ಆಗಲು ಸಾಧ್ಯವಿಲ್ಲ ಎಂದು ಪ್ರತಿಕ್ರಿಯಿಸಿದ್ದು ಇಡೀ ಸದನವನ್ನು ಕ್ಷಣಕಾಲ ಹಾಸ್ಯದ ಹೊಳೆಯಲ್ಲಿ ತೇಲಿಸಿತು.







