ಆವರಣಗೋಡೆ ಕುಸಿತ: ಮಹಿಳೆ ಮಣ್ಣಿನಡಿ ಸಿಲುಕಿದ ಶಂಕೆ; ಮುಂದುವರಿದ ರಕ್ಷಣಾ ಕಾರ್ಯಾಚರಣೆ

ಮಂಗಳೂರು, ಮೇ 29: ನಗರದ ಕೆಪಿಟಿ ಉದಯನಗರ ಬಳಿ ಮನೆಯೊಂದರ ಹಿಂಬದಿಯ ಆವರಣಗೋಡೆ ಕುಸಿದು, ಮಹಿಳೆಯೊಬ್ಬರು ಸಿಲುಕಿಕೊಂಡಿರು ವುದಾಗಿ ಹೇಳಲಾಗಿದೆ.
ಉದಯನಗರದ ನಿವಾಸಿ ಕಮಲಾಕ್ಷ ಅವರ ಪತ್ನಿ 60ರ ಹರೆಯದ ಮೋಹಿನಿ ಎಂದು ಗುರುತಿಸಲಾಗಿದ್ದು, ಅಗ್ನಿಶಾಮಕದ ದಳದಿಂದ ಮಣ್ಣು ತೆರವುಗೊಳಿಸುವ ಕಾರ್ಯಾಚರಣೆ ಮುಂದುವರಿದಿದೆ.
ಮೋಹಿನಿ ಅವರು ಎಂಟು ವರ್ಷಗಳ ಹಿಂದೆ ಹೃದಯ ಶಸ್ತ್ರಚಿಕಿತ್ಸೆಗೊಳಗಾಗಿದ್ದರಿಂದ ಇಳಿಜಾರು ಪ್ರದೇಶದ ತಮ್ಮ ಮನೆಯಲ್ಲಿ ವಾಸಿಸುವುದನ್ನು ಬಿಟ್ಟು ಸನಿಹದಲ್ಲೇ, ತುಸು ಕೆಳಭಾಗದಲ್ಲಿದ್ದ ತಮ್ಮ ಅಣ್ಣನ ಮನೆಯಲ್ಲಿ ವಾಸಿಸುತ್ತಿದ್ದರು. ಅಪರೂಪಕ್ಕೊಮ್ಮೆ ಮಾತ್ರ ತಮ್ಮ ಸ್ವಂತ ಮನೆಗೆ ಹೋಗುತ್ತಿದ್ದರು. ಮಂಗಳವಾರ ಬೆಳಗ್ಗಿನಿಂದಲೇ ಸುರಿಯುತ್ತಿದ್ದ ಭಾರೀ ಮಳೆಯ ಕಾರಣ, ಪರಿಶೀಲನೆಗೆಂದು ಬಂದಿದ್ದ ವೇಳೆ ಆವರಣಗೋಡೆ ಕುಸಿದು ಈ ದುರುಂತ ಸಂಭವಿಸಿರುವುದಾಗಿ ತಿಳಿದುಬಂದಿದೆ.
ಮೋಹಿನಿ ಹಾಗೂ ಅವರ ಪತಿ ಕಮಲಾಕ್ಷ ಹಾಗೂ ತಂಗಿ ಗಿರಿಜಾಕ್ಷಿ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ಹೃದಯ ಶಸ್ತ್ರ ಚಿಕಿತ್ಸೆಯ ಬಳಿಕ ಮೋಹಿನಿ ತನ್ನ ಅಣ್ಣನ ಮನೆಯಲ್ಲಿ ವಾಸಿಸುತ್ತಿದ್ದರಾದರೂ ಆಗಾಗ ಘಟನೆ ನಡೆದ ಮನೆಗೆ ಬರುತ್ತಿದ್ದರು. ಜೀವನೋಪಾಯಕ್ಕಾಗಿ ಅವರು ಬೀಡಿ ಕಟ್ಟುವ ಕೆಲಸ ಮಾಡುತ್ತಿದ್ದರು.
ಘಟನೆಗೆ ಸಾಕ್ಷಿಯಾಗಿದ್ದ ಮೋಹಿನಿ ಅವರ ತಂಗಿ ಗಿರಿಜಾಕ್ಷಿ ಕಣ್ಣೀರು ಸುರಿಸುತ್ತಾ, ‘‘ಮಳೆ ನೀರು ಶೌಚಾಲಯಕ್ಕೆ ನುಗ್ಗಿರುವುದನ್ನು ಕಂಡು ನಾವಿಬ್ಬರು, ಅದನ್ನು ತಡೆಯುವ ಕೆಲಸ ಮಾಡಿದೆವು. ನಾನಿದ್ದ ಜಾಗದಲ್ಲೇ ಅಕ್ಕ ನಿಂತಿದ್ದಳು. ಮಳೆ ತೀವ್ರವಾಗುತ್ತಿದ್ದುದನ್ನು ಗಮನಿಸಿ ಅಕ್ಕಳನ್ನು ಒಳ ಕರೆದು ನಾನೂ ಒಳಕ್ಕೆ ಹೋದೆ. ಆದರೆ,ಅಕ್ಕ ಮಾತ್ರ ಅಲ್ಲೇ ನಿಂತಿದ್ದು, ಕುಸಿದ ಮಣ್ಣಿನಡಿ ಸಿಲುಕಿದ್ದಾರೆ’’ ಎಂದು ಹೇಳುತ್ತಾರೆ.
ಮಳೆ ನೀರು ಹರಿದು ಹೋಗಲು ಸರಿಯಾದ ಚರಂಡಿ ವ್ಯವಸ್ಥೆ ಇರಲಿಲ್ಲ
ಮಳೆ ನೀರು ಸರಾಗವಾಗಿ ಹರಿದು ಹೋಗಲು ಸರಿಯಾದ ಚರಂಡಿ ವ್ಯವಸ್ಥೆ ಇರಲಿಲ್ಲ. ಹೀಗಾಗಿ, ಆವರಣ ಗೋಡೆ ಕುಸಿದಿದೆ. ಈ ಬಗ್ಗೆ ಮಹಾನಗರ ಪಾಲಿಕೆಗೆ ಹಲವು ಬಾರಿ ದೂರಿತ್ತರೂ ಸೂಕ್ತ ಚರಂಡಿ ವ್ಯವಸ್ಥೆ ಆಗಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.