ಮತಗಟ್ಟೆ ಖರ್ಚಿಗೆ ಗ್ರಾಪಂ ಹಣ; ಕೋಟ ಆಕ್ಷೇಪ
ಉಡುಪಿ, ಮೇ 26: ಕಳೆದ ವಿಧಾನಸಭೆ ಚುನಾವಣೆಯ ವೇಳೆ ಮತಗಟ್ಟೆ ಯಾಗಿ ಘೋಷಿಸಿರುವ ಸರಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯ ಒದಗಿಸುವ ಬಗ್ಗೆ ಉಡುಪಿ ಜಿಲ್ಲಾಧಿಕಾರಿಗಳು ಜಿಲ್ಲೆಯ ಗ್ರಾಪಂಗಳಿಗೆ ಖರ್ಚು- ವೆಚ್ಚ ಮಾಡಲು ಆದೇಶಿಸಿರುವುದಕ್ಕೆ ರಾಜ್ಯ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಪಂಚಾಯತ್ರಾಜ್ ಕಾಯಿದೆಯ ಪ್ರಕರಣ 214ರಂತೆ ಗ್ರಾಪಂ ಗಳು ಯಾವುದೇಖರ್ಚು ವೆಚ್ಚಗಳನ್ನು ಮಾಡುವ ಮೊದಲು ಆಯವ್ಯಯದಲ್ಲಿ ಕಾದಿರಿಸಿಕೊಂಡು ಖರ್ಚು ವೆಚ್ಚಗಳನ್ನು ಮಾಡುವುದು ನಿಯಮ. ಉಡುಪಿ ಜಿಲ್ಲೆಯ ಹಲವಾರು ಗ್ರಾಪಂಗಳಲ್ಲಿ ವಿಧಾನಸಭಾ-2018ರ ಚುನಾವಣೆಯ ಸಲುವಾಗಿ ಮತಗಟ್ಟೆಗಳಲ್ಲಿ ಕುಡಿಯುವ ನೀರು, ಪೀಠೋಪಕರಣ, ಅಂಗವಿಕಲ ರಿಗೆ ಗಾಲಿಕುರ್ಚಿ ಹೀಗೆ ಅನೇಕ ಮೂಲ ಸೌಕರ್ಯಗಳನ್ನು ಗ್ರಾಪಂ ನಿಧಿ ಯಿಂದ ಭರಿಸಲಾಗಿದೆ ಎಂದವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ ಸರಕಾರದ ಆದೇಶ ಸಂಖ್ಯೆ: ಇಡಿ52ಯೋಸಕ 2018 ಬೆಂಗಳೂರು, ದಿನಾಂಕ:21.02.2018, ಮತ್ತು ಆಯುಕ್ತರು ಸಾರ್ವಜನಿಕ ಶಿಕ್ಷಣ ಇಲಾಖೆ, ಇವರ ಕಚೇರಿ ಪತ್ರ ಸಂಖ್ಯೆ: ಯೋ11/ಸ.ಶಾ.ತುರ್ತು.ದು/01/2017-18 ಬೆಂಗಳೂರು, ದಿನಾಂಕ:22.02.2018, ಅದರಂತೆ ಸರಕಾರ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯು ಜಿಲ್ಲಾಧಿಕಾರಿಗಳಿಗೆ ಅನುದಾನವನ್ನು ಬಿಡುಗಡೆಗೊಳಿಸಲಾಗಿತ್ತು.
ಅದೇ ರೀತಿ ಗ್ರಾಪಂ ವ್ಯಾಪ್ತಿಯಲ್ಲಿರುವ ಸರಕಾರಿ ಶಾಲೆಗಳಿಗೆ ಮೂಲಭೂತ ಸೌರ್ಕಯಗಳನ್ನು ಒದಗಿಸಲು ಒಟ್ಟು 202 ಕೋಟಿ ರೂ.ಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆಗೆ ಸರಕಾರ ಬಿಡುಗಡೆಗೊಳಿಸಿತ್ತು. ಅದರಂತೆ 30 ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಡಿ-ಮೋಡ್ ಮೂಲಕ ಬಿಡುಗಡೆಗೊಳಿಸಲಾಗಿತ್ತು. ಇದರಂತೆ ಉಡುಪಿ ಜಿಲ್ಲೆಗೆ 4.50 ಕೋಟಿ ರೂ. ಬಿಡುಗಡೆಗೊಳಿಸಲಾಗಿತ್ತು. ಆದುದರಿಂದ ಗ್ರಾಪಂಗಳು ಭರಿಸಿದ ವೆಚ್ಚವನ್ನು ಗ್ರಾಪಂಗಳ ನಿಧಿಗೆ ವರ್ಗಾಯಿ ಸುವಂತೆ ಕೋಟ ಶ್ರೀನಿವಾಸ ಪೂಜಾರಿ ಅವರು ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.







