ಹೆಜಮಾಡಿ - ಪಡುಬಿದ್ರೆ ಸಂಪರ್ಕ ರಸ್ತೆ: ಕಾಮಗಾರಿ ಪರಿಶೀಲನೆಗೆ ತಜ್ಞರ ತಂಡ

ಪಡುಬಿದ್ರೆ, ಮೇ 31 : ಹೆಜಮಾಡಿ-ಪಡುಬಿದ್ರೆ ಸಂಪರ್ಕಿಸಲು ಮುಟ್ಟಳಿವೆ ಪ್ರದೇಶದಲ್ಲಿ ನಿರ್ಮಾಣವಾದ ಸೇತುವೆ ಹಾಗೂ ರಸ್ತೆ ಕಾಮಗಾರಿಯ ಬಗ್ಗೆ ಪರಿಶೀಲಿಸಲು ಬೆಂಗಳೂರಿನ ಸಿವಿಲೆಡ್ ಟೆಕ್ನಾಲಜಿಸ್ ಪ್ರವೈಟ್ ಲಿಮಿಟೆಡ್ ಸಂಸ್ಥೆಯ ತಜ್ಞರ ತಂಡ ಆಗಮಿಸಿ ಪರಿಶೀಲಿಸಲಿದೆ ಎಂದು ಬಂದರು ಮತ್ತು ಮೀನುಗಾರಿಕಾ ಇಲಾಖೆ ಎ.ಇ ನಾಗರಾಜ್ ಹೇಳಿದ್ದಾರೆ.
ಈಗ ನಡೆದಿರುವ ಕಾಮಗಾರಿ ಹಾಗೂ ನೀರಿನ ಹರಿವಿನ ಬಗ್ಗೆ ಅವರಿಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ. ಕಳೆದ ಮೂರು ದಿನಗಳ ಮಳೆಯಿಂದಾದ ಸಮಸ್ಯೆ ಬಗ್ಗೆಯೂ ಅವರಿಗೆ ಸಚಿತ್ರ ವರದಿ ನೀಡಲಾಗಿದೆ. ಅವರು ಪರಿಶೀಲನೆಗೆ ಬಂದಾಗ ಸಾರ್ವಜನಿಕರ ಅಭಿಪ್ರಾಯ ಪಡೆಯಲಾಗುವುದು. ಪರಿಶೀಲನಾ ಸಮಿತಿ ನೀಡುವ ಮಾರ್ಗದರ್ಶನದಂತೆ ಮತ್ತೆ ರಸ್ತೆ ನಿರ್ಮಾಣ ಮಾಡಲಾಗುವುದು. ಮಳೆಯಿಂದ ನೆರೆ ಉಂಟಾದ ಸಂದರ್ಭದಲ್ಲಿ ಜನರ ಸಮಾಧಾನ ಕ್ಕೋಸ್ಕರ ರಸ್ತೆಯನ್ನು ಕಡಿದು ನೀರು ಹರಿಯಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಭೀತಿ ಉಂಟುಮಾಡಿದ್ದ ಕಾಮಗಾರಿ: ಹೆಜಮಾಡಿ-ಪಡುಬಿದ್ರಿ ಸಂಪರ್ಕಿಸಲು ಮುಟ್ಟಳಿವೆಯಲ್ಲಿ ಸೇತುವೆ ಹಾಗೂ ರಸ್ತೆ ನಿರ್ಮಾಣ ಮಾಡಬೇಕು ಎಂಬ ಬೇಡಿಕೆ ಬಹುಕಾಲದಿಂದಲೂ ಇತ್ತು. ಈ ನಿಟ್ಟಿನಲ್ಲಿ ಕಳೆದ ವರ್ಷ ನಬಾರ್ಡ್ನ ರೂ. 80 ಲಕ್ಷ ಅನುದಾನದಲ್ಲಿ 65 ಮೀಟರ್ ಉದ್ದದ ಸೇತುವೆ ಹಾಗೂ 190 ಮೀಟರ್ ಉದ್ದಕ್ಕೆ ಮಣ್ಣಿನ ರಸ್ತೆ ನಿರ್ಮಿಸಲಾಗಿತ್ತು. ರಸ್ತೆ, ಸೇತುವೆ ಕಾಮಗಾರಿ ಅಗತ್ಯತೆ ಇದ್ದರೂ ವೈಜ್ಞಾನಿಕವಾಗಿ ಕಾಮಗಾರಿ ನಡೆಸಲಿಲ್ಲ. ಇದರಿಂದ ಮಳೆಗಾಲದಲ್ಲಿ ನದಿ ತೀರದ ಪ್ರದೇಶ ಮುಳುಗಡೆಯಾಗಲಿದೆ ಎಂದು ಸ್ಥಳೀಯರು ಎಚ್ಚರಿಸಿದ್ದರು. ಆದರೆ ಅಂದು ಎಂಜಿನಿಯರ್ ಈ ಬಗ್ಗೆ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಭರವಸೆ ನೀಡಿದ್ದರು.
ಕಳೆದೊಂದು ಎರಡು ದಿನಗಳಿಂದ ಸುರಿದ ಮಳೆಯಿಂದ ಸಮುದ್ರ ಹಾಗೂ ಕಾಮಿನಿ ನದಿಯ ಮಧ್ಯೆ ನಿರ್ಮಾಣವಾದ ಸೇತುವೆ ಹಾಗೂ ರಸ್ತೆಯಿಂದ ನೀರು ಹರಿದು ಬಂದು ಮುಳುಗಡೆಯ ಭೀತಿಯನ್ನು ಎದುರಿಸಿದರು. ಸ್ಥಳೀಯರು ಎಂಜಿನಿಯರ್ ಅವರನ್ನು ಸ್ಥಳಕ್ಕೆ ಕರೆಸಿಕೊಂಡು ತೆರವುಗೊಳಿಸಬೇಕು ಎಂದು ಪಟ್ಟುಹಿಡಿದರು. ಬಳಿಕ ಜೆಸಿಬಿ ಮೂಲಕ ರಸ್ತೆಯನ್ನು ಕಡಿದು ನದಿ ನೀರು ಸಮುದ್ರಕ್ಕೆ ಹೋಗಲು ವ್ಯವಸ್ಥೆ ಕಲ್ಪಿಸಲಾಯಿತು.
ನೀರು ಹರಿಯಲು ಕಡಿದ ಪ್ರದೇಶವೇ ಸೇತುವೆ ನಿರ್ಮಾಣಕ್ಕೆ ಸೂಕ್ತ ಸ್ಥಳವಾಗಿದೆ. ಈಗ ಸೇತುವೆ ನಿರ್ಮಿಸಿರುವ ಸ್ಥಳ ಎತ್ತರವಾಗಿರುವುದರಿಂದ ಅಲ್ಲಿ ನೀರಿನ ಹೊರಹರಿವು ಇಲ್ಲ. ಇದರಿಂದ ಹಿನ್ನೀರಿನ ಪ್ರಮಾಣ ಹೆಚ್ಚಳಕ್ಕೂ ಕಾರಣವಾಗಲಿದೆ. ಸೇತುವೆಯಡಿ ಉಬ್ಬರದಿಂದ ಸಮುದ್ರದ ಉಪ್ಪು ನೀರು ನದಿ ಸೇರುತ್ತಿದೆ. ಅಲ್ಲದೆ ಈ ಪ್ರದೇಶದಲ್ಲಿ ಮರಳು ಶೇಖರಣೆಯಾಗುತ್ತಿದೆ.
ತಡೆಗೋಡೆ ನಿರ್ಮಾಣ: ಹೆಜಮಾಡಿ ಮುಟ್ಟಳಿವೆ ಪ್ರದೇಶದಲ್ಲಿ ಪಡುಬಿದ್ರಿ ಕಡಲ ಕಿನಾರೆ ಸಂಪರ್ಕಿಸಲು ನಿರ್ಮಿಸುತ್ತಿರುವ ರಸ್ತೆ ರಕ್ಷಣೆಗಾಗಿ ಬಂದರು ಹಾಗೂ ಮೀನುಗಾರಿಕಾ ಇಲಾಖೆ ಮೂಲಕ ಸಮುದ್ರ ತಡೆಗೋಡೆ ನಿರ್ಮಾಣ ಮಾಡಲಾಗುತ್ತಿದೆ.
ರೂ. 2 ಕೋಟಿ ವೆಚ್ಚದಲ್ಲಿ ಸುಮಾರು 200 ಮೀಟರ್ ಉದ್ದಕ್ಕೆ ಅಳಿವೆ ಪ್ರದೇಶದಲ್ಲಿ ಸಮುದ್ರ ತಡೆಗೋಡೆ ನಿರ್ಮಾಣ ಮಾಡುವ ಕಾಮಗಾರಿಯನ್ನೂ ಈಗಾಗಲೇ ಆರಂಭಿಸಲಾಗಿದೆ. ಮುಟ್ಟಳಿವೆ ಪ್ರದೇಶದಲ್ಲಿ ಬಂದರು ಮತ್ತು ಮೀನುಗಾರಿಕಾ ಇಲಾಖೆ ಮೂಲಕ ರೂ. 60 ಲಕ್ಷ ವೆಚ್ಚದಲ್ಲಿ ಸೇತುವೆ ಹಾಗೂ ರೂ. 20 ಲಕ್ಷ ವೆಚ್ಚದಲ್ಲಿ ಸಂಪರ್ಕ ರಸ್ತೆಯನ್ನು ನಿರ್ಮಿಸಲಾಗುತ್ತಿದೆ.







