ಚುನಾವಣೆ ಸಂದರ್ಭ ಬಿಜೆಪಿ ದೇವರ, ಮಕ್ಕಳ ಹೆಸರಲ್ಲಿ ಕೀಳು ಮಟ್ಟದ ರಾಜಕೀಯ ಮಾಡಿದೆ: ರಮಾನಾಥ ರೈ

ಬಂಟ್ವಾಳ, ಜೂ. 1: ಅಕ್ಷರದಾಸೋಹ ವಿಚಾರವನ್ನು ಬಿಜೆಪಿ ರಾಜಕೀಯಕ್ಕಾಗಿ ಬಳಸಿಕೊಳ್ಳುವ ಮೂಲಕ ನನ್ನ ವಿರುದ್ಧ ಸುಳ್ಳು ಅಪಪ್ರಚಾರ ನಡೆಸಿ ಚುನಾವಣೆಯಲ್ಲಿ ಗೆಲುವು ಸಾಧಿಸಿದೆ. ಬಿಜೆಪಿಯು ಚುನಾವಣೆ ಸಂದರ್ಭದಲ್ಲಿ ದೇವರ ಹಾಗೂ ಮಕ್ಕಳ ಹೆಸರಲ್ಲಿ ಕೀಳು ಮಟ್ಟದ ರಾಜಕೀಯ ಮಾಡಿದೆ ಎಂದು ಮಾಜಿ ಸಚಿವ ರಮಾನಾಥ ರೈ ಅವರು ಆರೋಪಿಸಿದ್ದಾರೆ.
ಕಲ್ಲಡ್ಕ-ಪುಣಚ ಶಾಲೆಗಳ ಬಿಸಿಯೂಟಕ್ಕೆ ಶಿಕ್ಷಣ ಇಲಾಖೆಯು ಅನುಮತಿ ನೀಡಿದ ಬಗ್ಗೆ "ವಾರ್ತಾಭಾರತಿ"ಯೊಂದಿಗೆ ಮಾತನಾಡಿದ ಅವರು, "ನಮ್ಮ ಸರಕಾರ ಈ ಎರಡೂ ಶಾಲೆಗಳಿಗೆ ಬಿಸಿಯೂಟ ನೀಡಲು ಬದ್ಧವಾಗಿತ್ತು. ಆದರೆ ಶಾಲೆಯ ಆಡಳಿತವೇ ಬೇಡವೆಂದಿತ್ತು. ನಾನು ಸಚಿವನಾಗಿದ್ದಾಗ ಅಕ್ಷರದಾಸೋಹ ಬೇಡವೆಂದವರೇ ಇದೀಗ ಮತ್ತೆ ಬಿಸಿಯೂಟಕ್ಕಾಗಿ ಅರ್ಜಿ ಹಾಕಿದ್ದಾರೆ. ನಾವು ಬಿಸಿಯೂಟ ನೀಡುವುದಿಲ್ಲವೆಂದು ಎಲ್ಲಿಯೂ ಹೇಳಿಲ್ಲ. ಆದರೆ, ಬಿಜೆಪಿ ಇದೇ ವಿಚಾರವನ್ನಿಟ್ಟುಕೊಂಡು ಮಕ್ಕಳ ಹೆಸರನಲ್ಲಿ ರಾಜಕೀಯ ಮಾಡಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಶಾಲಾ ಮಕ್ಕಳ ಊಟಕ್ಕಾಗಿ ಹಣದ ರೂಪದಲ್ಲಿ ಅನುದಾನ ನೀಡುವ ಕ್ರಮ ಎಲ್ಲಿಯೂ ಇಲ್ಲ. ಆದರೆ ಕಲ್ಲಡ್ಕ ಮತ್ತು ಪುಣಚ ಶಾಲೆಗಳು ಕೊಲ್ಲೂರು ದೇವಸ್ಥಾನದಿಂದ ಹಣದ ರೂಪದಲ್ಲಿ ಪಡೆಯುವ ಮೂಲಕ ದೇವಸ್ಥಾನದ ಹಣವನ್ನು ದುರುಪಯೋಗ ಮಾಡಿರುವುದು ಸರಕಾರ ಗಮನಕ್ಕೆ ಬಂದಿದ್ದು, ಸರಕಾರ ಇದನ್ನು ಪರಿಶೀಲನೆ ನಡೆಸಿ ಈ ವ್ಯವಸ್ಥೆಯನ್ನು ತಡೆದಿದೆ ಎಂದು ಸ್ಪಷ್ಟಪಡಿಸಿದ ಅವರು, ಇದೇ ಕಾರಣವನ್ನಿಟ್ಟುಕೊಂಡು ಬಿಜೆಪಿಯವರು ರೈ ಅವರ ಮೇಲೆ ಸುಳ್ಳು ಆರೋಪ ಮಾಡುವ ಮೂಲಕ ಕೀಳು ಮಟ್ಟದ ರಾಜಕೀಯ ಮಾಡಿದ್ದಾರೆ. ಈ ಅಪಪ್ರಚಾರದಿಂದಲೇ ಬಿಜೆಪಿಗೆ ಚುನಾವಣೆಯಲ್ಲಿ ಗೆಲುವಾಗಿದೆ ಎಂದು ಹೇಳಿದರು.
ಪ್ರಸ್ತುತ ಈ ವಿಚಾರನ್ನು ರಾಜಕೀಯ ಉದ್ದೇಶಕ್ಕೆ ಬಳಸುತ್ತಿರುವುದು ಖಂಡನೀಯ, ಅಲ್ಲದೆ, ಪ್ರತಿಭಟನೆಯ ಹೆಸರಿನಲ್ಲಿ ಮಕ್ಕಳನ್ನು ಬೀದಿಗೆ ಇಳಿಸುವ ಮೂಲಕ ಜನರ ದಾರಿತಪ್ಪಿಸುವಂತಹ ಕೆಲಸ ಮಾಡುವುದು ಸರಿಯಲ್ಲ ಎಂದರು.