‘ಅಕ್ಷರಬಂಡಿ-ವರ್ಣಮಾಲೆಗಳ ತೋರಣಗಳೊಂದಿಗೆ ಶೈಕ್ಷಣಿಕ ವರ್ಷಕ್ಕೆ ಸ್ವಾಗತ’
ಧಾರವಾಡ, ಮೇ 29: ಕನ್ನಡ, ಇಂಗ್ಲೀಷ್, ಹಿಂದಿ, ಉರ್ದು ವರ್ಣ ಮಾಲೆಗಳು, ಅಕ್ಷರದ ಕುಂಭಗಳು, ಅಕ್ಷರ ವೃಕ್ಷ, ಅಕ್ಷರದ ಕಿರೀಟಗಳು, ಅಂಕಿ-ಸಂಖ್ಯೆ, ಗಣಿತದ ಲೆಕ್ಕಗಳನ್ನು ಸಾರುವ ತೋರಣಗಳು, ಭಿತ್ತಿಚಿತ್ರಗಳು, ಹೂ ಕುಂಡಗಳಿಂದ ಇಂದು ಇಲ್ಲಿನ ಗುಲಗಂಜಿಕೊಪ್ಪದ ಸರಕಾರಿ ಪ್ರೌಢಶಾಲೆ ಹಾಗೂ ಸರಕಾರಿ ಉರ್ದು ಪ್ರಾಥಮಿಕ ಶಾಲೆಯ ಆವರಣ ಕಂಗೊಳಿಸುತ್ತಿತ್ತು.
2018-19ರ ಹೊಸ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವವನ್ನು ವಿದ್ಯಾರ್ಥಿಗಳು, ಶಿಕ್ಷಕರು, ಪಾಲಕರು ಸಡಗರದಿಂದ ಆಚರಿಸಿ, ಹೊಸ ಕಲಿಕಾ ವರ್ಷವನ್ನು ಬರಮಾಡಿಕೊಂಡರು.
ಸಾರ್ವಜನಿಕ ಶಿಕ್ಷಣ ಇಲಾಖೆ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿದ ಜಿ.ಪಂ.ಅಧ್ಯಕ್ಷೆ ಚೈತ್ರಾ ಶಿರೂರ ಮಾತನಾಡಿ, ಶಿಕ್ಷಣವೆಂದರೆ ಕೇವಲ ಅಕ್ಷರಜ್ಞಾನದ ಗಳಿಕೆ, ಪಠ್ಯದ ಓದು ಮಾತ್ರವಲ್ಲ, ಅದು ಮಕ್ಕಳ ಸರ್ವತೋಮುಖ ಬೆಳವಣಿಗೆಯ ಮಹತ್ವದ ಕಾಲಘಟ್ಟ ಎಂದರು.
ಎಳೆಯ ಮಕ್ಕಳಲ್ಲಿ ಯಾವುದೇ ಭೇದ, ಭಾವನೆಗಳು ಮೂಡಲು ಆಸ್ಪದ ನೀಡಬಾರದು ಎಂಬ ಸದಾಶಯದೊಂದಿಗೆ ಸಮವಸ್ತ್ರಗಳನ್ನು ಕಡ್ಡಾಯಗೊಳಿಸಲಾಗಿದೆ. ಎಲ್ಲ ಧರ್ಮ, ಜಾತಿಯ ಭಾವನೆಗಳನ್ನು ಮೀರಿ ನಾವೆಲ್ಲ ಭಾರತೀಯರು ಎಂಬ ಹಿರಿಮೆಯನ್ನು ಮಕ್ಕಳು ಬೆಳೆಸಿಕೊಳ್ಳುವ ವಾತಾವರಣ ಶಾಲೆಗಳಲ್ಲಿ ಸಿಗಬೇಕು. ಸರ್ವಜನಾಂಗದ ಶಾಂತಿಯ ತೋಟಗಳಾಗಿ ಶಾಲೆಗಳು ಅಭಿವೃದ್ಧಿ ಹೊಂದಿದರೆ, ಭಾರತದ ಭವಿಷ್ಯ ಇನ್ನಷ್ಟು ಭದ್ರವಾಗುತ್ತದೆ ಎಂದು ಅವರು ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಮಾತನಾಡಿ, ಬೆಳಗಾವಿ ಭಾಗದಲ್ಲಿ ಒಟ್ಟು 19 ಸಾವಿರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿವೆ. ಈಗಾಗಲೇ ಎಲ್ಲ ಶಾಲೆಗಳಿಗೂ ಅಗತ್ಯ ಪಠ್ಯಪುಸ್ತಕಗಳು ಪೂರೈಕೆಯಾಗಿವೆ. ಸರಕಾರಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ. ಪ್ರತಿಭಾವಂತ ಶಿಕ್ಷಕರಿದ್ದಾರೆ. ಪಠ್ಯೇತರ ಚಟುವಟಿಕೆಗಳಿಗೂ ಪ್ರೋತ್ಸಾಹ, ನೈತಿಕ ಶಿಕ್ಷಣ ಬೆಳೆಸಲು ವಿಶೇಷ ಒತ್ತು ನೀಡಲಾಗುತ್ತಿದೆ ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎನ್.ಎಚ್.ನಾಗೂರ ಮಾತನಾಡಿ, ಧಾರವಾಡ ಜಿಲ್ಲೆಯಲ್ಲಿ 763 ಸರಕಾರಿ ಪ್ರಾಥಮಿಕ ಶಾಲೆಗಳು, ವಿವಿಧ ಇಲಾಖೆಗಳು, ಖಾಸಗಿ ಅನುದಾನಿತ ಮತ್ತು ಅನುದಾನರಹಿತ ಶಾಲೆಗಳು ಸೇರಿ ಒಟ್ಟು 1251 ಪ್ರಾಥಮಿಕ ಶಾಲೆಗಳಿವೆ, 108 ಸರಕಾರಿ ಪ್ರೌಢ ಶಾಲೆಗಳು ಸೇರಿ ಒಟ್ಟು 442 ಪ್ರೌಢಶಾಲೆಗಳಿವೆ ಎಂದರು.
ಎಲ್ಲ ತಾಲೂಕುಗಳಲ್ಲಿ ಸಡಗರದಿಂದ ಶಾಲಾ ಪ್ರಾರಂಭೋತ್ಸವ ಆಚರಿಸಲಾಗಿದೆ. ಈಗಾಗಲೇ ಶೇ.85ರಷ್ಟು ಪಠ್ಯ ಪುಸ್ತಕಗಳು ಜಿಲ್ಲೆಗೆ ಬಂದಿವೆ ಅವುಗಳನ್ನು ಶಾಲೆಗಳಿಗೆ ಪೂರೈಸಲಾಗಿದೆ. ಮಕ್ಕಳಿಗೆ ವಿತರಿಸಲು ಕ್ರಮಕೈಗೊಳ್ಳಲಾಗಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಸೇತುಬಂಧ, ಮಿಂಚಿನ ಸಂಚಾರ ಮತ್ತಿತರ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಡೊಳ್ಳಿನ, ಶಿಕ್ಷಣಾಧಿಕಾರಿಗಳಾದ ಎಸ್.ಎಂ.ಹುಡೇದಮನಿ, ಮಂಗಳಾ ಪಾಟೀಲ, ಎಂ.ಸಿ.ಮಹಾಲೆ, ಬಶೀರ್ ಅಲಿ, ಎಸ್.ಎಂ.ಶೇಖ್, ಬಿಇಓ ಎ.ಎ.ಖಾಜಿ, ಎಸ್.ಡಿ.ಎಂ.ಸಿ.ಅಧ್ಯಕ್ಷ ದೊಡ್ಡಮನಿ ಮತ್ತಿತರರು ಉಪಸ್ಥಿತರಿದ್ದರು.







