ಹುಸೈನಬ್ಬರ ನಿಗೂಢ ಸಾವಿನ ನಿಷ್ಪಕ್ಷಪಾತದ ತನಿಖೆಗಾಗಿ ವಿಶೇಷ ತನಿಖಾ ತಂಡಕ್ಕೆ ವಹಿಸಿ: ಎಸ್ಡಿಪಿಐ ದ.ಕ. ಜಿಲ್ಲೆ
ಮಂಗಳೂರು, ಮೇ 30: ಉಡುಪಿ ಜಿಲ್ಲೆಯ ಪೆರ್ಡೂರಿನಲ್ಲಿ ಇಂದು ನಡೆದಿರುವ ದನದ ವ್ಯಾಪಾರಿ ಹುಸೈನಬ್ಬ ಜೋಕಟ್ಟೆಯವರ ಶಂಕಾಸ್ಪದ ಸಾವು ಬಜರಂಗದಳ ಗೂಂಡಾ ಗುಂಪಿನಿಂದ ಆಗಿರುವ ಕೊಲೆ ಎಂದು ಮೃತರ ತಮ್ಮ ಮುಹಮ್ಮದ್ ದೂರು ನೀಡಿದ್ದು, ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ನಿಂಬರಗಿ ನೇರವಾಗಿ ಮಧ್ಯ ಪ್ರವೇಶಿಸಿ ಈ ಪ್ರಕರಣವನ್ನು ವಿಶೇಷ ತನಿಖಾ ದಳಕ್ಕೆ (SIT) ವಹಿಸಿ ಆರೋಪಿಗಳನ್ನು ಬಂಧಿಸಿ, ಶೀಘ್ರ ಕಾನೂನು ಕ್ರಮ ಜರುಗಿಸಬೇಕೆಂದು ಎಸ್ಡಿಪಿಐ ದ ಕ ಜಿಲ್ಲಾ ಅಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಆಗ್ರಹಿಸಿದ್ದಾರೆ.
ಹುಸೈನಬ್ಬ ಕಳೆದ ಸುಮಾರು 15 ವರ್ಷಗಳಿಂದ ದನದ ವ್ಯಾಪಾರವನ್ನು ಸಕ್ರಮವಾಗಿ ಮಾಡಿಕೊಂಡು ಬರುತ್ತಿದ್ದು, ಅದರಂತೆ ನಿನ್ನೆ ಕೂಡಾ ಪೆರ್ಡೂರಿನಿಂದ ದನಗಳನ್ನು ತರುವಾಗ ಶೀನಬೆಟ್ಟು ಎಂಬಲ್ಲಿ ಸೂರಿ ಯಾನೆ ಸೂರ್ಯ ನೇತೃತ್ವದ ಬಜರಂಗದಳದ ಗೂಂಡಾಗಳ ಗುಂಪು ಅಡ್ಡಗಟ್ಟಿದ್ದು, ಈ ಸಂದರ್ಭ ವಾಹನದಲ್ಲಿದ್ದ ಇತರ ಮೂವರು ಓಡಿ ತಪ್ಪಿಸಿಕೊಂಡಿದ್ದು, ಹಿರಿಯ ವಯಸ್ಸಿನ ಹುಸೈನಬ್ಬ ಗೂಂಡಾಗಳ ಕೈಗೆ ಸಿಕ್ಕಿಬಿದ್ದಿದ್ದರು ಎಂದು ಮೃತರ ತಮ್ಮ ಮುಹಮ್ಮದ್ ನೀಡಿದ ದೂರಿನಲ್ಲಿ ಸ್ಪಷ್ಟಪಡಿಸಿದ್ದಾರೆ. ಆದರೆ ಅಚ್ಚರಿದಾಯಕ ವಿಷಯವೆಂದರೆ ಬಜರಂಗದಳದ ಗೂಂಡಾಗಳು ಅಡ್ಡಗಟ್ಟುವಾಗ ಅವರೊಂದಿಗೆ ಹಿರಿಯಡ್ಕ ಠಾಣೆಯ ಕೆಲ ಪೊಲೀಸರೂ ಕೂಡಾ ಹಾಜರಿದ್ದರು ಎಂದು ಘಟನೆಯನ್ನು ಕಣ್ಣಾರೆ ಕಂಡವರು ತಿಳಿಸಿರುತ್ತಾರೆ.
ಈ ಪ್ರಕರಣವು ಹಿರಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯಡಿಯಲ್ಲಿ ಬರುತ್ತಿದ್ದು, ಹಿರಿಯಡ್ಕ ಠಾಣೆಯು ಬಜರಂಗದಳದ ಗೂಂಡಾಗಳ ಅಡ್ಡೆಯಂತಾಗಿದೆ ಎಂದವರು ಆರೋಪಿಸಿದ್ದಾರೆ. ಈ ಹಿಂದೆಯೂ ಕೂಡಾ ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ರೀತಿಯ ಅಕ್ರಮ ದಾಳಿಗಳು ದನದ ವ್ಯಾಪಾರಸ್ಥರ ಮೇಲೆ ನಡೆದಿದ್ದು, ಯಾವುದೇ ಪ್ರಕರಣವನ್ನು ದಾಖಲಾಗದಂತೆ ಅಥವಾ ಒಂದು ವೇಳೆ ದೂರು ದಾಖಲಾದರೂ ಸೂಕ್ತ ಕ್ರಮ ಕೈಗೊಳ್ಳದಂತೆ ತಡೆಯುವಲ್ಲಿ ಹಿರಿಯಡ್ಕ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದರು ಎಂದು ಅವರು ಆರೋಪಿಸಿದ್ದಾರೆ.
ಈಗ ಪ್ರಕರಣ ಗಂಭೀರ ಮಟ್ಟ ತಲುಪಿದ್ದು, ದನ ಸಾಗಾಟದ ವಾಹನವನ್ನು ತಡೆಯುವಾಗ ಬಜರಂಗದಳದ ಗೂಂಡಾಗಳ ಜೊತೆಗಿದ್ದ ಪೊಲೀಸರ ಸಹಕಾರವಿಲ್ಲದೆ ಗೂಂಡಾಗಳು ವಾಹನವನ್ನು ಆ ಮಟ್ಟದಲ್ಲಿ ಜಖಂಗೊಳಿಸಲು ಸಾಧ್ಯವೇ ಇಲ್ಲ ಎಂಬುವುದು ಸ್ಪಷ್ಟವಾಗುತ್ತದೆ. ಆದುದರಿಂದ ಪೊಲೀಸ್ ಅಧೀಕ್ಷಕರಾದ ಲಕ್ಷ್ಮಣ್ ನಿಂಬರಗಿಯವರು ಈ ಪ್ರಕರಣವನ್ನು ನಿಷ್ಪಕ್ಷಪಾತದ ತನಿಖೆಗಾಗಿ ವಿಶೇಷ ತನಿಖಾ ತಂಡಕ್ಕೆ (SIT) ವಹಿಸಬೇಕು, ಘಟನೆಗೆ ಸಂಬಂಧಪಟ್ಟ ಹಿರಿಯಡ್ಕ ಪೊಲೀಸ್ ಠಾಣೆಯ ಪೊಲೀಸರನ್ನು ಕೂಡಲೇ ವರ್ಗಾವಣೆಗೊಳಿಸಬೇಕು ಮತ್ತು ರಾಜ್ಯ ಸರಕಾರ ಮೃತರ ಕುಟುಂಬಕ್ಕೆ ಕೂಡಲೇ ಸೂಕ್ತ ಪರಿಹಾರ ಒದಗಿಸಬೇಕೆಂದು ಅಥಾವುಲ್ಲಾ ಜೋಕಟ್ಟೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







