ಸಾಂಕ್ರಾಮಿಕ ರೋಗಳ ಬಗ್ಗೆ ಇರಲಿ ಮುಂಜಾಗೃತೆ: ದ.ಕ. ಜಿಲ್ಲಾ ಆರೋಗ್ಯಾಧಿಕಾರಿ

ಮಂಗಳೂರು, ಜೂ.2: ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳು ಉಲ್ಬಣವಾಗುವುದರಿಂದ ಸಾರ್ವಜನಿಕರು ರೋಗಗಳು ಹರಡದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸುವಂತೆ ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ರಾವ್ ಸಲಹೆ ನೀಡಿದ್ದಾರೆ.
ಜಿಲ್ಲಾ ಆರೋಗ್ಯ ಕಚೇರಿಯ ಸುದ್ದಿಗೋಷ್ಠಿಯಲ್ಲಿ ಮಲೇರಿಯಾ ಮಾಸಾಚರಣೆಯ ಪ್ರಯುಕ್ತ ಮಾತನಾಡಿದ ಅವರು, ಜ್ವರಕ್ಕೆ ಸಂಬಂಧಿಸಿ ಯಾವುದೇ ರೀತಿಯ ಅನಾರೋಗ್ಯ ಲಕ್ಷಣಗಳು ಕಂಡು ಬಂದಾಗ ತಕ್ಷಣ ರಕ್ತ ತಪಾಸಣೆ ಮಾಡಿಸುವಂತೆ ಅವರು ಸಲಹೆ ನೀಡಿದರು.
ನಗರ ಪ್ರದೇಶದಲ್ಲಿ ದಿನದ 24 ಗಂಟೆಯೂ ಜ್ವರ ಪರೀಕ್ಷೆ, ತೀವ್ರ ಚಿಕಿತ್ಸೆ ನೀಡಲು ಸೇವೆ ಲಭ್ಯವಿದೆ. ಇದಕ್ಕಾಗಿ 9448556872 ಸಂಖ್ಯೆಯನ್ನು ಸಂಪರ್ಕಿಸಬಹುದು. ನಗರ ಪ್ರದೇಶದಲ್ಲಿ ಕಟ್ಟಡ ಕಾಮಗಾರಿ ಪ್ರದೇಶಗಳಲ್ಲಿ ಜ್ವರ ಸಮೀಕ್ಷೆ, ತೀವ್ರ ಚಿಕಿತ್ಸೆ ನೀಡಲು ಆರೋಗ್ಯ ಇಲಾಖೆಯಿಂದ ಸ್ವಯಂ ಸೇವಕರ ತಂಡವನ್ನು ರಚಿಸಲಾಗಿದೆ. 15 ದಿನಗಳಿಗೊಮ್ಮೆ ನಿರ್ಮಾಣ ಹಂತದ ಕಟ್ಟಡಗಳಿಗೆ ಭೇಟಿ ನೀಡಿ ಸೊಳ್ಳೆ ಉತ್ಪತ್ತಿ ತಾಣಗಳ ನಿಯಂತ್ರಣ ಮತ್ತು ನಾಶಪಡಿಸುವಿಕೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಗ್ರಾಮೀಣ ಮತ್ತು ನಗರ ವ್ಯಾಪ್ತಿಯಲ್ಲಿ ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಮಲೇರಿಯಾ ಸಂಬಂಧಿ ಔಷಧ ಸಾಕಷ್ಟು ಪ್ರಮಾಮದಲ್ಲಿ ದಾಸ್ತಾನು ಇಡಲಾಗಿದೆ ಎಂದು ಅವರು ಹೇಳಿದರು.
ಸೊಳ್ಳೆ ಪರದೆ ಬಳಸಿ, ಸಾಂಕ್ರಾಮಿಕ ರೋಗಗಳಿಂದ ದೂರವಿರಿ
2017ರಲ್ಲಿ ದ.ಕ. ಜಿಲ್ಲೆಯಲ್ಲಿ ಸರಕಾರದ ವತಿಯಿಂದ ಬಿಪಿಎಲ್ ಕುಟುಂಬದವರಿಗೆ 48,000 ಕೀಟನಾಶಕ ಸೊಳ್ಳೆ ಪರದೆಗಳನ್ನು ಸರಬರಾಜು ಮಾಡಲಾಗಿದೆ. 2018ರಲ್ಲಿ 10500 ಸೊಳ್ಳೆ ಪರದೆಗಳನ್ನು ಈಗಾಗಲೇ ಗ್ರಾಮೀಣ ಪ್ರದೇಶಗಳಿಗೆ ವಿತರಿಸಲಾಗಿದೆ. 64500 ಸೊಳ್ಳೆ ಪರದೆಗಳನ್ನು ನಗರ ಪ್ರದೇಶದಲ್ಲಿ ವಿತರಿಸಲಾಗುವುದು. ಬಿಪಿಎಲ್ ಹೊರತುಪಡಿಸಿದ ಕುಟುಂಬಗಳಿಗೆ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪ್ರತಿ ಗುರುವಾರ ಸೊಳ್ಳೆ ಪರದೆ ಹಾಗೂ ಕಿಟಕಿ ಬಾಗಿಲುಗಳಿಗೆ ಕೀಟ ನಾಶಕ ಲೇಪಿಸುವ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆಯಬಹುದು ಎಂದು ಮಲೇರಿಯಾ ನಿಯಂತ್ರಣ ಅಧಿಕಾರಿ ಡಾ. ಅರುಣ್ ಕುಮಾರ್ ತಿಳಿಸಿದರು.
ದ.ಕ. ಜಿಲ್ಲೆಯಲ್ಲಿ ದಾಖಲಾದ ಡೆಂಗ್, ಮಲೇರಿಯಾ ಪ್ರಕರಣಗಳು
ದ.ಕ. ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಜನವರಿಯಿಂದ ಮೇ ತಿಂಗಳವರೆಗೆ ಒಟ್ಟು 83 ಡೆಂಗ್ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ ಆರು ಪ್ರಕರಣಗಳು ಎಲಿಸಾ ಎನ್ಎಸ್ಐ (ಗಂಭೀರ) ಆಗಿರುತ್ತದೆ. ಡೆಂಗ್ನಿಂದ ಈ ಅವಧಿಯಲ್ಲಿ ಯಾವುದೇ ಸಾವು ಸಂಭವಿಸಿಲ್ಲ ಎಂದು ಡಾ. ರಾಮಕೃಷ್ಣ ರಾವ್ ತಿಳಿಸಿದರು.
ಜನವರಿಯಿಂದ ಎಪ್ರಿಲ್ವರೆಗೆ 74,553 ಮಂದಿಯ ರಕ್ತ ಮಾದರಿಯನ್ನು ತಪಾಸಣೆಗೊಳಪಡಿಸಲಾಗಿ ಒಟ್ಟು 863 ಮಲೇರಿಯಾ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಇದರಲ್ಲಿ 141 ಪ್ರಕರಣಗಲು ಗಂಭೀರ ಪ್ರಕರಣಗಳಾಗಿವೆ. ಚಿಕಿತ್ಸೆ ಮೂಲಕ ಅವುಗಳನ್ನು ಗುಣಪಡಿಸಲಾಗಿದೆ ಎಂದು ಅವರು ಹೇಳಿದರು.
2017ರಲ್ಲಿ ಒಟ್ಟು 136 ಡೆಂಗ್ ಪ್ರಕರಣಗಳು ದಾಖಾಗಿದ್ದು, ಅದರಲ್ಲಿ 54 ಪ್ರಕರಣಗಳು ಗಂಭೀರ ಪ್ರಕರಣಗಳು. ಮಲೇರಿಯಾಕ್ಕೆ ಸಂಬಂಧಿಸಿ 4741 ಪ್ರಕರಣಗಳು ದಾಖಲಾಗಿದ್ದು, 831 ಪ್ರಕರಣಗಳು ಗಂಭೀರ ಪ್ರಕರಣಗಳಾಗಿ ಗುರುತಿಸಿ ಸೂಕ್ತ ಚಿಕಿತ್ಸೆ ಒದಗಿಸಲಾಗಿದೆ ಎಂದು ಅವರು ಹೇಳಿದರು.
ನಿರ್ಮಾಣ ಕಾಮಗಾರಿ ಪ್ರದೇಶಗಳಲ್ಲಿ ನೀರು ನಿಲ್ಲದಂತೆ ಮಂಗಳೂರು ಮಹಾನಗರ ಪಾಲಿಕೆ ಈಗಾಗಲೇ ಸೂಚನೆ ನೀಡಲಾಗಿದೆ. ಜನವರಿಯಿಂದ ಈವರೆಗೆ ಈಗಾಗಲೇ 12 ಕಟ್ಟಡಗಳಿಗೆ ನೋಟೀಸು ನೀಡಲಾಗಿದೆ. ಯಾವುದೇ ಪ್ರದೇಶದಲ್ಲಿ ಮಳೆ ನೀರು ನಿಂತು ಸೊಳ್ಳೆ ಉತ್ಪತ್ತಿಗೆ ಕಾರಣವಾದಲ್ಲಿ ಪರವಾನಿಗೆಯನ್ನೇ ರದ್ದುಪಡಿಸುವಂತಹ ಕ್ರಮವನ್ನು ಕೈಗೊಳ್ಳುವ ಆದೇಶವನ್ನು ಜಿಲ್ಲಾಧಿಕಾರಿ ಈಗಾಗಲೇ ನೀಡಿದ್ದಾರೆ. ಈ ನಿಟ್ಟಿಲ್ಲಿ ತಪಾಸಣೆ ಕಾರ್ಯವೂ ನಡೆಯುತ್ತಿದೆ. ಸಾರ್ವಜನಿಕರು ಈ ಬಗ್ಗೆ ಎಚ್ಚರಿಕೆ ವಹಿಸಿ, ತಮ್ಮ ಮನೆಗಳ ಸುತ್ತಮುತ್ತವೂ ಯಾವುದೇ ರೀತಿಯಲ್ಲಿ ನೀರು ನಿಲ್ಲದಂತೆ ಗಮನ ಹರಿಸಬೇಕು ಎಂದು ಡಾ. ರಾಮಕೃಷ್ಣ ರಾವ್ ಹೇಳಿದರು. ಗೋಷ್ಠಿಯಲ್ಲಿ ಡಾ. ರಾಜೇಶ್ ಉಪಸ್ಥಿತರಿದ್ದರು.
ಮಲೇರಿಯಾ ಅತೀ ಸೂಕ್ಷ್ಮ ವಾರ್ಡ್ಗಳಿವು !
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅತೀ ಹೆಚ್ಚಿನ ಸಂಖ್ಯೆಯ ಮಲೇರಿಯಾ ಪ್ರಕರಣಗಳು ದಾಖಲಾಗುತ್ತಿವೆ. ಸಮೀಕ್ಷೆ ಪ್ರಕಾರ ಪಾಲಿಕೆಯ 18 ವಾರ್ಡ್ಗಳನ್ನು ಮಲೇರಿಯಾ ಅತೀ ಸೂಕ್ಷ್ಮ ವಾರ್ಡ್ಗಳಾಗಿ ಗುರುತಿಸಲಾಗಿದೆ. ಅವುಗಳೆಂದರೆ, ದೇರೆಬೈಲ್ ಉತ್ತರ, ದೇರೆಬೈಲ್ ಪೂರ್ವ, ದೇರೆಬೈಲ್ ಪಶ್ಚಿಮ, ದೇರೆಬೈಲ್ ದಕ್ಷಿಣ, ದೇರೆಬೈಲ್ ನೈರುತ್ಯ, ಬಿಜೈ, ಮಣ್ಣಗುಡ್ಡ, ಕೊಡಿಯಾಲ್ಬೈಲ್, ಕದ್ರಿ ದಕ್ಷಿಣ, ಕೇಂದ್ರ ಮಾರುಕಟ್ಟೆ, ಬಂದರು, ಕೋರ್ಟ್, ಪೋರ್ಟ್, ಕಂಟೋನ್ಮೆಂಟ್, ಮಿಲಾಗ್ರಿಸ್, ಹೊಯ್ಗೆ ಬಜಾರ್, ಬೆಂಗ್ರೆ, ಅತ್ತಾವರ. ಈ ಪ್ರದೇಶಗಳಲ್ಲಿ ತೀವ್ರ ನಿಗಾದೊಂದಿಗೆ ಮುನ್ನೆಚ್ಚರಿಕಾ ಕ್ರಮಗಳಿಗೆ ಸೂಚಿಸಲಾಗಿದೆ ಎಂದು ಡಾ. ರಾಮಕೃಷ್ಣ ರಾವ್ ತಿಳಿಸಿದರು.







