ಮಳೆಯಿಂದ ತೊಯ್ದ ಮಂಗಳೂರಿಗರ ಮನೆಬಾಗಿಲಿಗೆ ಔಷಧಿ ತಲುಪಿಸಿದ 'ಟೀಮ್ ಹೆಲ್ತ್ ಇ '

ಮಂಗಳೂರು, ಮೇ 29: ಧಾರಾಕಾರ ಮಳೆಯಿಂದ ಮಂಗಳವಾರ ಪ್ರವಾಹ ಪೀಡಿತ ಪ್ರದೇಶದಂತಾಗಿದ್ದ ಮಂಗಳೂರಿನಲ್ಲಿ ಕೆಲವು ಯುವಕರ ಮಾನವೀಯ ನೆರವು ಸಂಕಷ್ಟದಲ್ಲಿರುವವರ ಪಾಲಿನ ಆಸರೆಯಾಗಿದೆ.
'ಟೀಮ್ ಹೆಲ್ತ್ ಇ ' ಹೆಸರಿನ ಈ ಯುವಕರ ಗುಂಪು ಭಾರೀ ಮಳೆಯಿಂದಾಗಿ ತುರ್ತು ಔಷಧಗಳನ್ನು ತರಲು ಸಾಧ್ಯವಾಗದವರಿಗೆ ಔಷಧ ಖರೀದಿಸಿ ಅವರ ಮನೆಗೆ ತಲುಪಿಸುವ ಮೂಲಕ ನೆರವು ನೀಡಿದೆ. ಇದಕ್ಕಾಗಿ ಮನೆಯವರು ಕೊಡಬೇಕಾದ್ದು ಔಷಧಕ್ಕೆ ತಗಲುವ ವೆಚ್ಚ ಮಾತ್ರ.
ಯುವ ಉದ್ಯಮಿ ನೀರಜ್ ಭಂಡಾರಿ ಮತ್ತು ಅವರ ಐವರು ಮಿತ್ರರ ತಂಡ 'ಟೀಮ್ ಹೆಲ್ತ್ ಇ' ಹೆಸರಲ್ಲಿ ಸ್ವಯಂಪ್ರೇರಿತರಾಗಿ ಈ ಮಾನವೀಯ ಸೇವೆ ಸಲ್ಲಿಸಲು ಮುಂದಾದರು. ಈ ಬಗ್ಗೆ ವಾಟ್ಸ್ಆ್ಯಪ್ ಹಾಗು ಇತರ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಕಳುಹಿಸಿದರು.
" ನಾವು ಆನ್ ಲೈನ್ ಮೂಲಕ ಔಷಧ ಮಾರಾಟ ಮಾಡುವ ಹೊಸ ಸ್ಟಾರ್ಟ್ ಅಪ್ ಒಂದನ್ನು ಪ್ರಾರಂಭಿಸುವ ತಯಾರಿಯಲ್ಲಿದ್ದೇವೆ. ಆದರೆ ಮಂಗಳವಾರದ ಮಳೆಯಿಂದಾದ ಅವಾಂತರ ನೋಡಿ ಬಹಳಷ್ಟು ಜನರು ತಮಗೆ ತುರ್ತಾಗಿ ತೆಗೆದುಕೊಳ್ಳಬೇಕಾದ ಔಷಧಿ ಸಿಗದೆ ಪರದಾಡುತ್ತಿರಬಹುದು ಎಂಬ ಯೋಚನೆ ಬಂತು. ಹಾಗಾಗಿ ಯಾವುದೇ ಲಾಭದ ಉದ್ದೇಶ ಇಡದೆ ಮಾನವೀಯ ನೆಲೆಯಲ್ಲಿ ನಮ್ಮಿಂದಾಗುವ ಸಹಾಯ ಮಾಡೋಣ ಎಂದು ಹೊರಟೆವು. ಕೆಲವರು ಕಾಲ್ ಮಾಡಿ ನಮ್ಮ ಸೇವೆಯ ಪ್ರಯೋಜನ ಪಡೆದಿದ್ದಾರೆ " ಎಂದು ನೀರಜ್ ಭಂಡಾರಿ 'ವಾರ್ತಾಭಾರತಿ'ಗೆ ತಿಳಿಸಿದರು.