ಡಾ.ಟಿ.ಎಂ.ಎ.ಪೈ, ಟಿ.ಎ.ಪೈ ಸ್ಮತಿ ದಿನಾಚರಣೆ

ಉಡುಪಿ, ಮೇ 29: ಡಾ.ಟಿ.ಎಂ.ಎ.ಪೈ ಮತ್ತು ಟಿ.ಎ.ಪೈ ಅವರ ಜೀವನದ ದಾರಿಯನ್ನು ಇಂದಿನ ಯುವಜನತೆ ಅನುಸರಿಸಬೇಕಾಗಿದೆ. ಆಗ ಮಾತ್ರ ಅವರ ಸ್ಮತಿ ದಿನಾಚರಣೆಗೆ ಅರ್ಥ ಬರಲು ಸಾಧ್ಯ. ಮುಂದಿನ ಪೀಳಿಗೆಗೆ ಇವರ ಬಗ್ಗೆ ತಿಳಿ ಹೇಳುವ ಕಾರ್ಯ ಮಾಡಬೇಕಾಗಿದೆ ಎಂದು ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್ನ ಆಡಳಿತಾಧಿಕಾರಿ ಡಾ.ಎಚ್. ಶಾಂತಾರಾಮ್ ಹೇಳಿದ್ದಾರೆ.
ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಹಾಗೂ ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್ ಮಣಿಪಾಲ ಇವುಗಳ ಜಂಟಿ ಆಶ್ರಯದಲ್ಲಿ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಲಾದ ಸ್ಮತಿ ದಿನಾಚರಣೆಯಲ್ಲಿ ಅವರು ಡಾ.ಟಿ.ಎಂ.ಎ.ಪೈ ಮತ್ತು ಟಿ.ಎ.ಪೈ ಸಂಸ್ಮರಣೆ ಮಾಡಿದರು.
ಶಿಕ್ಷಣ ಮತ್ತು ಆರೋಗ್ಯದಿಂದ ಬಡತನವನ್ನು ನಿವಾರಣೆ ಮಾಡಬಹುದು ಎಂಬುದನ್ನು ಅರಿತಿದ್ದ ಮಾಧವ ಪೈ, ಅದಕ್ಕಾಗಿ ಮಣಿಪಾಲದಲ್ಲಿ ಶಿಕ್ಷಣ ಸಂಸ್ಥೆ ಹಾಗೂ ಆಸ್ಪತ್ರೆಯನ್ನು ಸ್ಥಾಪಿಸಿದರು. ಊರಿನ ಜನರ ಸಹಕಾರದಿಂದ ಅವರು ಮಣಿಪಾಲವನ್ನು ವಿದ್ಯಾ ಕ್ಷೇತ್ರವಾಗಿ ಬೆಳೆಸಿದರು. ಸಹಕಾರಿ ತತ್ವ ಪ್ರಪ್ರಥಮ ವಾಗಿ ಈ ಪ್ರದೇಶದಲ್ಲಿ ಹುಟ್ಟಿಕೊಂಡಿರುವುದು ಮಾಧವ ಪೈ ಮಾಡಿದಂತಹ ಕೆಲಸದಿಂದ. ಟಿ.ಎ.ಪೈ ಸಮಾಜದ ಏಳಿಗೆಗಾಗಿ ಸಾಕಷ್ಟು ಕೆಲಸ ಮಾಡಿದ್ದರು ಎಂದರು.
ಸಿಂಡಿಕೇಟ್ ಬ್ಯಾಂಕಿನ ಮಣಿಪಾಲ ವಲಯ ಕಚೇರಿಯ ಮಹಾಪ್ರಬಂಧಕ ಭಾಸ್ಕರ ಹಂದೆ ತರಕಾರಿ ಬೀಜವನ್ನು ಬಿಡುಗಡೆ ಮಾಡಿದರು. ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಧನಂಜಯ ತರಕಾರಿ ಬೆಳೆಸುವ ಬಗ್ಗೆ ತಾಂತ್ರಿಕ ಮಾಹಿತಿ ನೀಡಿದರು.
ಭಾರತೀಯ ವಿಕಾಸ ಟ್ರಸ್ಟ್ನ ಆಡಳಿತ ಟ್ರಸ್ಟಿ ಕೆ.ಎಂ.ಉಡುಪ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮನೋಹರ ಕಟ್ಗೇರಿ ಕಾರ್ಯಕ್ರಮ ನಿರೂ ಪಿಸಿದರು.







