ಅಸಾಂಕ್ರಾಮಿಕ ರೋಗ, ಕಾನ್ಸರ್ ತಪಾಸಣಾ ಶಿಬಿರ
ಉಡುಪಿ, ಜೂ. 2: ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಘಟಕ (ಎನ್ಟಿಸಿಪಿ ಮತ್ತು ಎನ್ಪಿಸಿ ಡಿಸಿಎಸ್) ಉಡುಪಿ, ಜಿಲ್ಲಾ ಆಸ್ಪತ್ರೆ ಉಡುಪಿ, ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಆಂಕಾಲಜಿ ಮಂಗಳೂರು (ಕ್ಯಾನ್ಸರ್ ಆಸ್ಪತ್ರೆ) ಇವುಗಳ ಸಹಯೋಗ ದೊಂದಿಗೆ ಅಜ್ಜರಕಾಡಿನಲ್ಲಿರುವ ಜಿಲ್ಲಾ ಆಸ್ಪತ್ರೆ ಉಡುಪಿಯಲ್ಲಿ ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ ಉಚಿತ ಅಸಾಂಕ್ರಾಮಿಕ ರೋಗಗಳ ಹಾಗೂ ಕಾನ್ಸರ್ ತಪಾಸಣಾ ಶಿಬಿರ ನಡೆದವು.
ಶಿಬಿರದ ಅಧ್ಯಕ್ಷ ಸ್ಥಾನವನ್ನು ಜಿಲ್ಲಾ ಸರ್ಜನ್ ಡಾ.ಮಧುಸೂಧನ್ ನಾಯಕ್ ವಹಿಸಿದ್ದರು. ಶಿಬಿರವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೋಹಿಣಿ ಉದ್ಘಾಟಿಸಿದರು. ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಆಂಕಾಲಜಿಯ ರೇಡಿಯೇಶನ್ ಕ್ಯಾನ್ಸರ್ ತಜ್ಞರಾದ ಡಾ. ಶ್ರೀನಾಥ್ ಬಾಳಿಗ ಹಾಗೂ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ವಾಸುದೇವ ಉಪಾಧ್ಯಾಯ, ಜಿಲ್ಲಾಸ್ಪತ್ರೆಯ ನಿವಾಸಿ ವೈದ್ಯಾಧಿಕಾರಿ ಡಾ.ಚಂದ್ರಶೇಖರ್ ಅಡಿಗ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಬಿರ ಬೆಳಗ್ಗೆ 9:30ರಿಂದ ಅಪರಾಹ್ನ 1:30ರವರೆಗೆ ನಡೆಯಿತು. ಶಿಬಿರದಲ್ಲಿ 102 ಮಂದಿ ಶಿಬಿರಾರ್ಥಿಗಳು ಭಾಗವಹಿಸಿದ್ದರು. ಇದರಲ್ಲಿ ಬಾಯಿ ಕಾನ್ಸರ್, ದಂತ ಪರೀಕ್ಷೆ ಮತ್ತು ಮಧುಮೇಹ ರೆಟಿನೋಪಪಿ ತಪಾಸಣೆ ಹಾಗೂ ಮಧುಮೇಹ ತಂಬಾಕು ಬಗ್ಗೆ ಆಪ್ತ ಸಮಾಲೋಚನೆ ನಡೆಸಲಾಯಿತು. ಜಿಲ್ಲಾಸ್ಪತ್ರೆಯ ಫಿಸಿಶಿಯನ್ ಡಾ. ನಾಗೇಶ್ ಹಾಗೂ ವೈದ್ಯಾಧಿಕಾರಿಗಳು ಶಿಬಿರದಲ್ಲಿ ಭಾಗವಹಿಸಿ ಸಹಕರಿಸಿದರು. ಕೃತಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ಆಪ್ತಸಮಾಲೋಚಕ ಮನು ವಂದಿಸಿದರು.