ಸಾಸ್ತಾನ ಟೋಲ್ಗೇಟ್ನಲ್ಲಿ ನೌಕರರ ಪ್ರತಿಭಟನೆ: ಅರ್ಧ ದಿನ ಶುಲ್ಕರಹಿತ ಪ್ರಯಾಣ !

ಉಡುಪಿ, ಜೂ.1: ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಾಸ್ತಾನ ಗುಂಡ್ಮಿ ಟೋಲ್ ಗೇಟ್ನ ಸಿಬಂದಿಗಳು ಜೂ 1ರಂದು ಹಠಾತ್ ಮುಷ್ಕರ ನಡೆಸಿದರು.
ಇಲ್ಲಿ ದುಡಿಯುತ್ತಿರುವ 70 ಮಂದಿ ನೌಕರರಿಗೆ ಸರಿಯಾದ ವೇತನ ನಿಗದಿ ಮಾಡಬೇಕು, ಉದ್ಯೋಗ ಭದ್ರತೆ ನೀಡಬೇಕು ಹಾಗೂ ಕಾರ್ಮಿಕರಲ್ಲಿ ತಾರತಮ್ಯ ಮಾಡಬಾರದು. ಕಾರ್ಮಿಕ ನಾಯಕರುಗಳಿಗೆ ಕಿರುಕುಳ ನೀಡಬಾರದು ಎಂದು ಮುಷ್ಕರನಿರತರು ಆಗ್ರಹಿಸಿದರು. ಕರ್ತವ್ಯ ನಿರ್ವಹಿಸಲು ಪೂರಕ ವಾತಾವರಣ ನಿರ್ಮಿಸಿಕೊಡಬೇಕು. ಸಿಬಂದಿ ಕೊರತೆ ನೀಗಿಸಬೇಕು ಎಂದು ಅವರು ಒತ್ತಾಯಿಸಿದರು.
ಟೋಲ್ಗೇಟ್ ಸಿಬ್ಬಂದಿಗಳು ಮುಷ್ಕರ ನಿರತರಾಗಿದ್ದ ವೇಳೆಯಲ್ಲಿ ಘನ ವಾಹನಗಳು ಯಾವುದೇ ಹಣ ಪಾವತಿಸದೇ ಸಂಚರಿಸಿದವು. ಅಪರಾಹ್ನ 12 ಗಂಟೆ ಸುಮಾರಿಗೆ ಟೋಲ್ ಮ್ಯಾನೇಜರ್ ರವಿಬಾಬು ಹಾಗೂ ಸಾಸ್ತಾನ ಟೋಲ್ನ ಮುಖ್ಯಸ್ಥ ಕೇಶವ ಮೂರ್ತಿ ಆಗಮಿಸಿ ಕಾರ್ಮಿಕ ಮುಖಂಡ ಯೋಗೇಶ ಕುಮಾರ್ ಮತ್ತು ಸಿಬಂದಿಗಳೊಂದಿಗೆ ಮಾತುಕತೆ ನಡೆಸಿ ಜೂ. 10ರೊಳಗೆ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದರು. ಅನಂತರ ಸಿಬಂದಿಗಳು ಮುಷ್ಕರ ಹಿಂಪಡೆದು ಕರ್ತವ್ಯಕ್ಕೆ ಹಾಜರಾದರು.
ಕೋಟ ಪೊಲೀಸ್ ಠಾಣೆ ಉಪನಿರೀಕ್ಷಕ ಸಂತೋಷ ಎ.ಕಾಯ್ಕಿಣಿ ಹಾಗೂ ಸಿಬಂದಿಗಳು ಈ ವೇಳೆ ಉಪಸ್ಥಿತರಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ನಿಗಾ ವಹಿಸಿದರು.