ಪಡುಬಿದ್ರೆ ಬೀಚ್ಗೆ ಸರ್ಟಿಫಿಕೇಟ್ ಮಾನ್ಯತೆ

ಪಡುಬಿದ್ರೆ, ಜೂ. 2: ಪಡುಬಿದ್ರೆ ಬೀಚ್ಗೆ ನೀಲ ಪತಾಕೆ (ಬ್ಲೂ ಫ್ಲ್ಯಾಗ್) ಸರ್ಟಿಫಿಕೇಟ್ ಮಾನ್ಯತೆ ದೊರೆಯುವ ಹಂತದಲ್ಲಿದೆ ಎಂದು ಎಸೋಸಿಯೇಶನ್ ಆಫ್ ಕೋಸ್ಟಲ್ ಟೂರಿಸಂ ಅಧ್ಯಕ್ಷ ಮನೋಹರ ಕೆ.ಶೆಟ್ಟಿ ಹೇಳಿದರು.
ಅವರು ಶನಿವಾರ ಪಡುಬಿದ್ರಿ ಬೀಚ್ನಲ್ಲಿ ಉಡುಪಿ ಜಿಲ್ಲಾಡಳಿತ, ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಇಲಾಖೆ, ಮಂಗಳೂರಿನ ಮೀನುಗಾರಿಕಾ ಕಾಲೇಜು, ಸಿ ಕಾಮ್, ಪ್ರವಾಸೋದ್ಯಮ ಇಲಾಖೆ ಹಾಗೂ ಎಸೋಸಿಯೇಶನ್ ಆಫ್ ಕೋಸ್ಟಲ್ ಟೂರಿಸಂಗಳ ಜಂಟಿ ಆಶ್ರಯದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಈಗಾಗಲೇ ಭಾರತದ ವಿವಿಧ ರಾಜ್ಯಗಳ ಹಾಗೂ ಕರ್ನಾಟಕದ ಏಕೈಕ ನೀಲ ಪತಾಕೆ ಮಾನ್ಯತೆ ಪಡೆಯಲಿರುವ 13 ಬೀಚ್ಗಳಲ್ಲಿ ಪಡುಬಿದ್ರಿ ಒಂದಾಗಿದೆ. ಈ ಬೀಚ್ ಅತ್ಯಾಧುನಿಕವಾಗಿ ಅಭಿವೃದ್ಧಿಪಡಿಸಲು 8 ಕೋಟಿ ರೂ ಅನುದಾನ ದೊರಕಿದೆ. ಪಡುಬಿದ್ರಿ ಕಾಮಿನಿ ಹೊಳೆ ಸ್ವಚ್ಛತೆಗೆ ಹೆಚ್ಚು ನಿಗಾ ವಹಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸ್ಥಳೀಯಾಡಳಿತ ಮುತುವರ್ಜಿ ವಹಿಸಬೇಕೆಂದರು. ಉಡುಪಿ ಜಿಲ್ಲಾ ಪ್ರವಾಸೋದ್ಯಮ ಇಲಾಖಾ ಸಹಾಯಕ ನಿರ್ದೇಶಕಿ ಅನಿತಾ ಭಾಸ್ಕರ್ ಮಾತನಾಡಿ, ಕರಾವಳಿಯ ಸಮುದ್ರ ತೀರ ಹಲವಾರು ಜನರಿಗೆ ಮೂಲಾಧಾರವಾಗಿಯೂ, ಜೀವನಾಧಾರವಾಗಿಯೂ ಇದೆ. ಅಂತಹಾ ಕರಾವಳಿಯಲ್ಲಿ ‘ಪ್ಲಾಸ್ಟಿಕ್ ಬಳಕೆಯನ್ನು ಹಿಮ್ಮೆಟ್ಟಿಸಿ’ ಅದರ ಬಳಕೆಯನ್ನು ಕಡಿತಗೊಳಿಸುವ ಮೂಲಕ ಉಳಿಸಿಕೊಳ್ಳೋಣ. ನನ್ನ ಬೀಚನ್ನು ನಾನು ಉಳಿಸಿಕೊಳ್ಳುವುದಾಗಿ ಪಣತೊಟ್ಟು ಮುಂದುವರಿಯೋಣ ಎಂದರು.
ಮೀನುಗಾರಿಕಾ ಕಾಲೇಜಿನ ಪ್ರಾಂಶುಪಾಲ ಡಾ ಲಕ್ಷ್ಮೀಪತಿ, ಉಡುಪಿ ಜಿಲ್ಲಾ ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಯ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ, ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿಯ ಅಧ್ಯಕ್ಷ ಶಶಿಕಾಂತ್ ಪಡುಬಿದ್ರಿ, ಪಡುಬಿದ್ರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ದಮಯಂತಿ ಅಮೀನ್, ಸಿ ಕಾಮ್ ಸ್ವಯಂ ಸೇವಕ ರಾಮ್ಜಿ ವರ್ಮ, ಮೊದಲೈಯರಸನ್, ಆ್ಯಕ್ಟ್ನ ಪ್ರಧಾನ ಕಾರ್ಯದರ್ಶಿ ಗೌರವ ಶೇಣವ, ಅಭಿಜಿತ್, ತಾಲ್ಲೂಕು ಪಂಚಾಯತ್ ಸದಸ್ಯೆ ನೀತಾ ಗುರುರಾಜ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ವಿಜಯಲಕ್ಷ್ಮೀ ನಾಯಕ್, ಕರಾವಳಿ ಕಾವಲು ಪಡೆಯ ಎಎಸ್ಐ ಭಾಸ್ಕರ್, ಎಚ್. ಸಿ. ಉದಯ್ ಆರ್. ಬಿ, ಅಮಿತ್, ಮೀನುಗಾರ ಸಮುದಾಯದ ವಿವಿಧ ಸಂಘಟನೆಗಳ ಅಧ್ಯಕ್ಷರಾದ ಸುಕುಮಾರ ಶ್ರೀಯಾನ್, ಶಾಲಾ ವಿದ್ಯಾರ್ಥಿಗಳು, ಪಡುಬಿದ್ರೆ ಸರಕಾರಿ ಪ. ಪೂ. ಕಾಲೇಜು ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು. ಬಳಿಕ ಎಲ್ಲರೂ ಪಡುಬಿದ್ರೆ ಬೀಚ್ ಹಾಗೂ ಮನೆಮನೆಗೆ ತೆರಳಿ ಪ್ಲಾಸ್ಟಿಕ್ ಸಹಿತ ತ್ಯಾಜ್ಯಗಳನ್ನು ಸಂಗ್ರಹಿಸಿದರು.