ಕಾರ್ಕಳ ತಾಲೂಕಿನಾದ್ಯಂತ ಗಾಳಿ-ಮಳೆ, ಸಿಡಿಲಿಗೆ ಅಪಾರ ಹಾನಿ
ಕಾರ್ಕಳ, ಮೇ 26: ಶುಕ್ರವಾರ ರಾತ್ರಿ ಕಾರ್ಕಳ ತಾಲೂಕಿನಾದ್ಯಂತ ಬೀಸಿದ ಬಿರುಗಾಳಿ, ಮಳೆ ಹಾಗೂ ಸಿಡಿಲಿಗೆ ಅಪಾರ ಪ್ರಮಾಣದ ಹಾನಿ ಸಂಭವಿಸಿದ ಬಗ್ಗೆ ಇಲ್ಲಿನ ತಾಲೂಕು ಕಚೇರಿಗೆ ವರದಿಗಳು ಬಂದಿವೆ.
ಅಂಡಾರು ಗ್ರಾಮದಲ್ಲಿ ಬೀಸಿದ ಬಿರುಗಾಳಿಗೆ ಅನೇಕ ತೋಟಗಳು ನಷ್ಟ ಅನುಭವಿಸಿವೆ. ರಬ್ಬರ್, ಅಡಿಕೆ ಸೇರಿದಂತೆ ನೂರಾರು ಮರಗಳು ಗಾಳಿಗೆ ಧರಾಶಾಹಿಯಾಗಿವೆ. ಒಟ್ಟಾರೆಯಾಗಿ ತಾಲೂಕಿನಲ್ಲಿ ಲಕ್ಷಾಂತರ ರೂ. ವೌಲ್ಯದ ಸೊತ್ತುಗಳು ಹಾನಿಗೊಂಡಿರುವ ಬಗ್ಗೆ ವರದಿಯಾಗಿದೆ.
ರಾತ್ರಿ ಎರಡು ಗಂಟೆ ಸುಮಾರಿಗೆ ಬೀಸಿದ ಬಿರುಗಾಳಿಗೆ ಅಂಡಾರು ಗ್ರಾಮದ ಟೋನಿ ಎಂಬವರ ರಬ್ಬರ್ ತೋಟಕ್ಕೆ ಭಾಗಶ: ಹಾನಿಯಾಗಿದ್ದು 15,000ರೂ. ಗಳ ನಷ್ಟದ ಅಂದಾಜು ಮಾಡಲಾಗಿದೆ. ಅದೇ ಸಮಯದಲ್ಲಿ ಗ್ರಾಮದಲ್ಲಿ ಬೀಸಿದ ಗಾಳಿಗೆ ಪ್ರಕಾಶ್ ನಾಯಕ್ ಎಂಬವರ ರಬ್ಬರ್ ತೋಟಕ್ಕೆ 20,000ರೂ., ಪ್ರದೀಪ್ ಶೆಟ್ಟಿ ಎಂಬವರ ಅಡಿಕೆ ತೋಟಕ್ಕೆ 6000ರೂ., ಬಾಲಕೃಷ್ಣ ನಾಯಕ್ರ ಅಡಿಕೆ ತೋಟಕ್ಕೆ 15,000ರೂ., ಅಂಡಾರು ಮುಟ್ಲುಪಾಡಿಯ ವಿಠಲ ಶೆಟ್ಟಿಗಾರ್ರ ಮನೆ ಮತ್ತು ಅಡಿಕೆ ತೋಟಕ್ಕೆ 70,000ರೂ. ಕಡ್ತಲ ಗ್ರಾಮದಲ್ಲಿ ರಬ್ಬರ್ ಮತ್ತು ಅಡಿಕೆ ತೋಟಕ್ಕೆ 15,000ರೂ., ಅಂಡಾರು ಗುಳೇಬೆಟ್ಟು ರಾಜು ಶೆಟ್ಟಿ ಎಂಬವರ ಮನೆ ಮತ್ತು ಅಡಿಕೆ ತೋಟಕ್ಕೆ 7000ರೂ.ಗಳ ನಷ್ಟ ಸಂಭವಿಸಿದೆ ಎಂದು ಇಲ್ಲಿಗೆ ಬಂದಿರುವ ವರದಿಗಳು ತಿಳಿಸಿವೆ.
ಸಿಡಿಲಿನಿಂದ ಹಾನಿ: ಮರ್ಣೆ ಗ್ರಾಮದ ನಾಗರಾಜ ಹೆಗ್ಡೆ ಎಂಬವರ ವಾಸ್ತವ್ಯದ ಮನೆಗೆ ರಾತ್ರಿ ಒಂದು ಗಂಟೆ ಸುಮಾರಿಗೆ ಸಿಡಿಲು ಬಡಿದು ಮನೆಯ ಗೋಡೆ ಬಿರುಕು ಬಿಟ್ಟಿದ್ದು, ವಿದ್ಯುತ್ ಉಪಕರಣಗಳೆಲ್ಲವೂ ನಾಶವಾಗಿವೆ. ಇದರಿಂದ 35,000ರೂ. ನಷ್ಟದ ಅಂದಾಜು ಮಾಡಲಾಗಿದೆ. ಇನ್ನು ಕಾಂತಾವರ ಗ್ರಾಮ ಬಾರಾಡಿಯ ಮಂಜಪ್ಪ ಪರವ ಎಂಬವರ ಮನೆಗೆ ಸಿಡಿಲು ಬಡಿದು ಭಾಗಶ: ಹಾನಿಯಾಗಿದ್ದು 35,000ರೂ.ನಷ್ಟ ಸಂಭವಿಸಿದೆ.
ಕಡ್ತಲ ಗ್ರಾಮದ ಶಂಕರ ಎಂಬವರ ಮನೆಯ ಶೌಚಾಲಯದ ಮೇಲೆ ವಿದ್ಯುತ್ ಕಂಬ ಬಿದ್ದು 6,000ರೂ. ನಷ್ಟವಾಗಿದೆ. ಮೂಡಾರು ಗ್ರಾಮದ ಕೊರಗ ಆಚಾರಿ ಎಂಬವರ ಮನೆ ರಾತ್ರಿಯ ಗಾಳಿ-ಮಳೆಗೆ ಭಾಗಶ: ಹಾನಿ ಗೊಂಡಿದ್ದು 6,000ರೂ. ನಷ್ಟವಾಗಿದೆ.
ಅಂಡಾರು ಗ್ರಾಮದ ಈಶ್ವರ ಶೆಟ್ಟಿಗಾರ್ ಎಂಬವರ ಮನೆಯ ಮೇಲೆ ಮರಬಿದ್ದು 5000ರೂ., ಅಂಡಾರು ಗ್ರಾಮದ ಸೊಂದಲ್ಕೆಯ ಅಚ್ಯುತ ಆಚಾರ್ ಎಂಬವರ ವಾಸದ ಮನೆಗೆ ಮೇಲೆ ತೆಂಗಿನ ಮರ ಬಿದ್ದು ಭಾಗಶ: ಹಾನಿಯಾಗಿದ್ದು 70,000ರೂ. ನಷ್ಟದ ಅಂದಾಜು ಮಾಡಲಾಗಿದೆ. ಅಂಡಾರು ರಾಮಗುಡ್ಡೆಯ ಸುಂದರ ಆಚಾರ್ಯರ ಮನೆಗೆ ಮಳೆಯಿಂದ 15,000ರೂ. ನಷ್ಚವಾಗಿದೆ.
ಬೆಳ್ಮಣ್ಣು ಗ್ರಾಮದ ವಿಜಯ ಬ್ಯಾಂಕ್ ಬಳಿ ಇರುವ ಯೋಗೇಶ್ ಆಚಾರ್ಯರ ರಾಜೇಶ್ವರಿ ನಿಲಯದ ಮೇಲೆ ಮರ ಬಿದ್ದು 45,000ರೂ., ಮರ್ಣೆ ಗ್ರಾಮ ಕೊಂಬುಗುಡ್ಡೆಯ ಕೃಷ್ಣಮೂರ್ತಿ ಎಂಬವರ ಮನೆಯ ಮೇಲೆ ತೆಂಗಿನಮರ ಬಿದ್ದು 15,000ರೂ., ಕಲ್ಯ ಗ್ರಾಮದ ಕಮಲ ಪೂಜಾರ್ತಿ ಅವರ ವಾಸದ ಮನೆಯ ಮೇಲ್ಚಾವಣಿ ಗಾಳಿಗೆ ಹಾರಿಹೋಗಿದ್ದು 40,000ರೂ. ನಷ್ಟ ಸಂಭವಿಸಿದೆ ಎಂದು ಕಾರ್ಕಳ ತಾಲೂಕು ಕಚೇರಿಗೆ ಬಂದಿರುವ ಮಾಹಿತಿ ತಿಳಿಸಿದೆ.
ಮಳೆ ಪ್ರಮಾಣ: ಉಡುಪಿಯಲ್ಲಿ ಇಂದು ಬೆಳಗ್ಗೆ 8:00ಗಂಟೆಗೆ ಮುಕ್ತಾಯ ಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಉಡುಪಿಯಲ್ಲಿ 9.6ಮಿ.ಮೀ., ಕಾರ್ಕಳ ದಲ್ಲಿ 21.9ಮಿ.ಮೀ. ಹಾಗೂ ಕುಂದಾಪುರದಲ್ಲಿ 1.00ಮಿ.ಮೀ. ಮಳೆಯಾಗಿದೆ.







