ಮಳೆಯೊಂದಿಗೆ ಅಬ್ಬರಿಸಿದ ಗಾಳಿ, ಸಿಡಿಲು; ಜಿಲ್ಲೆಯಲ್ಲಿ ಅಪಾರ ನಷ್ಟ

ಉಡುಪಿ, ಮೇ 29: ಮುಂಗಾರು ಪೂರ್ವ ಮಳೆಯ ಅಬ್ಬರ ಉಡುಪಿ ಜಿಲ್ಲೆಯಲ್ಲಿ ಮೂರನೇ ದಿನವೂ ಮುಂದುವರಿದಿದ್ದು, ಮಹಿಳೆಯೊಬ್ಬರು ಕಾರ್ಕಳದ ಬೈಲೂರಿನಲ್ಲಿ ಸಿಡಿಲಿಗೆ ಬಲಿಯಾದರೆ, ಪಡುಬಿದ್ರಿಯಲ್ಲಿ ಬಾಲಕಿಯೊಬ್ಬರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. 150ಕ್ಕೂ ಅಧಿಕ ವಿದ್ಯುತ್ ಕಂಬಗಳು ಹಾಗೂ ನೂರಾರು ಮರಗಳು ಗಾಳಿಯ ಪ್ರತಾಪಕ್ಕೆ ಸಿಲುಕಿ ಧರಾಶಾಹಿಯಾದರೆ, ನೂರಾರು ಮನೆಗಳಿಗೂ ಹಾನಿಯಾಗಿವೆ.
ಇಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಭಾರೀ ಗಾಳಿಯೊಂದಿಗೆ ಪ್ರಾರಂಭಗೊಂಡ ಮಳೆಯಿಂದ ಉದ್ಯಾವರ, ಬ್ರಹ್ಮಾವರ, ಉಡುಪಿ ನಗರಸಭಾ ಪ್ರದೇಶ, ಕಾಪುವಿನಲ್ಲಿ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಕಾರ್ಕಳದಲ್ಲಿ ಸಿಡಿಲು ತನ್ನ ಆರ್ಭಟವನ್ನು ತೋರಿಸಿದ್ದು, ಐದು ಮನೆಗಳು ಸಿಡಿಲಿಗೆ ಸಿಲುಕಿ ಹಾನಿಗೊಂಡಿವೆ.
ಸಿಡಿಲಿನಿಂದ ಬೈಲೂರು ಗ್ರಾಪಂ ಸದಸ್ಯೆ ಶೀಲಾ (36) ಮನೆಯಲ್ಲಿ ಮಲಗಿದ್ದಲ್ಲೇ ಮೃತಪಟ್ಟರೆ, ಅವರ ಪತಿ ಗಾಯಗೊಂಡು ಕಾರ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಉಡುಪಿಯ 76ಬಡಗುಬೆಟ್ಟುನಲ್ಲಿ ಕೃಷ್ಣಾನಂದ ಜತ್ತನ್ನ ಎಂಬವರ ಮನೆಯ ಮೇಲೆ ಮರ ಬಿದ್ದು ಒಂದು ಲಕ್ಷ ರೂ.ನಷ್ಟ ಸಂಭವಿಸಿದ್ದು, ಅವರ ಪುತ್ರ ಉತ್ತಮ್ ಹಾಗೂ ಸೊಸೆ ಶಾಲೆಟ್ ಗಾಯಗೊಂಡು ಚಿಕಿತ್ಸೆ ಪಡೆದಿದ್ದಾರೆ.
ಮೆಸ್ಕಾಂಗೆ ಭಾರೀ ನಷ್ಟ: ಕಳೆದ ಮೂರು ದಿನಗಳ ಗಾಳಿ-ಮಳೆಯಿಂದ ಭಾರೀ ನಷ್ಟ ಅನುಭವಿಸಿರುವ ಇಲಾಖೆಯೆಂದರೆ ಮೆಸ್ಕಾಂ ಇಲಾಖೆ. ಇಂದು ಜಿಲ್ಲೆಯಲ್ಲಿ ಗಾಳಿ-ಮಳೆಗೆ 152 ವಿದ್ಯುತ್ ಕಂಬಗಳು ಉರುಳಿದ್ದು, ಇದರಿಂದ ಮೂರು ದಿನಗಳಿಂದ ಉರುಳಿ ಬಿದ್ದ ವಿದ್ಯುತ್ ಕಂಬಗಳ ಸಂಖ್ಯೆ 513ಕ್ಕೇರಿದೆ. ಕಾರ್ಕಳ, ಹೆಬ್ರಿ, ಕಾಪು, ಉಡುಪಿ, ಮಣಿಪಾಲ, ಬ್ರಹ್ಮಾವರ ಭಾಗದಲ್ಲಿ 434 ಕಂಬಗಳು ಉರುಳಿದ್ದರೆ, ಕುಂದಾಪುರ, ಬೈಂದೂರು ಮತ್ತು ಕೋಟ ಪ್ರದೇಶ ಗಳಲ್ಲಿ ಬಿದ್ದ ಕಂಬಗಳ ಸಂಖ್ಯೆ 79 ಮಾತ್ರ ಎಂದು ಮೆಸ್ಕಾಂನ ಸುಪರಿಂಟೆಂಡೆಂಟ್ ಇಂಜಿನಿಯರ್ ನರಸಿಂಹ ಪಂಡಿತ್ ‘ಪತ್ರಿಕೆ’ಗೆ ತಿಳಿಸಿದರು.
ಇದರಿಂದ ಈವರೆಗೆ ಇಲಾಖೆಗೆ ಆದ ನಷ್ಟ ಸುಮಾರು 38 ಲಕ್ಷ ರೂ. ಇದರಲ್ಲಿ ಕಂಬ, ವಯರಿಂಗ್ ನಷ್ಟ ಹಾಗೂ ಇನ್ಸುಲೇಟರ್ ನಷ್ಟ ಮಾತ್ರ ಲೆಕ್ಕ ಹಾಕಲಾಗಿದೆ. ದುಬಾರಿಯಾದ ಟ್ರಾನ್ಸ್ಫಾರ್ಮರ್ಗಳೂ ಸಾಕಷ್ಟು ಹಾನಿಗೊಂಡಿದ್ದು, ಅವುಗಳ ನಷ್ಟ ಇನ್ನಷ್ಟೇ ಅಂದಾಜಿಸಬೇಕಾಗಿದೆ ಎಂದವರು ನುಡಿದರು.
ಇಂದು ಉದ್ಯಾವರ ಒಂದರಲ್ಲೇ 40ರಿಂದ 50 ಕಂಬಗಳು ಉರುಳಿದ್ದು, ಒಟ್ಟಾರೆಯಾಗಿ 152 ಕಂಬಗಳು ಉರುಳಿ ಬಿದ್ದಿವೆ. ಎಲ್ಲಾ ಕಡೆಗಳಲ್ಲೂ ಸಮರೋಪಾದಿಯಲ್ಲಿ ಪರಿಹಾರ ಕಾರ್ಯವನ್ನು ನಡೆಸಲಾಗುತ್ತಿದೆ. ಸುಮಾರು 500 ಮಂದಿ ಗುತ್ತಿಗೆದಾರರು, ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಬಿದ್ದ ಕಂಬವನ್ನು ಬದಲಿಸಿ, ವಿದ್ಯುತ್ ಸಂಪರ್ಕವನ್ನು ಮತ್ತೆ ನೀಡಲು ಪ್ರಯತ್ನಿಸುತಿದ್ದಾರೆ. ಆದರೆ ಇಂದು ಮಧ್ಯಾಹ್ನದ ಬಳಿಕ ಜೋರಾಗಿ ಮಳೆ ಸುರಿಯುತ್ತಿರುವುದರಿಂದ ಹೆಚ್ಚಿನ ಕಡೆ ಕಾರ್ಯ ಅಪೂರ್ಣಗೊಂಡಿದೆ. ಮಳೆಯೊಂದಿಗೆ ಮಿಂಚು ಇರುವುದರಿಂದ ವಿದ್ಯುತ್ ತಂತಿ ಅಳವಡಿಸುವ ಕಾರ್ಯಕ್ಕೆ ಹಿನ್ನಡೆಯಾಗಿದೆ. ಹೀಗಾಗಿ ಉದ್ಯಾವರ, ಪಡುಕೆರೆ, ಬ್ರಹ್ಮಾವರದ ಕೆಲ ಭಾಗಗಳಲ್ಲಿ ಇಂದು ರಾತ್ರಿ ವಿದ್ಯುತ್ ಸಂಪರ್ಕ ನೀಡಲು ಸಾಧ್ಯವಾಗಿಲ್ಲ ಎಂದು ಪಂಡಿತ್ ನುಡಿದರು.
ಮಲ್ಪೆ ಸಮೀಪದ ಪಡುಕೆರೆಗೆ ವಿದ್ಯುತ್ ಸಂಪರ್ಕ ನೀಡುವ ಟವರ್ ಒಂದು ಭಾರೀ ಗಾಳಿಗೆ ಉದ್ಯಾವರದಲ್ಲಿ ಉರುಳಿ ಬಿದ್ದಿರುವುದರಿಂದ ಇಡೀ ಗ್ರಾಮ ಕನಿಷ್ಠ ಒಂದು ದಿನ ಕತ್ತಲಲ್ಲಿ ಇರಬೇಕಾಗಿದೆ. ಟವರ್ ಪುನರ್ ಸ್ಥಾಪನೆಗೆ ಒಂದೆರಡು ದಿನ ಬೇಕಾಗಬಹುದು ಎಂದವರು ವಿವರಿಸಿದರು.
ಬ್ರಹ್ಮಾವರ: ಬ್ರಹ್ಮಾವರದ ವಾರಂಬಳ್ಳಿ ಗ್ರಾಮದ ಕೃಷ್ಣ ಎಂಬವರ ಮನೆ ಬಳಿಯ ದೈವದ ಗುಡಿಗೆ ಗಾಳಿ-ಮಳೆಯಿಂದ ಹಾನಿಯಾಗಿದ್ದು 20,000ರೂ. ನಷ್ಟವಾಗಿದೆ. ಅದೇ ಗ್ರಾಮದ ಸೀತು, ಶಶಿಕಲಾ ಹಾಗೂ ಗಂಗೆ ಎಂಬವರ ಮನೆಯ ಮೇಲೆ ಮರ ಬಿದ್ದು ತಲಾ ಒಂದು ಲಕ್ಷ ರೂ. ನಷ್ಟವಾಗಿದೆ. ಕುಮ್ರಗೋಡು ಗ್ರಾಮದ ಸುಬ್ರಾಯ ಆಚಾರಯ ಎಂಬವರ ಮನೆ ಮೇಲೆ ಮರ ಬಿದ್ದು 40,000ರೂ.ನಷ್ಟವಾಗಿದೆ.
ಕಾರ್ಕಳದಲ್ಲಿ 4ಮನೆಗೆ ಸಿಡಿಲು: ತಾಲೂಕಿನ ಬೈಲೂರಿನಲ್ಲಿ ಗ್ರಾಪಂ ಸದಸ್ಯೆ ಶೀಲಾ ನಲ್ಕೆ ಅವರು ಮನೆಗೆ ಸಿಡಿಲು ಬಡಿದು ಮೃತಪಟ್ಟರೆ, ಅದೇ ಗ್ರಾಮ ಸುಗುಣ ಪಾನಾರ ಮನೆಗೆ ಸಿಡಿಲು ಬಡಿದು 25,000ರೂ.ನಷ್ಟವಾಗಿದೆ. ಕುಕ್ಕುಜೆ ಗ್ರಾಮದ ಗುಡ್ಡೆಯಂಗಡಿ ಎಂಬಲ್ಲಿ ಅನಂತ ಶೆಟ್ಟಿ ಅವರ ಮನೆಗೆ ಸಿಡಿಲು ಬಡಿದು ಮನೆಯ ಗೋಡೆ, ವಿದ್ಯುತ್ ವಯರಿಂಗ್ ಹಾನಿಯಾಗಿದ್ದು 30,000 ನಷ್ಟ, ಮರ್ಣೆ ಗ್ರಾಮದ ಕಿರಂಚಿಬೈಲು ಎಂಬಲ್ಲಿ ಕೃಷ್ಣ ನಾಯಕ್ರ ಮನೆಗೆ ಸಿಡಿಲು ಬಡಿದು 25,000ರೂ.ನಷ್ಟವಾಗಿದೆ. ಎರ್ಲಪಾಡಿ ಗ್ರಾಮದ ಕಂಬೋಳಿ ಹರಿಜನರ ಮನೆಗೆ ಸಿಡಿಲು ಬಡಿದು 10,000 ರೂ.ನಷ್ಟವಾಗಿದೆ.
ಉಳಿದಂತೆ ಎರ್ಲಪಾಡಿ ಗ್ರಾಮದ ಕಾಂತರಗೋಳಿಯ ಸುಶೀಲ ಎಂಬವರ ಮನೆಗೆ ತೆಂಗಿನಮರ ಬಿದ್ದು 25,000ರೂ. ನಷ್ಟವಾಗಿದೆ. ಭಾರೀ ಗಾಳಿಗೆ ಅಂಡಾರು ಗ್ರಾಮದ ರಾಮಕೃಷ್ಣ ಶೇರಿಗಾರ್ ಎಂಬವರ ಅಡಿಕೆ ತೋಟಕ್ಕೆ 20,000ರೂ., ಅದೇ ಗ್ರಾಮದ ಅಕ್ಷತಾ ಆಚಾರ್ಯರ ಮನೆಗೆ 10,000ರೂ., ಶಿರ್ಲಾಲು ಗ್ರಾಮದ ಭೋಜರಾಜ ಹೆಗ್ಡೆ ಎಂಬವರ ಅಡಿಕೆ ತೋಟಕ್ಕೆ 40,000, ಅದೇ ಗ್ರಾಮದ ಧರ್ಮರಾಜ ಜೈನ್ರ ಅಡಿಕೆ ಮತ್ತು ತೆಂಗಿನ ತೋಟಕ್ಕೆ 40,000ರೂ. ನಷ್ಟವಾಗಿದೆ.
ಮಂಗಳವಾರ ಅಪರಾಹ್ನ 3ಗಂಟೆ ಸುಮಾರಿಗೆ ಕಾರ್ಕಳ ಕಸಬದ ರೋಟರಿ ಕಾಲನಿಯ ದಯಾನಂದ ದೇವಾಡಿಗ ಎಂಬವರ ಮನೆಗೆ ಮಳೆ ನೀರು ನುಗ್ಗಿ ಕಾಂಪೌಂಡಿನ ಒಂದು ಭಾಗ ಕುಸಿದು ಒಂದು ಲಕ್ಷ ರೂ.ಹಾನಿಯಾಗಿದೆ. ಇದೇ ಗ್ರಾಮದ ನೂರ್ಜಹಾನ್ ಎಂಬವರ ಭಾರತ್ ಬೀಡಿ ಕಾಲನಿ ಮನೆಗೆ ನೀರು ನುಗ್ಗಿ 50,000ರೂ.ನಷ್ಟ ಸಂಭವಿಸಿದೆ.
ಕುಂದಾಪುರ: ಹಂಗಳೂರು ಗ್ರಾಮದ ಪಾರ್ವತಿ ಸುರೇಂದ್ರ ನಾಯಕ್ರ ಮನೆ ಗಾಳಿ-ಮಳೆಗೆ ಭಾಗಶ: ಹಾನಿಯಾಗಿ 10,000ರೂ. ನಷ್ಟವಾಗಿದೆ.
ಉಡುಪಿ: ಕೊಡವೂರು ಗಾಂಧಿ ಶತಾಬ್ದಿ ಶಾಲೆಯ ಬಳಿಯ ನಿವಾಸಿ ಶೇಖರ್ ಎಂ. ಎಂಬವರ ಮನೆಯ ಮೇಲೆ ಮರ ಬಿದ್ದು ಸಂಪೂರ್ಣ ಹಾನಿಗೊಂಡಿದ್ದು ಒಂದು ಲಕ್ಷ ರೂ.ನಷ್ಟವಾಗಿದೆ. ಅದೇ ಗ್ರಾಮದ ಆಲಿ ಅಬ್ಬಾಸ್ ಅಂವರ ಮನೆ ಮೇಲೆ ಮಾವಿನ ಮರಬಿದ್ದು ಎರಡು ಲಕ್ಷ ರೂ. ನಷ್ಟವಾಗಿದೆ. ಅಂಬಲಪಾಡಿ ಗ್ರಾಮದ ಬಬ್ಬುಸ್ವಾಮಿ ದೈವಸ್ಥಾನ ಬಳಿಯ ಸುಮಂತ್ರ ಮನೆ ಮೇಲೆ ಮರ ಬಿದ್ದು 90,000ರೂ., ಆನಂದ ಸುವರ್ಣ ಮನೆ ಮೇಲೆ ಮರಬಿದ್ದು 60,000ರೂ., ಕೊರಂಗ್ರಪಾಡಿಯ ಸೀನ ಎಂಬವರ ಮನೆಗೆ ಮರ ಬಿದ್ದು 90,000ರೂ., ಕುಸುಮ ಪೂಜಾರ್ತಿ ಮನೆ ಮೇಲೆ ಮರ ಬಿದ್ದು 40,000 ಹಾಗೂ ಸೌಮ್ಯಶ್ರೀ ಮನೆ ಮೇಲೆ ಮರ ಬಿದ್ದು 75,000ರೂ. ನಷ್ಟವಾಗಿದೆ.
ಉಡುಪಿಯಲ್ಲಿ ಒಟ್ಟು ಮನೆ ಹಾನಿಯ 49 ಪ್ರಕರಣಗಳು ಇಂದು ದಾಖಲಾಗಿದ್ದು, 20 ಲಕ್ಷ ರೂ.ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ ಎಂದು ತಾಲೂಕು ಕಚೇರಿ ಮೂಲಗಳಿಂದ ತಿಳಿದು ಬಂದಿದೆ.







