ಉದ್ಯಾವರ: ನೂರಾರು ಮರಗಳು ಧರೆಗೆ, 35ಕ್ಕೂ ಅಧಿಕ ಮನೆಗಳಿಗೆ ಹಾನಿ
ಐವರಿಗೆ ಗಾಯ, ಏಳು ವಾಹನಗಳು ಜಖಂ, 14ಲಕ್ಷ ರೂ. ನಷ್ಟ

ಉಡುಪಿ, ಮೇ 29: ಕಳೆದ ರಾತ್ರಿ ಸುರಿದ ಭಾರೀ ಮಳೆಗಾಳಿಗೆ ಉದ್ಯಾವರ ಗ್ರಾಪಂ ವ್ಯಾಪ್ತಿಯಲ್ಲಿ ನೂರಾರು ಮರಗಳು ಧರೆಗೆ ಉರುಳಿದ್ದು, 35ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿ, 14ಲಕ್ಷ ರೂ. ನಷ್ಟ ಉಂಟಾಗಿದೆ. ಮಕ್ಕಳು ಸಹಿತ ಐದು ಮಂದಿಗೆ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.
ಉದ್ಯಾವರ ಬಿಲ್ಲವ ಸಂಘದ ಹಿಂಬದಿಯ ಜಲಜ ಪೂಜಾರ್ತಿ ಎಂಬವರ ಮನೆಯ ಮೇಲೆ ಮರ ಬಿದ್ದ ಪರಿಣಾಮ ಹೆಂಚು ತಾಗಿ ಮನೆಯೊಳಗೆ ಇದ್ದ ಪ್ರಜ್ವಲ್ ಹಾಗೂ ವೃದ್ಧೆಯೊಬ್ಬರು ಗಾಯಗೊಂಡಿದ್ದಾರೆ. ಅದೇ ರೀತಿ ಶಂಭು ಕಲ್ಲು ದೇವಸ್ಥಾನದ ಬಳಿ ಎರಡು ಮನೆಗಳ ಮೇಲೆ ಮರ ಬಿದ್ದು ಮೂವರು ಮಕ್ಕಳು ಗಾಯಗೊಂಡಿರುವ ಬಗ್ಗೆ ಮೂಲಗಳು ತಿಳಿಸಿವೆ.
ಉದ್ಯಾವರ ಮಸೀದಿಯ ಖಬರಸ್ಥಾನ, ಉದ್ಯಾವರ ಗಣಪತಿ ದೇವಸ್ಥಾನ ಬಳಿಯೂ ಮರ ಬಿದ್ದಿರುವುದು ವರದಿಯಾಗಿದೆ. ಗ್ರಾಪಂ ಕಚೇರಿ ಬಳಿ ಇರುವ ಸುಧಾಕರ್ ಕೋಟ್ಯಾನ್ ಎಂಬವರ ಮರದ ಡಿಪೊ ಅಂಗಡಿಯ ಮೇಲೆ ಮರ ಬಿದ್ದು ಹಾನಿಯಾಗಿದೆ. ಮರ ಬಿದ್ದು ಸಂಪಿಗೆನಗರದಲ್ಲಿ ಆದಿಲ್ ಪಳ್ಳಿ ಎಂಬವರ ಹಲಾಲ್ ಚಿಕನ್ ಸ್ಟಾಲ್ನ ಟೆಂಪೊ, ಮೇಲ್ಪೇಟೆ ಹಾಗೂ ಬೋಳಾರುಗುಡ್ಡೆ ಯಲ್ಲಿ ಒಂದು ಕಾರು, ನಾಲ್ಕೈದು ಬೈಕ್ಗಳಿಗೆ ಹಾನಿಯಾಗಿದೆ.
ರಸ್ತೆ ಸಂಚಾರಕ್ಕೆ ಅಡ್ಡಿ: ಉದ್ಯಾವರ ಪೇಟೆಯ ಕಾಮತ್ ಹೊಟೇಲ್ ಬಳಿಯ ನೂರಾರು ವರ್ಷ ಹಳೆಯ ಅಶ್ವಥ ಮರ ರಸ್ತೆ ಹಾಗೂ ಕಟ್ಟಡದ ಮೇಲೆ ಬಿದ್ದು ಹಾನಿ ಉಂಟಾಗಿದೆ. ಉದ್ಯಾವರ ಮೇಲ್ಪೇಟೆ ಶಂಭುಕಲ್ಲು ದೇವಸ್ಥಾನ, ಪಿತ್ರೋಡಿ, ಬೋಳಾರುಗುಡ್ಡೆ, ಸಂಪಿಗೆನಗರ, ಉದ್ಯಾವರ ಗುಡ್ಡೆಯಂಗಡಿ ಕೊರಂಗ್ರಪಾಡಿ ರಸ್ತೆಗೆ ಮರ ಬಿದ್ದು ಸಂಚಾರಕ್ಕೆ ಅಡ್ಡಿಯಾಗಿತ್ತು.
ಗ್ರಾಪಂನಿಂದ ನಿಯೋಜಿಸಲಾದ 20 ಮಂದಿ ಕಾರ್ಮಿಕರು, ಅರಣ್ಯ ಇಲಾಖೆ ಸಿಬ್ಬಂದಿಗಳು, ಸಾರ್ವಜನಿಕರು ಜೊತೆಗೂಡಿ ಸಂಜೆ ವೇಳೆಗೆ ಮುಖ್ಯ ರಸ್ತೆಗೆ ಬಿದ್ದ ಎಲ್ಲ ಮರಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು. ರಸ್ತೆ ಬಿದ್ದ ಮರಗಳಿಗಂದ ವಾಹನ ಸಂಚಾರ ಸಾಧ್ಯವಾಗದ ಕಾರಣ ಉದ್ಯಾವರ ಪರಿಸರದ ಶಾಲೆಗಳಿಗೆ ಬೆಳಗ್ಗೆಯೇ ರಜೆ ಘೋಷಿಸಲಾಗಿತ್ತು.
ಉದ್ಯಾವರ ಗ್ರಾಪಂ ವ್ಯಾಪ್ತಿಯಲ್ಲಿ 40-50 ವಿದ್ಯುತ್ ಕಂಬಗಳು ಧರೆಗೆ ಉರುಳಿ ಬಿದ್ದಿವೆ. ಇದರಿಂದ ಬೆಳಗ್ಗೆಯಿಂದಲೇ ವಿದ್ಯುತ್ ವ್ಯತ್ಯಯ ಉಂಟಾಗಿ ಇಡೀ ಗ್ರಾಮ ಕತ್ತಲಲ್ಲಿ ಮುಳುಗಿದೆ. ಈಗಾ ಗಲೇ ವಿದ್ಯುತ್ ತಂತಿಗಳ ಮೇಲೆ ಬಿದ್ದ ಮರಗಳನ್ನು ತೆರವು ಮಾಡಲಾಗಿದೆ. ಮೆಸ್ಕಾಂ ಸಿಬ್ಬಂದಿಗಳು ಹಗಲಿರುಳು ದುರಸ್ತಿ ಕಾರ್ಯದಲ್ಲಿ ನಿರತರಾಗಿದ್ದಾರೆ.
ಭಾರಿ ಗಾಳಿಯಿಂದ ಉದ್ಯಾವರ ರಾಷ್ಟ್ರೀಯ ಹೆದ್ದಾರಿ 66ರ ಇಕ್ಕೇಲಗಳಲ್ಲಿ ರುವ ಸುಮಾರು 15ಕ್ಕೂ ಅಧಿಕ ಜಾಹೀರಾತು ಹೊರ್ಡಿಂಗ್ಗಳು ಹಾನಿ ಗೊಂಡಿದ್ದು, ಹೆಚ್ಚಿನವುಗಳು ನೆಲಕ್ಕೆ ಬಿದ್ದಿದೆ. ಉದ್ಯಾವರ ಬಲಾಯಿಪಾದೆಯಲ್ಲಿ ಮನೆ ಹಾಗೂ ವಿದ್ಯುತ್ ಕಂಬದ ಮೇಲೆ ಹೊರ್ಡಿಂಗ್ ಬಿದ್ದು ಹಾನಿ ಸಂಭ ವಿಸಿದೆ.
ಉದ್ಯಾವರಕ್ಕೆ ಡಿಸಿ, ಶಾಸಕರು ಭೇಟಿ
ಭಾರೀ ಗಾಳಿಮಳೆಗೆ ತತ್ತರಿಸಿ ಹೋಗಿರುವ ಉದ್ಯಾವರ ಪ್ರದೇಶಕ್ಕೆ ಇಂದು ಬೆಳಗ್ಗೆ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಭೇಟಿ ನೀಡಿ, ಎಲ್ಲ ಇಲಾಖೆಗಳು ಜೊತೆಗೂಡಿ ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಳ್ಳು ವಂತೆ ಸೂಚನೆ ನೀಡಿದ್ದಾರೆ. ತೆರವುಗೊಳಿಸಿದ ಮರಗಳನ್ನು ಸಾಗಿಸಲು ಅನು ಕೂಲವಾಗುವಂತೆ ಉಡುಪಿ ನಗರಸಭೆಯ ಟಿಪ್ಪರನ್ನು ಉದ್ಯಾವರಕ್ಕೆ ಕಳುಹಿಸಿ ಕೊಡಲಾಗಿದೆ.
ಅದೇ ರೀತಿ ಅಪರ ಜಿಲ್ಲಾಧಿಕಾರಿ ಅನುರಾಧ, ಕಾಪು ಶಾಸಕ ಲಾಲಾಜಿ ಆರ್.ಮೆಂಡನ್, ಜಿಪಂ ಅಧ್ಯಕ್ಷ ದಿನಕರ ಬಾಬು, ಗ್ರಾಪಂ ಅಧ್ಯಕ್ಷೆ ಸುಗಂಧಿ ಶೇಖರ್, ಉಪಾಧ್ಯಕ್ಷ ರಿಯಾಜ್ ಪಳ್ಳಿ ಅನಾಹುತ ಸಂಭವಿಸಿರುವ ಪ್ರದೇಶಗಳಿಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಉದ್ಯಾವರ ಪಂಚಾಯತ್ ಅಧಿಕಾರಿ ರಮಾ ನಂದ ಪುರಾಣಿಕ್ ನಷ್ಟ ಪರಿಹಾರಕ್ಕೆ 35 ಮನೆಗಳ ವರದಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದ್ದಾರೆ.