ಮಡಿಕೇರಿ: ಇಬ್ಬರು ಚೋರರ ಬಂಧನ; 2 ಬಂದೂಕು, ಚಿನ್ನಾಭರಣ ವಶ

ಮಡಿಕೇರಿ ಜೂ.3: ಇಬ್ಬರು ಚೋರರನ್ನು ಬಂಧಿಸಿರುವ ಮಡಿಕೇರಿ ಪೊಲೀಸರು ರೂ.2 ಲಕ್ಷ ಮೌಲ್ಯದ ಎರಡು ಬಂದೂಕು ಹಾಗೂ 34 ಗ್ರಾಂ ಚಿನ್ನಾಭರಣಗಳನ್ನು ವಶ ಪಡಿಸಿಕೊಂಡಿದ್ದಾರೆ.
ಕಕ್ಕಬ್ಬೆ ಗ್ರಾಮದ ನಿವಾಸಿ ಕೆ.ಸಿ.ಅಶೋಕ ಹಾಗೂ ನಾಣಯ್ಯ (ವಿಜು) ಬಂಧಿತ ಆರೋಪಿಗಳು.
ಕಾಲೂರು ಗ್ರಾಮದ ಜಂಕ್ಷನ್ ಬಳಿ ಬಸ್ ತಂಗುದಾಣದಲ್ಲಿ ಸಂಶಯಾಸ್ಪದವಾಗಿ ಬಂದೂಕು ಹಿಡಿದು ನಿಂತಿದ್ದ ಕೆ.ಸಿ.ಅಶೋಕನನ್ನು ಸುತ್ತುವರಿದು ಸೆರೆ ಹಿಡಿದ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಿದಾಗ ಮಡಿಕೇರಿಯ ಶ್ರೀಓಂಕಾರೇಶ್ವರ ದೇವಾಲಯದ ಬಳಿಯ ಮನೆಯೊಂದರಿಂದ ಎರಡು ಬಂದೂಕು ಹಾಗೂ ಚಿನ್ನಾಭರಣ ಕಳ್ಳತನ ಮಾಡಿರುವುದಾಗಿ ತಿಳಿದು ಬಂದಿದೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಮತ್ತೊಬ್ಬ ಆರೋಪಿ ನಾಣಯ್ಯನನ್ನು ಬಂಧಿಸಿ ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.
ರವಿವಾರ ಬೆಳಗಿನ ಹಾವ 4.30ಗಂಟೆ ಸುಮಾರಿಗೆ ಪ್ರೊಬೆಷನರಿ ಐಪಿಎಸ್ ಅಧಿಕಾರಿ ಎನ್.ಯತೀಶ್, ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ಹೆಚ್.ಎನ್.ಸಿದ್ದಯ್ಯ, ಪಿಎಸ್ಐ ಚೇತನ್ ಹಾಗೂ ಸಿಬ್ಬಂದಿಗಳು ವಿಶೇಷ ಗಸ್ತು ಕರ್ತವ್ಯದಲ್ಲಿದ್ದಾಗ, ಗಾಳಿಬೀಡು, ಕಾಲೂರು ಕಡೆ ಹೋಗುವ ಜಂಕ್ಷನ್ ಬಳಿಯ ತಂಗುದಾಣದಲ್ಲಿ ಕೈಯ್ಯಲ್ಲಿ ಬಂದೂಕು ಹಿಡಿದು ನಿಂತಿದ್ದ ವ್ಯಕ್ತಿಯೊಬ್ಬ ಪೊಲೀಸರನ್ನು ಕಂಡು ಓಡಲೆತ್ನಿಸಿದನೆನ್ನಲಾಗಿದೆ.
ಕೂಡಲೇ ಆತನನ್ನು ಸುತ್ತುವರೆದು ಹಿಡಿದು ವಿಚಾರಿಸಿದಾಗ, ಆತ ಬಂದೂಕಿನ ಯಾವುದೇ ದಾಖಲೆಗಳು ಇಲ್ಲ ಎಂದು ತಿಳಿಸಿದನೆಂದು ಹೇಳಲಾಗಿದ್ದು, ಇದರೊಂದಿಗೆ ಆತ ಕಳೆದ ಒಂದು ತಿಂಗಳ ಹಿಂದೆ ಮಡಿಕೇರಿ ನಗರದ ಓಂಕಾರೇಶ್ವರ ದೇವಾಲಯದ ಬಳಿ ಇರುವ ಮನೆಯಿಂದ ರಾತ್ರಿ ಸಮಯದಲ್ಲಿ ಕಳ್ಳತನ ಮಾಡಿದ್ದಾಗಿಯೂ, ಈ ಬಂದೂಕಿನೊಂದಿಗೆ ಇನ್ನೊಂದು ಡಬಲ್ ಬ್ಯಾರೆಲ್ ಬಂದೂಕು ಹಾಗೂ ಚಿನ್ನಾಭರಣ ಕಳವು ಮಾಡಿರುವುದಾಗಿ ಬಾಯಿ ಬಿಟ್ಟಿದ್ದಾನೆ. ಕದ್ದ ಚಿನ್ನಾಭರಣವನ್ನು ಆರೋಪಿಯು ಮಡಿಕೇರಿ ಹಾಗೂ ವೀರಾಜಪೇಟೆಯ ಚಿನ್ನಾಭರಣ ಮಳಿಗೆಗಳಲ್ಲಿ ಮಾರಾಟ ಮಾಡಿದ್ದು, ಈ ಬಂದೂಕನ್ನು ಕೂಡಾ ಯಾರಿಗಾದರೂ ಮಾರಾಟ ಮಾಡುವ ಸಲುವಾಗಿ ತೆಗೆದುಕೊಂಡು ಹೋಗುತ್ತಿದ್ದುದಾಗಿ ತಿಳಿಸಿದ್ದಾನೆ ಎನ್ನಲಾಗಿದೆ.
ಈ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರಪ್ರಸಾದ್ ಅವರ ನಿರ್ದೇಶನದಲ್ಲಿ ಮಡಿಕೇರಿ ಉಪ ವಿಭಾಗ ಪೊಲೀಸ್ ಉಪ ಅಧೀಕ್ಷಕ ಕೆ.ಎಸ್.ಸುಂದರರಾಜ್ ಅವರ ಮಾರ್ಗದರ್ಶನದಲ್ಲಿ ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ಹೆಚ್.ಎಂ.ಸಿದ್ದಯ್ಯ, ಠಾಣಾಧಿಕಾರಿ ಎನ್.ಯತೀಶ್ಮ ಉಪ ನಿರೀಕ್ಷಕ ವಿ.ಚೇತನ್, ಸಿಬ್ಬಂದಿಗಳಾಗ ಇಬ್ರಾಹಿಂ, ಎ.ಯು. ಸತೀಶ್, ಎ.ಬಿ.ತೀರ್ಥಕುಮಾರ್, ಶಿವರಾಜೇಗೌಡ, ಕನ್ನಿಕಾ, ಸುಧಾಮಣಿ, ಚಾಲಕರಾದ ಸುನಿಲ್, ಅನಿಲ್ ಅವರುಗಳ ತಂಡ ರಚಿಸಿ ತನಿಖೆ ಮುಂದುವರಿಸಿದಾಗ, ಆರೋಪಿ ಅಶೋಕ್ ಮತ್ತು ನಾಣಯ್ಯ ಅಲಿಯಾಸ್ ವಿಜು ಅವರನ್ನು ವಶಕ್ಕೆ ಪಡೆದುಕೊಂಡು ಸುಮಾರು 2 ಲಕ್ಷ ರೂ.ಮೌಲ್ಯದ ಬಂದೂಕು ಹಾಗೂ 34 ಗ್ರಾಂ. ಚಿನ್ನದ ಒಡವೆಗಳನ್ನು ವಶಪಡಿಸಿಕೊಂಡಿದ್ದಾರೆ.
ಕಾರ್ಯಾಚರಣೆ ನಡೆಸಿದ ಪೊಲೀಸರ ತಂಡಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಪಿ.ರಾಜೇಂದ್ರಪ್ರಸಾದ್ ಅವರು ಬಹುಮಾನ ಘೋಷಿಸಿದ್ದಾರೆ.







