ಶ್ರೀಲಂಕಾದಲ್ಲಿ ಮಳೆ, ಬಿರುಗಾಳಿಯ ಆರ್ಭಟ
ಕನಿಷ್ಠ 16 ಮಂದಿ ಬಲಿ, 1 ಲಕ್ಷಕ್ಕೂ ಅಧಿಕ ಮಂದಿ ಸಂತ್ರಸ್ತರು
ಕೊಲಂಬೊ, ಮೇ 26: ಶ್ರೀಲಂಕಾದಲ್ಲಿ ಕಳೆದ ಒಂದು ವಾರದಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆ ಹಾಗೂ ಬಲವಾಗಿ ಬೀಸುತ್ತಿರುವ ಬಿರುಗಾಳಿಯ ಹಾವಳಿಗೆ ಕನಿಷ್ಠ 16 ಮಂದಿ ಮೃತಪಟ್ಟಿದ್ದಾರೆ ಹಾಗೂ ಒಂದು ಲಕ್ಷಕ್ಕೂ ಅಧಿಕ ಮಂದಿ ಸಂತ್ರಸ್ತರಾಗಿದ್ದಾರೆ. ಪ್ರವಾಹಪೀಡಿತ ಪ್ರದೇಶಗಳಲ್ಲಿ ಸಂತ್ರಸ್ತರ ರಕ್ಷಣೆ ಹಾಗೂ ಪರಿಹಾರ ಕಾರ್ಯಾಚರಣೆಗೆ ಸೇನೆಯನ್ನು ನಿಯೋಜಿಸಲಾಗಿದೆ.
ಶ್ರೀಲಂಕಾದ 25 ಜಿಲ್ಲೆಗಳ ಪೈಕಿ 20 ಮಳೆ ಹಾಗೂ ಬಿರುಗಾಳಿಯ ಆರ್ಭಟಕ್ಕೆ ತತ್ತರಿಸಿವೆ. ಈ ಪೈಕಿ ಕಿಗಾಲೆ, ಕಲುತಾರಾ, ಗಾಲೆ, ರತ್ನಪುರ ಹಾಗೂ ನುವಾರಾ ಎಲಿಯಾ ಸೇರಿದಂತೆ ಐದು ಜಿಲ್ಲೆಯಲ್ಲಿ ಭಾರೀ ಭೂಕುಸಿತದ ಭೀತಿಯುಂಟಾಗಿದ್ದು, ಅಲ್ಲೆಲ್ಲಾ ಕಟ್ಟೆಚ್ಚರವನ್ನು ಘೋಷಿಸಲಾಗಿದೆ.
ಮಳೆ ಹಾಗೂ ಬಿರುಗಾಳಿಯ ಆಟಾಟೋಪಕ್ಕೆ ಶ್ರೀಲಂಕಾದ 20 ಜಿಲ್ಲೆಗಳ 1.30 ಲಕ್ಷ ಮಂದಿ ಸಂತ್ರಸ್ತರಾಗಿದ್ದಾರೆಂದು ವಿಪತ್ತು ನಿರ್ವಹಣಾ ಇಲಾಖೆಯು ಹೇಳಿಕೆಯೊಂದರಲ್ಲಿ ತಿಳಿಸಿದೆ. 10 ಜಿಲ್ಲೆಗಳಲ್ಲಿ ಪ್ರವಾಹ ಹಾಗೂ ಭೂಕುಸಿತದ ಆಪಾಯದ ಹಿನ್ನೆಲೆಯಲ್ಲಿ 13 ಸಾವಿರಕ್ಕೂ ಅಧಿಕ ಕುಟುಂಬಗಳನ್ನು ಸ್ಥಳಾಂತರಿಸಲಾಗಿದ್ದು, ಅವರಿಗಾಗಿ 231 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆಯೆಂದು ಮೂಲಗಳು ತಿಲಿಸಿವೆ.