ಉಡುಪಿ ಜಿಲ್ಲೆ: ಒಂದೇ ದಿನ 45 ಲಕ್ಷ ರೂ. ನಷ್ಟ, ಮೆಸ್ಕಾಂಗೆ 47 ಲಕ್ಷ ರೂ. ನಷ್ಟ
ಪ್ರಾಕೃತಿಕ ವಿಕೋಪ
ಉಡುಪಿ, ಮೇ 30: ಕಳೆದ ಸುಮಾರು 48 ಗಂಟೆಗಳಲ್ಲಿ ಜಿಲ್ಲೆಯಾದ್ಯಂತ ಬೀಸಿದ ಗಾಳಿ-ಮಳೆ, ಸಿಡಿಲಿಗೆ 100ಕ್ಕೂ ಅಧಿಕ ಪ್ರಕರಣಗಳು ವರದಿಯಾಗಿದ್ದು ಇದರಿಂದ 45 ಲಕ್ಷ ರೂ.ಗಳಿಗೂ ಅಧಿಕ ವೌಲ್ಯದ ಸೊತ್ತುಗಳಿಗೆ ಹಾನಿಯಾ ಗಿವೆ ಎಂದು ಜಿಲ್ಲಾಧಿಕಾರಿ ಕಚೇರಿಯ ನಿಯಂತ್ರಣ ಕೊಠಡಿ ಮಾಹಿತಿ ಕಲೆ ಹಾಕಿದೆ.
ಮಂಗಳವಾರ ರಾತ್ರಿಯ ಬಳಿಕ ಪ್ರಾರಂಭಗೊಂಡ ಮಳೆ-ಗಾಳಿ ಹಾಗೂ ಸಿಡಿಲಿಗೆ ಜಿಲ್ಲೆಯಲ್ಲಿ ಎರಡು ಜೀವಗಳು ಬಲಿಯಾಗಿವೆ. ಬೈಲೂರು ಗ್ರಾಪಂ ಸದಸ್ಯೆ ಶೀಲಾ ನಲ್ಕೆ ಅವರು ಸಿಡಿಲಿನಿಂದ ಮೃತಪಟ್ಟರೆ, ಪಡುಬಿದ್ರಿ ಸಮೀಪದ ಪಾದೆಬೆಟ್ಟುವಿನಲ್ಲಿ ಶಾಲೆಯಿಂದ ಮರಳುತಿದ್ದ 9ರ ಹರೆಯದ ನಿಧಿ ಆಚಾರ್ಯ ನೆರೆಯಲ್ಲಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಮೃತಪಟ್ಟಿದ್ದರು.
ಉಡುಪಿ ತಾಲೂಕಿನಲ್ಲಿ ವಿವಿಧ ರೀತಿಯಲ್ಲಿ ಮನೆಗಳಿಗೆ ಹಾನಿಯಾದ 84 ಪ್ರಕರಣಗಳು ದಾಖಲಾಗಿದ್ದು, ಇವುಗಳಿಂದ ಒಟ್ಟು 33,32,000ರೂ.ನಷ್ಟ ವಾಗಿದೆ ಎಂದು ತಿಳಿದುಬಂದಿದೆ. ಕಾರ್ಕಳ ತಾಲೂಕಿನಲ್ಲಿ ಒಟ್ಟು ಐದು ಪ್ರಕರಣ ಗಳು ದಾಖಲಾಗಿದ್ದು ಇವುಗಳಿಂದ 2,60,000ರೂ. ನಷ್ಟವಾಗಿದೆ. ಕುಂದಾಪುರ ತಾಲೂಕಿನಲ್ಲಿ ದಾಖಲಾದ ಮೂರು ಪ್ರಕರಣಗಳಲ್ಲಿ 1,00,000 ರೂ.ನಷ್ಟವಾದರೆ, ಕಾಪುವಿನಲ್ಲಿ ಆರು ಪ್ರಕರಣಗಳು ವರದಿಯಾಗಿದ್ದು 8,45,000ರೂ.ನಷ್ಟದ ಅಂದಾಜು ಮಾಡಲಾಗಿದೆ ಎಂದು ಈ ಮಾಹಿತಿಗಳು ತಿಳಿಸಿವೆ.
ಮೆಸ್ಕಾಂಗೆ 47 ಲಕ್ಷ ರೂ.ನಷ್ಟ: ಉಡುಪಿ ಜಿಲ್ಲೆಯಲ್ಲಿ ಈ ಬಾರಿಯ ಮಳೆ-ಗಾಳಿ ಹಾಗೂ ಸಿಡಿಲಿನಿಂದಾಗಿ ವೆುಸ್ಕಾಂ ಇಲಾಖೆಯ ಒಟ್ಟು 624 ವಿದ್ಯುತ್ ಕಂಬಗಳಿಗೆ ಹಾನಿಯಾಗಿವೆ. ಇದರಿಂದ ಒಟ್ಟು 47 ಲಕ್ಷರೂ.ಗಳ ನಷ್ಟವಾಗಿರುವುದಾಗಿ ಪ್ರಾಥಮಿಕ ವರದಿ ತಿಳಿಸಿದೆ ಎಂದು ಮೆಸ್ಕಾಂ ಇಲಾಖೆಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಈವರೆಗೆ ಕೇವಲ ಉರುಳಿ ಬಿದ್ದ ಕಂಬಗಳು, ತುಂಡಾದ ವಯರ್ಗಳು ಹಾಗೂ ಇನ್ಸ್ಸುಲೇಟರ್ಗಳ ನಷ್ಟವನ್ನಷ್ಟೇ ಅಂದಾಜು ಮಾಡಲಾಗಿದೆ. ಬಿದ್ದ ಕಂಬಗಳನ್ನು ಬದಲಿಸಲು, ಸರಿಪಡಿಸಲು ಜಿಲ್ಲೆಯಾದ್ಯಂತ ಬಳಸಿದ ನೂರಾರು ಕೂಲಿ-ಕಾರ್ಮಿಕರ ಖರ್ಚು ವೆಚ್ಚಗಳು ಹಾಗೂ ಹಾನಿಗೊಂಡ ಟ್ರಾನ್ಸ್ಫಾರ್ಮರ್ಗಳ ನಷ್ಟವನ್ನು ಇನ್ನೂ ಅಂದಾಜಿಸಿಲ್ಲ ಎಂದವರು ತಿಳಿಸಿದರು. ಉದ್ಯಾವರ, ಪಡುಕೆರೆ ಸೇರಿದಂತೆ ಜಿಲ್ಲೆಯ ಅನೇಕ ಕಡೆಗಳಲ್ಲಿ ಇನ್ನೂ ದುರಸ್ಥಿ ಕಾರ್ಯ ಮುಂದುವರಿದಿದ್ದು, ಕೆಲವು ಕಡೆಗಳಲ್ಲಿ ಇನ್ನೂ ವಿದ್ಯುತ್ ಸಂಪರ್ಕ ಕೊಡಲು ಸಾಧ್ಯವಾಗಿಲ್ಲ ಎಂದರು.
ಉಡುಪಿ: ಮಂಗಳವಾರದ ಪ್ರಾಕೃತಿಕ ವಿಕೋಪದ ಅತಿ ಹೆಚ್ಚು ಪ್ರಕರಣಗಳು ಉಡುಪಿ ತಾಲೂಕಿನಿಂದ ವರದಿಯಾಗಿದೆ. ಕೊರಂಗ್ರಪಾಡಿಯ ಶೀನ ಎಂಬವರ ಮನೆ ಮೇಲೆ ಮರಬಿದ್ದು 90,000ರೂ.ನಷ್ಟ, ಕೊರಂಗ್ರಪಾಡಿಯ ರಕ್ಷಿತ್ ಹೆಗ್ಡೆಯವರ ಮನೆಗೆ 75,000ರೂ, ಕುತ್ಪಾಡಿಯ ಗಣೇಶ ಸುವರ್ಣರ ಮನೆಗೆ 60,000, ಕುತ್ಪಾಡಿಯ ಸುನೀತಾ ಸುವರ್ಣರ ಮನೆಗೆ 60,000, ಕುತ್ಪಾಡಿಯ ವಿಠಲ ಪೂಜಾರಿಯವರ ಮನೆಗೆ 70,000ರೂ. ಹಾನಿಯಾಗಿದೆ.
ಕುತ್ಪಾಡಿಯ ನಾಗೇಶ ಬಂಗೇರ ಅವರ ಮನೆಗೆ 50,000, ಜಲಜ ಪುತ್ರನ್ ಮನೆಗೆ 50,000, ಶಾರದರ ಮನೆಗೆ 60,000ರೂ., ಕುತ್ಪಾಡಿಯ ವಿನಯ ಡಿ. ಸನಿಲ್ರ ಮನೆ ಮತ್ತು ಕೊಟ್ಟಿಗೆಗೆ 1,04,000ರೂ., ಜಯ ಸುವರ್ಣರ ಮನೆಗೆ 85,000, ವನಜ ಶೆಡ್ತಿಯವರ ಮನೆಗೆ 4,00,000ರೂ., ಸುಜಾತರ ಮನೆಗೆ 3,65,000, ರಾಜು ಪೂಜಾರಿ ಮನೆಗೆ 70,000ರೂ., ಸುಲೋಚನಾ ಶೆಟ್ಟಿ ಮನೆಗೆ 65,000ರೂ., ರಾಮಕೃಷ್ಣ ಭಟ್ ಮನೆಗೆ 60,000ರೂ., ವಾಸು ಸೇರಿಗಾರ್ ಮನೆಗೆ 65,000ರೂ., ಶಂಕರ ಸೇರಿಗಾರ್ ಮನೆಗೆ 60,000ರೂ., ಕುತ್ಪಾಡಿ ಶೇಖರ್ ಮನೆಗೆ 1,00,000ರೂ.ನಷ್ಟವಾದ ಬಗ್ಗೆ ಮಾಹಿತಿ ಬಂದಿದೆ.
ಕಾರ್ಕಳ: ತಾಲೂಕಿನ ಕಸಬಾ ಗ್ರಾಮದ ದಯಾನಂದ ದೇವಾಡಿಗರ ಮನೆಯ ಕಾಂಪೌಂಡ್ ಗೋಡೆ ಕುಸಿದು 1,00,000ರೂ., ನೂರ್ಜಹಾನ್ ಮನೆಗೆ ನೀರು ನುಗ್ಗಿ 50,000ರೂ., ಇರ್ವತ್ತೂರು ಗ್ರಾಮದ ಕುಟ್ಟಿ ಶೆಟ್ಟಿ ಮನೆಗೆ ಹಾಗೂ ಅಡಿಕೆ ತೋಟಕ್ಕೆ 35,000ರೂ., ಬೋಳ ಗ್ರಾಮದ ಮನೋಹರ್ರ ಜಮೀನಿನ ಮಣ್ಣು ಕುಸಿದು 50,000ರೂ.ನಷ್ಟವಾಗಿದೆ.
ಕುಂದಾಪುರ: ತಾಲೂಕಿನ ಆಲೂರು ಗ್ರಾಮದ ಸುಬ್ಬ ಪೂಜಾರಿ ಸಸಿಹಿತ್ಲು ಇವರ ದನವೊಂದು ಸಿಡಿಲು ಬಡಿದು ಮೃತಪಟ್ಟಿಜದ್ದು 60,000ರೂ., ಪಾರ್ವತಿ ಇವರ ಮನೆಗೆ 10,000ರೂ. ಹಾಗೂ ಪದ್ದು ಪೂಜಾರಿ ಇವರ ಮನೆಗೆ 30,000ರೂ.ನಷ್ಟವಾಗಿದೆ.
ಕಾಪು: ತಾಲೂಕಿನ ಪಾಂಗಾಳ ಗ್ರಾಮದ ಸದಾಡಿ ಎಂಬಲ್ಲಿ ಪಂಚಾಯತ್ಗೆ ಸಂಬಂಧಪಟ್ಟ ಕುಡಿಯುವ ನೀರಿನ ಮೀಟರ್ ಬಾಕ್ಸ್, ಪಂಪು ಮೀಟರ್ ಪ್ಯಾನಲ್ ಬೋರ್ಡ್ ವಯರಿಂಗ್ಗೆ ಸಿಡಿಲಿನಿಂದ ಹಾನಿ 50,000ರೂ., ನಡ್ಸಾಲು ಗ್ರಾಮದ ಬಾವ ಹಸನಬ್ಬರ ಮನೆಗೆ 50,000ರೂ., ಬೆಳ್ಳೆ ಗ್ರಾಮದ ಜಾರ್ಜ್ ಸಲ್ಡಾನರ ವಾಸದ ಮನೆಗೆ ಸಿಡಿಲು ಬಡಿದು 6,00,000ರೂ., ಬಡಾ ಗ್ರಾಮದ ರಾಘವೇಂದ್ರ ಮಠದ ಬಳಿಯ ದೇವಯ್ಯ ಆಚಾರಿ ಮನೆಗೆ 50,000ರೂ., ಬಡಾ ಗ್ರಾಮದ ಮುಳ್ಳಗುಡ್ಡೆಯ ಮಹಿಲಪ್ಪಗೌಡರ ಮನೆಗೆ 50,000ರೂ. ಹಾನಿ ಸಂಭವಿಸಿದೆ.
11ಸೆ.ಮೀ. ಮಳೆ: ಜಿಲ್ಲೆಯಲ್ಲಿ ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯ ಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಸರಾಸರಿ 11.28 ಸೆ.ಮೀ. ಮಳೆ ಸುರಿದಿದೆ. ಉಡುಪಿಯಲ್ಲಿ 16.68ಸೆ.ಮೀ., ಕುಂದಾಪುರದಲ್ಲಿ 5.8ಸೆ.ಮೀ. ಹಾಗೂ ಕಾರ್ಕಳದಲ್ಲಿ 11.77ಸೆ.ಮೀ. ಮಳೆಯಾಗಿದೆ.
ಶೀಲಾ, ನಿಧಿ ಆಚಾರ್ಯ ಕುಟುಂಬಕ್ಕೆ ತಲಾ 5 ಲಕ್ಷ ರೂ.ಪರಿಹಾರ ನೀಡಿಕೆ
ಮಂಗಳವಾರ ಬೆಳಗಿನ ಜಾವ ಮನೆಗೆ ಸಿಡಿಲು ಬಡಿದು ಸ್ಥಳದಲ್ಲೇ ಮೃತ ಪಟ್ಟ ಕಾರ್ಕಳ ಬೈಲೂರು ಗ್ರಾಪಂ ಸದಸ್ಯೆ ಶೀಲಾ ನಲ್ಕೆ (36) ಹಾಗೂ ಸಂಜೆ ಶಾಲೆಯಿಂದ ಮನೆಗೆ ಮರಳುತ್ತಿರುವಾಗ ನೆರೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಮೃತಪಟ್ಟ ಪಡುಬಿದ್ರಿ ಸಮೀಪದ ಪಾದೆಬೆಟ್ಟಿನ ನಿಧಿ ಆಚಾರ್ಯ (9)ರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ನಿಧಿಯನ್ನು ವಿತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.
ಇವರಿಬ್ಬರ ಕುಟುಂಬಕ್ಕೆ ವಿಪತ್ತು ಪರಿಹಾರ ನಿಧಿಯಿಂದ ತಲಾ 4 ಲಕ್ಷ ರೂ. ಹಾಗೂ ಪ್ರಧಾನಮಂತ್ರಿ ಪರಿಹಾರ ನಿಧಿಯಿಂದ ತಲಾ ಒಂದು ಲಕ್ಷ ರೂ. ಸೇರಿದಂತೆ ಒಟ್ಟು ತಲಾ ಐದು ಲಕ್ಷ ರೂ. ಪರಿಹಾರವನ್ನು ನೀಡಲಾಗಿದೆ ಎಂದವರು ಪತ್ರಿಕೆಗೆ ತಿಳಿಸಿದ್ದಾರೆ.







