‘ಪೇಜಾವರ ಮಠದಿಂದ ದಿಲ್ಲಿಯಲ್ಲಿ ವೈದಿಕ ಸಂಶೋಧನಾ ಕೇಂದ್ರ’

ಉಡುಪಿ, ಜೂ.1: ಪೇಜಾವರ ಮಠದ ವತಿಯಿಂದ ಹೊಸದಿಲ್ಲಿಯಲ್ಲಿ ಸುಮಾರು 6 ಕೋಟಿ ರೂ.ವೆಚ್ಚದಲ್ಲಿ ‘ವೈದಿಕ ಸಂಶೋಧನಾ ಕೇಂದ್ರ’ವೊಂದು ತಲೆ ಎತ್ತಲಿದ್ದು, ಅದರಲ್ಲಿ ವೇದಾಂತ, ಭಾಗವತ, ಪುರಾಣ ಹಾಗೂ ಉಪನಿಷತ್ಗಳ ಹಿಂದಿ ಭಾಷಾಂತರ ಹಾಗೂ ಪ್ರಕಟಣೆ ಕಾರ್ಯ ನಡೆಯಲಿದೆ ಎಂದು ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನರಸಿಂಹರಾವ್ ಅವರು ಪ್ರಧಾನಿಯಾಗಿದ್ದಾಗ ನೀಡಿದ ಅರ್ಧ ಎಕರೆ ಹಾಗೂ ಎಚ್.ಡಿ.ದೇವೇಗೌಡರು ಪ್ರಧಾನಿಯಾಗಿ ನೀಡಿದ ಒಂದು ಎಕರೆ ಸೇರಿ ಒಂದೂವರೆ ಎಕರೆ ಪ್ರದೇಶದಲ್ಲಿ ಈ ಸಂಶೋಧನಾ ಕೇಂದ್ರ ನಿರ್ಮಾಣ ಗೊಳ್ಳುತಿದ್ದು, ಜೂನ್ ತಿಂಗಳ ಕೊನೆಯ ವಾರ ಅಥವಾ ಜುಲೈ ಮೊದಲ ವಾರದಲ್ಲಿ ಇದು ಉದ್ಘಾಟನೆಗೊಳ್ಳಲಿದೆ ಎಂದರು.
ಇದರಲ್ಲಿ ಶ್ರೀಮಧ್ವಾಚಾರ್ಯರ ವಿವಿಧ ಗ್ರಂಥಗಳು ಸೇರಿದಂತೆ ಪುರಾತನ ಗ್ರಂಥಗಳನ್ನು ಹಿಂದಿಗೆ ತುರ್ಜಮೆ ಮಾಡಿ ಪ್ರಕಟಿಸುವ ಕಾರ್ಯನಡೆಯಲಿದೆ. ಇದೇ ಉದ್ದೇಶಗಳಿಗೆ ಸೀಮಿತವಾಗಿ ಈ ಜಾಗವನ್ನು ನೀಡಲಾಗಿದೆ. ಪೇಜಾವರ ಮಠದ ಎರಡನೇ ಸಂಶೋಧನಾ ಕೇಂದ್ರ ಇದಾಗಿದ್ದು, ಮೊದಲನೇಯದು ಪೂರ್ಣಪ್ರಜ್ಞ ಸಂಶೋಧನಾ ಕೇಂದ್ರ ಬೆಂಗಳೂರಿನಲ್ಲಿದೆ ಎಂದರು.
ಮಠದ ಜಾಗ ಅತಿಕ್ರಮಣ: ಉತ್ತರ ಪ್ರದೇಶದ ಮಥುರಾದ ವೃಂದಾವನ ದಲ್ಲಿ ತಮ್ಮ ಗುರುಗಳಾದ ಶ್ರೀವಿದ್ಯಾಮಾನ್ಯತೀರ್ಥರ ಹೆಸರಿನಲ್ಲಿ ದಾನವಾಗಿ ನೀಡಿದ ಒಂದೂವರೆ ಎಕರೆ ಜಾಗವನ್ನು ಅತಿಕ್ರಮಿಸಿಕೊಳ್ಳಲಾಗಿದ್ದು, ಇದೀಗ ನ್ಯಾಯಾಲಯ ತಮ್ಮ ಪರವಾಗಿ ತೀರ್ಪು ನೀಡದರೂ ಅದನ್ನು ಬಿಟ್ಟುಕೊಟ್ಟಿಲ್ಲ ಎಂದು ಪೇಜಾವರಶ್ರೀಗಳು ತಿಳಿಸಿದರು.
ಈ ಕುರಿತು ತಾವು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯಾನಂದಜಿ ಅವರನ್ನು ಲಕ್ನೋದಲ್ಲಿ ಭೇಟಿಯಾಗಿ ವಿಷಯ ವಿವರಿಸಿದ್ದು, ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಈ ಜಾಗದಲ್ಲಿ ವಿದ್ಯಾಮಾನ್ಯರ ಹೆಸರಿನಲ್ಲಿ ಆಶ್ರಮ ನಿರ್ಮಿಸುವುದಾಗಿ ಅವರು ತಿಳಿಸಿದರು.
ಕಳೆದ ಪರ್ಯಾಯ ಸಂದರ್ಭದಲ್ಲಿ ಕಾಣಿಸಿಕೊಂಡ ಬೆನ್ನುನೋವಿನಿಂದ ತಾವು ಚೇತರಿಸಿಕೊಂಡಿದ್ದು, ಇದೀಗ ಎಂದಿನ ಪ್ರವಾಸ ಹಾಗೂ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿರುವುದಾಗಿ ಹೇಳಿದ ಶ್ರೀಗಳು, ತಾನು ಹರಿದ್ವಾರ, ಹೊಸದಿಲ್ಲಿ, ಲಕ್ನೋ, ಕಾಶಿ ಪ್ರವಾಸದಿಂದ ಹಿಂದಿರುಗಿದ್ದಾಗಿ ತಿಳಿಸಿದರು.
ಆನಂದತೀರ್ಥ ವಿದ್ಯಾಲಯ: ರಾಜ್ಯ ಸರಕಾರ ಮಧ್ವಾಚಾರ್ಯರ ಜನ್ಮಭೂಮಿ ಪಾಜಕದಲ್ಲಿ ನೀಡಿದ 40 ಎಕರೆ ಪ್ರದೇಶದಲ್ಲಿ ‘ಆನಂದತೀರ್ಥ ವಿದ್ಯಾಲಯ’ ನಿರ್ಮಾಣಗೊಳ್ಳುತ್ತಿದ್ದು, ಇದು ವಸತಿಶಾಲೆಯಾಗಿದೆ. ಇಲ್ಲಿ ಎಲ್ಕೆಜಿಯಿಂದ ಪ್ರಾರಂಭಿಸಿ ಪದವಿವರೆಗೆ ವಿದ್ಯಾಭ್ಯಾಸ ವಸತಿ ಸಹಿತ ದೊರೆಯಲಿದೆ ಎಂದರು. ಇಲ್ಲೀಗ ಯುಕೆಜಿಯಿಂದ ಪಿಯುಸಿಯವರೆಗೆ 800 ಮಕ್ಕಳು ವಿದ್ಯಾಭ್ಯಾಸ ಮಾಡುತಿದ್ದು, ಈ ವರ್ಷ ದೇಶದಾದ್ಯಂತದಿಂದ ಬಂದ 200 ವಿದ್ಯಾರ್ಥಿಗಳು ಸೇರ್ಪಡೆಗೊಂಡಿದ್ದಾರೆ ಎಂದರು.
ಪಾಜಕದಲ್ಲಿ ವಿಶೇಷ ಧಾರ್ಮಿಕ ಶಿಕ್ಷಣವನ್ನು ಪಡೆಯಲು ಅವಕಾಶವಿದ್ದು, ಇವರಿಗೆ ಊಟ ಮತ್ತು ವಸತಿ ಉಚಿತವಾಗಿರುತ್ತದೆ. ಶಿಕ್ಷಣದಲ್ಲೂ ರಿಯಾಯಿತಿ ಇರಲಿದೆ ಎಂದರು. ಸಂಸ್ಕೃತ ವಿದ್ಯಾಪೀಠವೂ ಇಲ್ಲಿದೆ ಎಂದು ವಿವರಿಸಿದರು.
ಬೆಂಗಳೂರಿನ ಮಾರತನಹಳ್ಳಿಯಲ್ಲಿ ಸುಮಾರು 20 ಕೋಟಿ ರೂ.ವೆಚ್ಚದಲ್ಲಿ ಸುಸಜ್ಜಿತ ಆಸ್ಪತ್ರೆ ಕಟ್ಟಡವೊಂದು ನಿರ್ಮಾಣಗೊಳ್ಳುತ್ತಿದೆ. ಈಗಾಗಲೇ 15 ಕೋಟಿ ರೂ.ಖರ್ಚಾಗಿದ್ದು, ಇನ್ನೂ 5-6 ಕೋಟಿ ರೂ.ಗಳ ಅಗತ್ಯವಿದೆ. ಹುಬ್ಬಳ್ಳಿಯಲ್ಲಿ ಪದವಿ ಪೂರ್ವ ಕಾಲೇಜು ಹಾಗೂ ಶಿವಮೊಗ್ಗದಲ್ಲಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾರ್ಥಿ ನಿಲಯ ಪೇಜಾವರ ಮಠದ ವತಿಯಿಂದ ನಿರ್ಮಾಣಗೊಳ್ಳುತ್ತಿದೆ ಎಂದವರು ಹೇಳಿದರು.