ಮಂಡ್ಯ: ಬಾವಿಯಲ್ಲಿ ಮುಳುಗಿ ಬಾಲಕ ಮೃತ್ಯು

ಮಂಡ್ಯ, ಜೂ.2: ಬಾವಿಯಲ್ಲಿ ಈಜಾಡಲು ಹೋದ ಶಾಲಾ ಬಾಲಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಪಾಂಡವಪುರ ತಾಲೂಕಿನ ಅತ್ತಿಗಾನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಜಯಸ್ವಾಮಿ-ವಿನುತಾ ಅವರ ಪುತ್ರ ಅಜಯಕುಮಾರ್ ಅಲಿಯಾಸ್ ಅಪ್ಪಿ(8) ಮೃತಪಟ್ಟ ಬಾಲಕನಾಗಿದ್ದಾನೆ.
ಘಟನೆ ವಿವರ: ತಾಲೂಕಿನ ಸುಂಕಾತೊಣ್ಣೂರು ಗ್ರಾಮದಲ್ಲಿ ಖಾಸಗಿ ಕಾನ್ವೆಂಟ್ನಲ್ಲಿ 3ನೇ ತರಗತಿ ವ್ಯಾಸಂಗ ಮಾಡುತ್ತಿರುವ ಅಜಯಕುಮಾರ್ ಅದೇ ಗ್ರಾಮದ ತನ್ನ ಸ್ನೇಹಿತ 2ನೇ ತರಗತಿಯ ಯಶ್ವಂತ್ ಜತೆಗೆ ಜಮೀನಿನ ಬಳಿ ಇದ್ದ ಬಾವಿಯೊಂದರಲ್ಲಿ ಈಜಾಡಲು ಹೋಗಿದ್ದರು ಎನ್ನಲಾಗಿದೆ.
ಈ ವೇಳೆ ಮೊದಲಿಗೆ ಅಜಯಕುಮಾರ್ ಬಟ್ಟೆ ಕಳಚಿ ಈಡಾಜಲು ಬಾವಿಗಿಳಿದಿದ್ದಾನೆ. ಆದರೆ, ಈಜು ಬಾರದ ಕಾರಣ ಬಾವಿಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಈಜಾಡಲು ಬಟ್ಟೆ ಕಳಚಿ ತಯಾರಿದ್ದ ಯಶ್ವಂತ್ ಅಲ್ಲಿಂದ ಹೆದರಿ ಚೀರಾಡಿಕೊಂಡು ಮನೆಗೆ ಬಂದು ಅಜಯ್ಕುಮಾರ್ ನೀರಿನಲ್ಲಿ ಮುಳುಗಿದ್ದಾನೆ ಎಂದು ಪೋಷಕರಿಗೆ ವಿಷಯ ತಿಳಿಸಿದ್ದಾನೆ. ತಕ್ಷಣ ಬಾವಿ ಬಳಿಗೆ ಧಾವಿಸಿದರಾದರೂ ಅಷ್ಟರಲ್ಲಿ ಅಜಯಕುಮಾರ್ ಮೃತಪಟ್ಟಿದ್ದ ಎನ್ನಲಾಗಿದೆ.
ಪಾಂಡವಪುರ ಉಪವಿಭಾಗೀಯ ಆಸ್ಪತ್ರೆಯ ಶವಾಗಾರದಲ್ಲಿ ಶವಪರೀಕ್ಷೆ ನಡೆಸಿದ ಬಳಿಕ ವಾರಸುದಾರರಿಗೆ ಅಜಯಕುಮಾರ್ ಶವವನ್ನು ಒಪ್ಪಿಸಲಾಯಿತು. ಆಸ್ಪತ್ರೆ ಶವಾಗಾರ ಮುಂದೆ ಮೃತ ಬಾಲಕನ ಸಂಬಂಧಿಕರ ರೋಧನ ಮುಗಿಲುಮುಟ್ಟಿತ್ತು. ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ.







