ಉಡುಪಿಯಲ್ಲಿ ಬಂದ್ ಸಂಪೂರ್ಣ ವಿಫಲ: ಜನತೆಗೆ ಸಿಪಿಎಂ ಅಭಿನಂದನೆ
ಉಡುಪಿ, ಮೇ 28: ಪೂರ್ಣ ಪ್ರಮಾಣದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರವು ಅಸ್ತಿತ್ವಕ್ಕೆ ಬರುವ ಮೊದಲೇ ಕರ್ನಾಟಕ ಬಂದ್ಗೆ ಬಿಜೆಪಿ ಕರೆ ನೀಡಿದ್ದು, ಇದನ್ನು ತಿರಸ್ಕರಿಸಿ ಬಂದ್ನ್ನು ಸಂಪೂರ್ಣ ವಿಫಲಗೊಳಿಸಿರುವ ಉಡುಪಿ ಜಿಲ್ಲೆಯ ಜನತೆಗೆ ಸಿಪಿಐಎಂ ಉಡುಪಿ ಜಿಲ್ಲಾ ಸಮಿತಿ ಅಭಿನಂದನೆ ಸಲ್ಲಿಸಿದೆ.
ರೈತರ ಸಾಲ ಮನ್ನಾ ಮಾಡುವುದು ಅಗತ್ಯವಿದೆ. ಆದರೆ ಅದಕ್ಕೆ ಕಾಲಾವಕಾಶ ನೀಡಬೇಕು. ದೊಡ್ಡ ಉದ್ದಿಮೆದಾರರ 3ಲಕ್ಷ ಕೋಟಿ ರೂ.ಗೂ ಹೆಚ್ಚು ಹಣವನ್ನು ರೈಟ್ ಆಫ್ ಹೆಸರಲ್ಲಿ ಮನ್ನಾ ಮಾಡಲಾಗಿದೆ. ಇದರಲ್ಲಿ ಕೇಂದ್ರ ಸರಕಾರದ ಪಾತ್ರವಿದೆ. ಆದರೆ ರೈತರ ಸಾಲಗಳನ್ನು ಕೇಂದ್ರ ಸರಕಾರ ಮನ್ನಾ ಮಾಡಿಲ್ಲ ಎಂದು ಸಿಪಿಎಂ ಆರೋಪಿಸಿದೆ.
ಯಡಿಯೂರಪ್ಪ ಕೇಂದ್ರ ಸರಕಾರದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರುದ್ಧ, ರೈತರ ಸಾಲ ಮನ್ನಾ ಮಾಡಲು, ಕಪ್ಪು ಹಣದಿಂದ ಪ್ರತಿಯೊಬ್ಬರ ಖಾತೆಗೆ 15ಲಕ್ಷ ರೂ. ಜಮಾ ಮಾಡುವುದಾಗಿ ಹೇಳಿದ ವಾಗ್ದಾನವನ್ನು ಜಾರಿ ಮಾಡಲು ಒತ್ತಾಯಿಸಬೇಕೆಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.





