ಸಚಿವ, ಶಾಸಕನಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿದ್ದೇನೆ: ಸೊರಕೆ

ಹಿರಿಯಡ್ಕ, ಜೂ.2: ಕಾಪು ಕ್ಷೇತ್ರದ ಶಾಸಕನಾಗಿ, ಸಚಿವನಾಗಿ ಐದು ವರ್ಷಗಳ ಕಾಲ ನನ್ನನ್ನು ಆಯ್ದು ಕಳುಹಿಸಿದ ಜನರ ಋಣ ಸಂದಾಯದ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಎಲ್ಲವನ್ನೂ ಸಾಧಿಸಿದ್ದೇನೆ ಎಂದು ಹೇಳದಿದ್ದರೂ, ಗರಿಷ್ಠ ಮಟ್ಟದ ಅಭಿವೃದ್ಧಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದೇನೆ ಎಂಬ ಹೆಮ್ಮೆ, ತೃಪ್ತಿ ನನಗಿದೆ ಎಂದು ಕಾಪುನ ಮಾಜಿ ಶಾಸಕ ವಿನಯಕುಮಾರ್ ಸೊರಕೆ ಹೇಳಿದ್ದಾರೆ.
ಹಿರಿಯಡ್ಕ ಶ್ರೀನಾರಾಯಣ ಗುರು ಸಭಾಭವನದಲ್ಲಿ ಕಾಪು ಉತ್ತರ ವಲಯ ಬ್ಲಾಕ್ ಕಾಂಗ್ರೆಸ್ ಸಮಿತಿಯ ಆಶ್ರಯದಲ್ಲಿ ಇಂದು ನಡೆದ ಕಾಂಗ್ರೆಸ್ ಕಾರ್ಯಕರ್ತರ ಕೃತಜ್ಞತಾ ಸಭೆುಲ್ಲಿ ಅವರು ಮಾತನಾಡುತಿದ್ದರು.
ನನ್ನ ಹಾಗೂ ಕಾಂಗ್ರೆಸ್ ಸರಕಾರದ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟು ಕೊಂಡು ನಾನು ಚುನಾವಣೆಯನ್ನು ಎದುರಿಸಿದೆ. ಆದರೆ ಬಿಜೆಪಿ ಅಪಪ್ರಚಾರದ ಮೂಲಕ ಮತ್ತು ಭಾವನಾತ್ಮಕ ವಿಷಯಗಳನ್ನು ಕೆರಳಿಸುವ ಮೂಲಕ ಚುನಾವಣೆಗೆ ಇಳಿಯಿತು. ಜನತೆ ಅಪಪ್ರಚಾರಕ್ಕೆ ಮರುಳಾಗಿ ನಾನು ಸೋಲ ಬೇಕಾಯಿತು. ಇದು ನೈತಿಕತೆಯ ಸೋಲು. ನನಗೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಸೋಲು ಹೊಸತಲ್ಲ. ಸೋತಲ್ಲೇ ಮತ್ತೆ ಗೆಲ್ಲುವ ಭರವಸೆ ಇದೆ ಎಂದವರು ನುಡಿದರು.
ಬಿಜೆಪಿಗರು ನನ್ನನ್ನು ಮತ್ತು ಕಾಂಗ್ರೆಸ್ ಪಕ್ಷವನ್ನು ಹಿಂದೂ ವಿರೋಧಿಯಾಗಿ ಬಿಂಬಿಸಿ ಅಪಪ್ರಚಾರ ಮಾಡಿದ್ದಾರೆ. ಕಾಪು ಕ್ಷೇತ್ರದ 14 ದೇವಸ್ಥಾನ ಮತ್ತು 33 ದೈವಸ್ಥಾನಗಳ ಜೀರ್ಣೋದ್ದಾರಗಳಿಗೆ ಸರಕಾರದ ನೆರವನ್ನು ದೊರಕಿಸಿ ಕೊಡುವಲ್ಲಿ ಸಫಲನಾದ ನಾನು ಮತ್ತು ನೆರವನ್ನು ಕೊಟ್ಟ ಕಾಂಗ್ರೆಸ್ ಸರಕಾರ ಹೇಗೆ ಹಿಂದೂ ವಿರೋಧಿಯಾದೀತು ಎಂದವರು ಪ್ರಶ್ನಿಸಿದರು. ಬಿಜೆಪಿಯವರ ಹಿಂದುತ್ವ ಅತ್ಯಂತ ಕಪಟತನದಿಂದ ಕೂಡಿದ ಹಿಂದುತ್ವ. ಇದು ಹಿಂದೂ ಧರ್ಮಕ್ಕೆ ಮಾರಕವಾದುದು ಎಂದವರು ಅಭಿಪ್ರಾಯಪಟ್ಟರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ನ ಹಿರಿಯ ನಾಯಕ ಹಾಗೂ ವಿಧಾನಪರಿಷತ್ ಸದಸ್ಯ ಪ್ರತಾಪ್ಚಂದ್ರ ಶೆಟ್ಟಿ, ಅಭಿವೃದ್ಧಿ ಕೆಲಸಗಳನ್ನು ಮಾಡಿಯೂ ವಿನಯ ಕುಮಾರ್ ಸೊರಕೆ ಸೋಲುತ್ತಾರೆ ಎಂಬುದನ್ನು ಅರಗಿಸಿಕೊಳ್ಳುವುದು ಕಷ್ಟ. ಸೋಲಿಗೆ ಯಾವ ಕಾರಣ ಕೂಡಾ ಸಿಗುವುದಿಲ್ಲ. ಇದರ ಬಗ್ಗೆ ಕಾರ್ಯಕರ್ತರು ಆತ್ಮಾವಲೋನ ಮಾಡಿಕೊಳ್ಳಬೇಕಾಗಿದೆ ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯ ಚುನಾವಣೆಯಲ್ಲಿ ಸೋಲು ಗೆಲುವು ಎನ್ನುವುದು ಸಹಜ ಪ್ರಕ್ರಿಯೆ. ಆದರೆ ಗೆಲ್ಲಲು ಕಾರಣವಿದ್ದ ಹಾಗೇ ಸೋಲಲೂ ನಿರ್ದಿಷ್ಟ ಕಾರಣ ಇರಲೇಬೇಕು. ಆದರೆ ಕಳೆದ ಚುನಾವಣೆಯಲ್ಲಿ ವಿನಯ ಕುಮಾರ್ ಸೊರಕೆ ಸೋಲಲು ಯಾವುದೇ ಕಾರಣವನ್ನು ವೈರಿಗಳಿಗೂ ತೋರಿಸಲು ಸಾಧ್ಯವಿಲ್ಲ. ಹೀಗಾಗಿ ಫಲಿತಾಂಶವನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿದಾಗ, ಅಪಪ್ರಚಾರದ ಮೂಲಕ ಜನರ ಮನಸಲ್ಲಿ ವಿಷ ಬೀಜ ತುಂಬಿಸಿದ ಬಿಜೆಪಿ ಕೃತ್ಯ ಸ್ಪಷ್ಟವಾಗುತ್ತದೆ ಎಂದು ಕಾಂಗ್ರೆಸ್ ಮುಖಂಡ ಉದ್ಯಾವರ ನಾಗೇಶ್ ಕುಮಾರ್ ನುಡಿದರು.
ಕಾಪು ಬ್ಲಾಕ್ ಕಾಂಗ್ರೆಸ್ ಉತ್ತರ ವಲಯ ಅಧ್ಯಕ್ಷ ಸುಧೀರ್ ಹೆಗ್ಡೆ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಜಿಪಂ ಸದಸ್ಯರಾದ ಚಂದ್ರಿಕಾ ಕೇಳ್ಕರ್, ಮೈರ್ಮಾಡಿ ಸುಧಾಕರ ಶೆಟ್ಟಿ, ತಾಪಂ ಸದಸ್ಯ ಲಕ್ಷ್ಮೀನಾರಾಯಣ ಪ್ರಭು, ಸಂಧ್ಯಾ ಶೆಟ್ಟಿ, ಕಾಪು ಬ್ಲಾಕ್ ಉತ್ತರ ವಲಯ ಗೌರವಾಧ್ಯಕ್ಷ ವಿನೋದ್ ಕುಮಾರ್, ನಾಯಕರಾದ ಮಹಾಬಲ ಕುಂದರ್, ಇಸ್ಮಾಯಿಲ್ ಆತ್ರಾಡಿ, ರಮೇಶ್ ಶೆಟ್ಟಿ ಕುಕ್ಕೆಹಳ್ಳಿ, ಮಲ್ಪೆರಾಘವೇಂದ್ರ, ಬಿ.ಶಂಕರ್ ಶೆಟ್ಟಿ, ಸುಗಂಧಿ ಶೇಖರ್, ಸುಂದರ್ ಪೂಜಾರಿ, ಮಾಲತಿ ಆಚಾರ್ಯ, ರಾಜು ಪೂಜಾರಿ, ಗಿರೀಶ್ ಕುಮಾರ್ ಉಪಸ್ಥಿತರಿದ್ದರು. ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶ್ರೀಧರ ಶೆಟ್ಟಿ ಭೈರಂಪಳ್ಳಿ ಸ್ವಾಗತಿಸಿ, ಕೊನೆಯಲ್ಲಿ ವಂದಿಸಿದರು.