ಮಳೆ ಹಾನಿ ಪರಿಹಾರಕ್ಕೆ ಕ್ರಮವಹಿಸಿ: ಮಂಡ್ಯ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಾವೆದ್ ಅಖ್ತರ್ ಸೂಚನೆ

ಮಂಡ್ಯ, ಜೂ.3: ಮಳೆ ಹಾನಿ ಪರಿಹಾರಕ್ಕೆ ಅಗತ್ಯವಾದ ಹಣವನ್ನು ಜಿಲ್ಲೆಗಳಿಗೆ ನೀಡಲಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಮಳೆಯಿಂದ ನಷ್ಟಕ್ಕೊಳಗಾದವರಿಗೆ ತ್ವರಿತ ರೀತಿಯಲ್ಲಿ ಪರಿಹಾರ ಒದಗಿಸಲು ಮುಂದಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಾವೆದ್ ಅಖ್ತರ್ ಅವರು ಸೂಚಿಸಿದ್ದಾರೆ.
ರವಿವಾರ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ನಡೆದ ಮಳೆಯಿಂದ ಆಗುವ ಮುಂಜಾಗ್ರತಾ ಕ್ರಮಗಳ ಸಿದ್ಧತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯದ ವಿವಿಧೆಡೆ ಮಳೆಯಿಂದ ಬಹಳಷ್ಟು ಪ್ರದೇಶಗಳಲ್ಲಿ ನಷ್ಟವಾಗಿದೆ. ಅತಿವೃಷ್ಠಿ ಸಮಯದಲ್ಲಿ ಅಧಿಕಾರಿಗಳು ಬಹಳ ಎಚ್ಚರದಿಂದ ಕೆಲಸ ನಿರ್ವಹಿಸಬೇಕು. ಸಂತ್ರಸ್ತ ಪೀಡಿತರಿಗೆ ತುರ್ತಾಗಿ ಪರಿಹಾರ ಕಲ್ಪಿಸಬೇಕು. ಅಧಿಕಾರಿಗಳು ದಿನದ 24 ಗಂಟೆಗಳೂ ಕಟ್ಟೆಚ್ಚರ ವಹಿಸಬೇಕು ಎಂದರು.
ಮಳೆ ಬರುವ ಸಂದರ್ಭದಲ್ಲಿ ಸಾರ್ವಜನಿಕರಿಗೆ ಸಿಡಿಲು-ಮಿಂಚಿನ ಬಗ್ಗೆ ಮಾಹಿತಿ ನೀಡಬೇಕು. ಪ್ರವಾಹ ವಿಕೋಪಕ್ಕೆ ಸಂಬಂಧಿಸಿದ ಕಾರ್ಯಗಳಿಗೆ ಕಂದಾಯ ಅಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಬೇಕು. ಕಳೆದ ವರ್ಷ ಯಾವ ಯಾವ ಕಡೆ ಮಳೆಯಿಂದ ಹೆಚ್ಚು ಅನಾಹುತಗಳಾಗಿವೆ ಅಲ್ಲಿ ಹೆಚ್ಚು ಅಗತ್ಯ ಕ್ರಮವಹಿಸಬೇಕು. ಒಣಗಿ ಹೋಗಿರುವ, ಮುರಿದು ಬೀಳುವ ಹಂತ ತಲುಪಿರುವ ಮರಗಳನ್ನು ಹಾಗೂ ಕೊಂಬೆಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳ ಸಹಕಾರದಲ್ಲಿ ತೆರವುಗೊಳಿಸಬೇಕು ಎಂದು ಅವರು ಹೇಳಿದರು.
ಪ್ರವಾಹ ಸಂದರ್ಭದಲ್ಲಿ ಜನಜಾನುವಾರುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಬೇಕಾದರೆ, ರಕ್ಷಣಾ ಕಾರ್ಯಗಳನ್ನು ಕೈಗೊಳ್ಳಲು ಅಧಿಕಾರಿಗಳು ಸನ್ನದ್ಧರಿರಬೇಕು. ನೈಸರ್ಗಿಕ ವಿಪತ್ತಿನ ಪರಿಸ್ಥಿತಿಯನ್ನು ಎದುರಿಸಲು ರಕ್ಷಣಾ ತಂಡಗಳು ರಚಿಸಲು ಮುಂಜಾಗ್ರತಾ ಕ್ರಮವಹಿಸಬೇಕು. ಜಿಲ್ಲಾಮಟ್ಟದಲ್ಲಿ ಹಾಗೂ ತಾಲೂಕು ಮಟ್ಟದಲ್ಲಿ ದಿನದಲ್ಲಿ 24 ಗಂಟೆಗಳು ಕಾರ್ಯನಿರ್ವಹಿಸುವ ನಿಯಂತ್ರಣ ಕೊಠಡಿ ತೆರೆದು ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ನೇಮಿಸಬೇಕು ಎಂದು ಅವರು ತಾಕೀತು ಮಾಡಿದರು.
ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಮಾತನಾಡಿ, ಪ್ರಕೃತಿ ವಿಕೋಪಕ್ಕೆ ಹಾನಿಯಾದ ಸಂದರ್ಭದಲ್ಲಿ ಪರಿಹಾರ ನೀಡಲು 4.14 ಕೋಟಿ ಹಣ ಮೀಸಲಿದೆ. 2018 ಮಾರ್ಚ್ನಿಂದ ಇಲ್ಲಿಯವರೆಗೆ ಮಳೆಯಿಂದ 6 ಜನ ಮೃತಪಟ್ಟಿದ್ದು, 12 ಕುರಿ ಹಾಗೂ ಹಸು ಸಾವನ್ನಪ್ಪಿವೆ. 403 ಮನೆಗಳು ಹಾನಿಗೊಳಗಾಗಿದ್ದು, ಬಹಳಷ್ಟು ಜನರಿಗೆ ಪರಿಹಾರವನ್ನು ನೀಡಲಾಗಿದೆ. 103 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, 17 ಲಕ್ಷ ರೂ.ನಷ್ಟು ಬೆಳೆ ಹಾನಿಯಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಪಿ.ವಿಜಯ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕೃಷ್ಣರಾಜು, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರಾಜಾ ಸುಲೋಚನಾ, ಮಂಡ್ಯ ಉಪವಿಭಾಧಿಕಾರಿ ಚಿಂದಾನಂದ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ರಾಜು, ತಹಶೀಲ್ದಾರ್ ಗಳು ಹಾಗೂ ಇತರೆ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.







