ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದಿಂದ ವಿಶ್ವ ಹಾಲು ದಿನಾಚರಣೆ

ಮಂಗಳೂರು, ಜೂ.1: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದಿಂದ ವಿಶ್ವ ಹಾಲು ದಿನಾಚರಣೆಯು ವಾಮಂಜೂರಿನ ಮಂಗಳಜ್ಯೋತಿ ಸಮಗ್ರ ಶಾಲೆಯಲ್ಲಿ ಶುಕ್ರವಾರ ನಡೆಯಿತು.
ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಶಾಲೆಯ ಸುಮಾರು 600 ವಿದ್ಯಾರ್ಥಿಗಳಿಗೆ ಉಚಿತ ನಂದಿನಿ ಸುವಾಸಿತ ಹಾಲನ್ನು ವಿತರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಹಾಲು ಉತ್ಪಾದನೆ, ಸಂಗ್ರಹಣೆ, ಸಂಸ್ಕರಣೆ, ವಿತರಣೆ ಮತ್ತು ಗೋವಿನಿಂದ ಗ್ರಾಹಕರವರೆಗಿನ ಚಟುವಟಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದವರ ಸೇವೆ ಸ್ಮರಿಸಿ ಕೃತಜ್ಞತೆ ಸಲ್ಲಿಸುವುದು ವಿಶ್ವ ಹಾಲು ದಿನಾಚರಣೆಯ ಉದ್ದೇಶವಾಗಿದೆ ಎಂದರು.
ಹಾಲು ಸಮತೋಲನ ಹಾಗೂ ಪರಿಪೂರ್ಣ ಆಹಾರವಾಗಿದ್ದು, ಇದರ ಸೇವನೆಯಿಂದ ಮಾನವನ ಸರ್ವಾಂಗೀಣ ಆರೋಗ್ಯ ವೃದ್ಧಿಯಾಗಲಿದೆ. ಅಭಿವೃದ್ಧಿಶೀಲ ರಾಷ್ಟಗಳಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಸೇವನೆ ಪ್ರಮಾಣ ಹೆಚ್ಚಾಗಿರುತ್ತದೆ. ಭಾರತದಲ್ಲಿ ಅಪೌಷ್ಟಿಕತೆ ಹೆಚ್ಚಿರುವುದರಿಂದ ಹಾಲು ಮತ್ತು ಹಾಲಿನ ಉತ್ಪನ್ನಗಳ ಸೇವನೆ ಪ್ರಮಾಣ ಹೆಚ್ಚಿಸುವ ಅಗತ್ಯವಿದೆ ಎಂದು ರವಿರಾಜ ಹೆಗ್ಡೆ ತಿಳಿಸಿದರು.
ಒಕ್ಕೂಟದ ವ್ಯವಸ್ಥಾಪಕ ಜಯದೇವಪ್ಪ ಕೆ., ಶಾಲೆಯ ಪ್ರೌಢಶಾಲಾ ಮುಖ್ಯ ಶಿಕ್ಷಕ ಅಶೋಕ್ ಶೆಟ್ಟಿ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಮಾರಿಯೆಟ್ ಮಸ್ಕರೇನಸ್, ರಮೇಶ್ ಆಚಾರ್, ಉಪವ್ಯವಸ್ಥಾಪಕ ರಮೇಶ್ ಬೂದುಗಟ್ಟಿ, ಮಾರುಕಟ್ಟೆ ಅಧಿಕಾರಿ ಚೇತನ್ ಉಪಸ್ಥಿತರಿದ್ದರು. ಅಧೀಕ್ಷಕ ಎಂ.ರವಿ ಕಾರ್ಯಕ್ರಮ ನಿರೂಪಿಸಿದರು.