ದಕ್ಷಿಣ ಕನ್ನಡ: ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್ ಗೆ ಎಂಎಲ್ಸಿ ಸ್ಥಾನ ?

ಮಂಗಳೂರು, ಮೇ 29: ವಿಧಾನಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಧೂಳೀಪಟವಾದ ಬೆನ್ನಿಗೇ ಸೋತ ಮುಖಂಡರಿಂದ ವಿಧಾನಪರಿಷತ್ ಹಾಗು ಸಚಿವ ಸ್ಥಾನಕ್ಕೆ ಲಾಬಿ ಪ್ರಾರಂಭವಾಗಿದೆ ಎಂದು ತಿಳಿದುಬಂದಿದೆ.
ದ.ಕ. ಜಿಲ್ಲೆಯ ಮಂಗಳೂರಿನಲ್ಲಿ ಯು.ಟಿ. ಖಾದರ್ ಬಿಟ್ಟು ಉಳಿದ ಏಳು ಕಾಂಗ್ರೆಸ್ ಅಭ್ಯರ್ಥಿಗಳು ಸೋಲುಂಡಿದ್ದಾರೆ. ಈ ಪೈಕಿ ಬಂಟ್ವಾಳದಲ್ಲಿ ಸೋತ ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ಹಾಗು ಜಿಲ್ಲೆಯ ಪ್ರಭಾವೀ ಕಾಂಗ್ರೆಸ್ ನಾಯಕ ಬಿ. ರಮಾನಾಥ ರೈ ಅವರಿಗೆ ವಿಧಾನ ಪರಿಷತ್ ಸ್ಥಾನ ನೀಡಿ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂದು ಅವರ ಬೆಂಬಲಿಗರು ಲಾಬಿ ಆರಂಭಿಸಿದ್ದಾರೆ.
ರಮಾನಾಥ ರೈ ಅವರಿಗೆ ಆಪ್ತ ಜಿ.ಪಂ. ಸದಸ್ಯರು ಮತ್ತಿತರರ ನಿಯೋಗ ಈಗಾಗಲೇ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್, ಗುಲಾಂ ನಬಿ ಆಝಾದ್, ಆಸ್ಕರ್ ಫೆರ್ನಾಂಡಿಸ್ ಮತ್ತಿತರರನ್ನು ಭೇಟಿಯಾಗಿ ಜಿಲ್ಲೆಯಲ್ಲಿ ರಮಾನಾಥ ರೈಯವರೇ ಉಸ್ತುವಾರಿ ಸಚಿವರಾಗಬೇಕು ಹಾಗಾಗಿ ಅವರಿಗೆ ವಿಧಾನ ಪರಿಷತ್ ಸ್ಥಾನ ನೀಡಿ ಸಚಿವರಾಗಿ ಮಾಡಿ ಎಂದು ಆಗ್ರಹಿಸಿದೆ ಎಂದು ತಿಳಿದುಬಂದಿದೆ.
ಹರೀಶ್ ಕುಮಾರ್ ಗೆ ಎಂಎಲ್ಸಿ ಸ್ಥಾನ ?
ಜಿಲ್ಲೆಯ ಪ್ರಭಾವೀ ಮುಖಂಡರ ಲಾಬಿಯ ನಡುವೆಯೇ ಕಾಂಗ್ರೆಸ್ ಹೈಕಮಾಂಡ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಅವರಿಗೆ ವಿಧಾನ ಪರಿಷತ್ ಸ್ಥಾನ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ರಾಜ್ಯದಲ್ಲಿ ಒಬ್ಬ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷಗೆ ಎಂಎಲ್ಸಿ ಸ್ಥಾನ ನೀಡುವ ಸಂಪ್ರದಾಯವಿದೆ. ಆ ಕೋಟಾ ಹಾಗು ಬಿಲ್ಲವ ಕೋಟಾದಲ್ಲಿ ಹರೀಶ್ ಕುಮಾರ್ ಗೆ ಅನಿರೀಕ್ಷಿತ ಎಂಎಲ್ಸಿ ಸ್ಥಾನ ಸಿಕ್ಕಿದರೂ ಆಶ್ಚರ್ಯವಿಲ್ಲ. ಈಗ ಕಾಂಗ್ರೆಸ್ ನಲ್ಲಿ ಬಿಲ್ಲವ ಶಾಸಕರು, ಸಂಸದರು ಯಾರೂ ಇಲ್ಲ. ಜೊತೆಗೆ ಹರೀಶ್ ಕುಮಾರ್ ಬಹಳ ವರ್ಷಗಳಿಂದ ಪಕ್ಷ ನಿಷ್ಠರಾಗಿ ದುಡಿದವರು. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಅವರು ಹರೀಶ್ ಹೆಸರನ್ನು ಶಿಫಾರಸು ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ಮೊನ್ನೆ ಇದ್ದಕ್ಕಿದ್ದಂತೆ ದಿಲ್ಲಿಗೆ ಬರುವಂತೆ ಹರೀಶ್ ಕುಮಾರ್ ಅವರಿಗೆ ಬುಲಾವ್ ಬಂದಿದೆ.