ಹಳಸಿದ ಕಾಂಗ್ರೆಸ್, ಹಸಿದ ಜೆಡಿಎಸ್ನಿಂದ ಮೈತ್ರಿ ಸರಕಾರ: ಸಿ.ಟಿ.ರವಿ ಲೇವಡಿ

ಮಂಗಳೂರು, ಜೂ.4: ರಾಜ್ಯದಲ್ಲಿ ಹಸಿದ ಜೆಡಿಎಸ್ ಹಾಗೂ ಹಳಸಿದ ಕಾಂಗ್ರೆಸ್ ಮೈತ್ರಿ ಸರಕಾರ ಮಾಡಿದೆ ಎಂದು ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಲೇವಡಿ ಮಾಡಿದ್ದಾರೆ.
ಮಂಗಳೂರಿನಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬೆಂಗಳೂರು, ಬಿಜಾಪುರ, ಬಳ್ಳಾರಿ, ಬೆಳಗಾವಿ ಹಾಗೂ ಬೀದರ್ನಲ್ಲಿ ಬಿಜೆಪಿಗೆ ನಿರೀಕ್ಷಿತ ಸ್ಥಾನಗಳು ಸಿಗದೆ ಆಡಳಿತ ನಡೆಸಲು ಮ್ಯಾಜಿಕ್ ಸ್ಥಾನ ಗಳಿಸುವಲ್ಲಿ ಪಕ್ಷ ವಿಫಲವಾಗಿದೆ. ಆದರೆ ಜನಾದೇಶ ಕಳೆದುಕೊಂಡಿರುವ ಹಾಗೂ ಜನಾದೇಶ ಗಳಿಸದಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ಅಪವಿತ್ರ ಮೈತ್ರಿಯ ಮೂಲಕ ಸರಕಾರ ರಚಿಸಿದೆ. ಹಸಿದ ಜೆಡಿಎಸ್ ಹಾಗೂ ಹಳಸಿದ ಕಾಂಗ್ರೆಸ್ನ ಮೈತ್ರಿ ಸರಕಾರ ಇದೆಂದು ಲೇವಡಿ ಮಾಡಿದರು.
ಕೆಲವೊಂದು ಜಿಲ್ಲೆಗಳಲ್ಲಿ ಬಿಜೆಪಿ ನಿರೀಕ್ಷಿತ ಸ್ಥಾನಗಳನ್ನು ಗಳಿಸುವಲ್ಲಿ ವಿಫಲವಾಗಿರುವ ಬಗ್ಗೆ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರದ ಚುನಾವಣೆಯ ಬಳಿಕ ಸಮಾಲೋಚನೆ ನಡೆಸಿ ಚರ್ಚಿಸಲಾಗುವುದು. ನರೇಂದ್ರ ಮೋದಿಯವರ ನಾಯಕತ್ವ ಹಾಗೂ ಅಮಿತ್ ಶಾರವರ ಶ್ರಮದ ಹೊರತಾಗಿಯೂ ಮ್ಯಾಜಿಕ್ ನಂಬರ್ ತಲುಪದಿರಲು ಸಾಧ್ಯವಾಗದ ನಮ್ಮ ವೈಫಲ್ಯಗಳನ್ನು ಕಂಡುಕೊಂಡು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜನರನ್ನು ಒಗ್ಗಟ್ಟಾಗಿಸಲು ಪ್ರಯತ್ನಿಸಲಾಗುವುದು ಎಂದು ಸಿ.ಟಿ.ರವಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.