ಹನೂರು: ಮೂಲಭೂತ ಸೌಕರ್ಯಗಳಲ್ಲಿದೆ ಅವ್ಯವಸ್ಥೆಯ ತಾಣವಾದ ಮಲೈಮಹದೇಶ್ವರ ಕ್ರೀಡಾಂಗಣ

ಹನೂರು: ಮಾಜಿ ಸಚಿವ ದಿ.ರಾಜೂಗೌಡರ ಶ್ರಮದ ಫಲವಾಗಿ ಚಾಮರಾಜನಗರ ಜಿಲ್ಲೆಯಲ್ಲಿಯೇ ಪ್ರಥಮ ಕ್ರೀಡಾಂಗಣವಾಗಿ ಹನೂರಿನ ಮಲೈಮಹದೇಶ್ವರ ಕ್ರೀಡಾಂಗಣ ಲೋಕಾರ್ಪಣೆಗೊಂಡು ದಶಕಗಳೇ ಕಳೆದರೂ ಸಹ ಯಾವುದೇ ಮೂಲಭೂತ ಸೌಕರ್ಯಗಳಲ್ಲಿದೇ ಇಂದು ಅವ್ಯವಸ್ಥೆಯ ಆಗರವಾಗಿ ಮಾರ್ಪಟಿದೆ. ಈ ಅವ್ಯವಸ್ಥೆಗೆ ಸಂಬಂಧಪಟ್ಟ ಅಧಿಕಾರಿಗಳ ಬೇಜವಬ್ದಾರಿಯೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಜಿಲ್ಲಾ ಕೇಂದ್ರವಾದ ಚಾಮರಾಜನಗರದಲ್ಲಿ ನಿರ್ಮಾಣವಾಗುವುದಕ್ಕಿಂತ ಮೊದಲೇ ಮಾಜಿ ಸಚಿವ ದಿ.ರಾಜೂಗೌಡರ ದೂರದೃಷ್ಠಿ ಕಾರಣದಿಂದ ಹನೂರು ಪಟ್ಟಣದಲ್ಲಿ ಒಂದು ಸುಸಜ್ಜಿತವಾದ ಕ್ರೀಡಾಂಗಣ ನೀರ್ಮಾಣವಾಯಿತು. ಆದರೆ ನಂತರದ ವರ್ಷಗಳಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಬೇಜವಬ್ದಾರಿತನದಿಂದ ಸರಿಯಾದ ನಿರ್ವಹಣೆ ಇಲ್ಲದೆ ಅಭಿವೃದ್ದಿ ಕುಂಠಿತವಾಗಿದೆ. ಈ ಕ್ರೀಡಾಂಗಣದಲ್ಲಿ ಕೇವಲ ಎರಡು ಶೌಚಾಲಯಲಗಳ ಕೊಠಡಿ ಇದ್ದು, ಅದು ಸಹ ಒಳಾಂಗಣದಲ್ಲಿದೆ. ಶಾಲಾ ಹಾಗೂ ಕಾಲೇಜು ಹಂತದ ಕ್ರೀಡಾಕೂಟಗಳು ನಡೆಯುವಂತಹ ಸಮಯದಲ್ಲಿ ಇಲ್ಲಿಗೆ ಸಾವಿರಾರು ವಿದ್ಯಾರ್ಥಿಗಳು , ವಿದ್ಯಾರ್ಥಿನಿಯರು ಹಾಗೂ ಶಿಕ್ಷಕ ವೃಂದದವರು ಆಗಮಿಸುತ್ತಾರೆ. ಆ ಸಮಯದಲ್ಲಿ ಎಷ್ಟೋ ವಿದ್ಯಾರ್ಥಿಗಳು ಶೌಚಾಲಯಕ್ಕಾಗಿ ಕ್ರೀಡಾಂಗಣದ ಎದುರುಗಡೆ ಇರುವ ಬಯಲು ಪ್ರದೇಶವನ್ನೇ ಅವಲಂಬಿಸುತ್ತಾರೆ. ಈ ಅವ್ಯವಸ್ಥೆಯನ್ನು ಅರಿತ ಇಲ್ಲಿನ ಪ್ರಜ್ಞಾವಂತ ಯುವಕರು ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಬಳಿ ಅನೇಕ ಬಾರಿ ಶೌಚಾಲಯಗಳ ನಿರ್ಮಾಣಕ್ಕಾಗಿ ಮನವಿ ಸಲ್ಲಿಸಿದ್ದು, ಆದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ಅವರು ದೂರುತ್ತಾರೆ.
ಕ್ರೀಡಾಂಗಣದ ವೀಕ್ಷಕರ ಗ್ಯಾಲರಿ ಸೇರಿ ಪ್ರವೇಶ ದ್ವಾರದ ಗೋಡೆಗಳು ಬಿರುಕು ಬಿಟ್ಟಿದ್ದು, ಇದನ್ನು ರಿಪೇರಿ ಮಾಡಿಸುವ ಬಗ್ಗೆ ಹಾಗೂ ಇಲ್ಲಿ ಕುಡಿಯುವ ನೀರಿನ ಟ್ಯಾಂಕ್ನ ವ್ಯವಸ್ಥೆಯನ್ನು ಕಲ್ಪಿಸುವ ಬಗ್ಗೆ ಲಿಖಿತವಾಗಿ ದೂರು ನೀಡಿದರೂ ಸಹ ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ಇಲ್ಲಿನ ಯುವಕರು ಆರೋಪಿಸುತ್ತಾರೆ.
ಕೆಲವೊಮ್ಮೆ ಜೋರು ಮಳೆ ಬಿದ್ದಾಗ ಇಡೀ ಕ್ರೀಡಾಂಗಣವೇ ಭರ್ತಿಯಾಗುತ್ತದೆ. ಎಲ್ಲಿಯೂ ಸಹ ಮಳೆ ನೀರು ಹೋಗದೆ ಕ್ರೀಡಾಂಗಣದ ಟ್ರ್ಯಾಕ್ ಮೇಲೆ ನೀರು ನಿಂತು ಹುಲ್ಲು ಬೆಳೆದಿದ್ದು, ಟ್ರ್ಯಾಕ್ಗಳು ನಶಿಸುತ್ತಿದೆ. ಮಳೆಯ ನೀರು ಹರಿದು ಹೋಗಲು ನಿರ್ಮಾಣ ಮಾಡಿರುವ ಕಾಲುವೆ (ಚರಂಡಿ) ಕಸದಿಂದ ತುಂಬಿ ಸುತ್ತಲೂ ಪಾರ್ಥೇನಿಯಂ ಮತ್ತು ಕಳೆಗಿಡಗಳು ಬೆಳೆದು ನಿಂತಿದೆ. ಅದನ್ನೂ ಸಹ ಸ್ವಚ್ಚಮಾಡಲು ಮುಂದಾಗದಿರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಅಲ್ಲದೇ ಮುಂಜಾನೆ ಹಾಗೂ ರಾತ್ರಿಯ ಸಮಯದಲ್ಲಿ ವಾಯುವಿಹಾರಕ್ಕೆಂದು ಪಟ್ಟಣದ ನಿವಾಸಿಗಳು ಬರುತ್ತಾರೆ. ಆದರೂ ಕ್ರೀಡಾಂಗಣದಲ್ಲಿ ವಿದ್ಯುತ್ ದೀಪದ ಆಳವಡಿಕೆಗೆ ಮುಂದಾಗಿಲ್ಲ ಎಂಬ ದೂರು ಕೇಳಿ ಬಂದಿದೆ
ಇಲ್ಲಿನ ಅವ್ಯವಸ್ಥೆಯ ಬಗ್ಗೆ ಅಧಿಕಾರಿಗಳ ಬಳಿ ಗಮನಕ್ಕೆ ತಂದಾಗಲೆಲ್ಲಾ ಕ್ರೀಡಾಂಗಣವನ್ನು ಮೇಲ್ದರ್ಜೆಗೆ ಏರಿಸಲು ಕ್ರಮ ಕೈಗೂಳ್ಳಲಾಗುವುದು ಎಂದು ಹೇಳುತ್ತಾರೆ ಹೊರತು ಇಲ್ಲಿ ಯಾವುದೇ ಅಭಿವೃದ್ದಿ ಕಾರ್ಯಗಳು ನಡೆದಿಲ್ಲ. ಜಿಲ್ಲಾ ಮಟ್ಟದ ಯುವಜನ ಸೇವಾ ಇಲಾಖೆ ಅಧಿಕಾರಿಗಳು ಹನೂರು ಪಟ್ಟಣದಲ್ಲಿ ಒಂದು ಕ್ರೀಡಾಂಗಣ ಇದೆ ಎಂಬುದನ್ನೇ ಮರೆತಂತೆ ಇದೆ .
-ಇದ್ರೀಷ್ ಪಾಷ, ಹನೂರು ಕ್ರೀಡಾಪಟು
ಈ ವರ್ಷ ದುರುಸ್ಥಿ, ಶೌಚಾಲಯ ಸೇರಿದಂತೆ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ಕ್ರೀಯಾಯೋಜನೆಗೆ ಸೇರಿಸಿ ವಿಶೇಷವಾಗಿ ಹನೂರು ಕ್ರೀಡಾಂಗಣವನ್ನು ಅಭಿವೃದ್ದಿ ಪಡಿಸಲಾಗುವುದು
-ಚೆಲುವಯ್ಯ, ಮುಖ್ಯಾಧಿಕಾರಿ, ಯುವಜನಸೇವಾ ಕ್ರೀಡಾ ಇಲಾಖೆ ಚಾಮರಾಜನಗರ







