ಮಂಗಳೂರು: ಮುಂಗಾರು ಮಳೆಗೆ ಮೊದಲ ಬಲಿ

ಮಂಗಳೂರು, ಮೇ 29: ಮಂಗಳೂರಿನಲ್ಲಿ ಮಂಗಳವಾರ ಬೆಳಗ್ಗೆಯಿಂದ ಸುರಿದ ಭಾರೀ ಮಳೆಗೆ ಮಹಿಳೆಯೋರ್ವರು ಬಲಿಯಾಗಿದ್ದಾರೆ.
ಕೆಪಿಟಿ ಬಳಿಯ ಉದಯನಗರದ ನಿವಾಸಿ ಮೋಹಿಣಿ (60) ಮೃತಪಟ್ಟ ಮಹಿಳೆ. ಇವರು ತನ್ನ ಮನೆಯ ಹಿಂಬದಿಯ ಕಾಂಪೌಂಡ್ ಗೋಡೆ ಕುಸಿದ ಪರಿಣಾಮ ಮಣ್ಣಿನಡಿಗೆ ಸಿಲುಕಿಕೊಂಡಿದ್ದರು.
ಮಂಗಳವಾರ ಬೆಳಗ್ಗೆಯಿಂದ ಧಾರಾಕಾರ ಮಳೆಯಾಗಿದ್ದರಿಂದ ಸುಮಾರು 11 ಗಂಟೆಯ ಹೊತ್ತಿಗೆ ಮೋಹಿಣಿ ಅವರ ಮನೆಯ ಹಿಂಬದಿ ಆವರಣಗೋಡೆ ಹಠಾತ್ ಕುಸಿದು ಬಿದ್ದಿದೆ. ಪರಿಣಾಮವಾಗಿ ಮೋಹಿನಿ ಮಣ್ಣನಡಿಗೆ ಸಿಲುಕಿಕೊಂಡಿದ್ದರು. ಈ ಬಗ್ಗೆ ಮಾಹಿತಿ ಪಡೆದ ಮಂಗಳೂರು ಪೂರ್ವ ಠಾಣೆ ಪೊಲೀಸರು, ಅಗ್ನಿಶಾಮಕ ದಳ, ಕಂದಾಯ ಇಲಾಖೆ ಮತ್ತು ಸ್ಥಳೀಯರ ನೆರವಿನಿಂದ ಬೆಳಗ್ಗೆ ಸುಮಾರು 11 ಗಂಟೆಯ ಹೊತ್ತಿಗೆ ಅವರನ್ನು ಮಣ್ಣಿನಡಿಯಿಂದ ಮೇಲಕ್ಕೆತ್ತುವ ಕಾರ್ಯಾಚರಣೆ ರಾತ್ರಿ 7 ಗಂಟೆಯವರೆಗೂ ಮುಂದುವರಿದಿತ್ತು. ಆದರೆ, ರಾತ್ರಿ ಅವರನ್ನು ಮಣ್ಣಿನಿಂದ ಮೇಲಕ್ಕೆತ್ಕಲಾಯಿತಾದರೂ ಅದಾಗಲೇ ಅವರು ಕೊನೆಯುಸಿರೆಳೆದಿದ್ದರು.
ಉದಯನಗರದಲ್ಲಿರುವ ಮೋಹಿನಿ ಅವರ ಮನೆಗೆ ಹೋಗುವ ರಸ್ತೆಯು ಕಿರಿದಾಗಿದ್ದು, ತ್ರಿಚಕ್ರ ಹಾಗೂ ನಾಲ್ಕು ಚಕ್ರಗಳ ವಾಹನ ಅಲ್ಲಿಗೆ ತಲುಪುವುದು ಕಷ್ಟವಾಗಿತ್ತು. ಆಕೆಯನ್ನು ಮಣ್ಣಿನಡಿಯಿಂದ ಮೇಲಕ್ಕೆತ್ತಲು ಬೆಳಗ್ಗೆಯಿಂದಲೇ ವಾಹನದ ವ್ಯವಸ್ಥೆ ಮಾಡಲಾಗಿದ್ದರೂ ಘಟನಾ ಸ್ಥಳದ ಕಡೆಗೆ ತೆರಳಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ವಿಳಂಬಗೊಂಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.