ಉಡುಪಿ: ಬಸ್ಸಿನಲ್ಲಿ ಹೃದಯಾಘಾತದಿಂದ ಪೊಲೀಸ್ ಸಿಬ್ಬಂದಿ ಮೃತ್ಯು

ಕೋಟ, ಜೂ. 4: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಸಿಬ್ಬಂದಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಸೋಮವಾರ ಸಾಬರಕಟ್ಟೆ ಜಂಕ್ಷನ್ ಬಳಿ ನಡೆದಿದೆ.
ಮೃತರನ್ನು ಮಡಾಮಕ್ಕಿ ಸಮೀಪದ ಬೆದ್ಪೆ ನಿವಾಸಿ ವಸಂತ ಪೂಜಾರಿ (39) ಎಂದು ಗುರುತಿಸಲಾಗಿದೆ.
ಅವರು ಕರ್ತವ್ಯ ಮುಗಿಸಿ ಖಾಸಗಿ ಬಸ್ಸಿನಲ್ಲಿ ಉಡುಪಿಯಿಂದ ಬ್ರಹ್ಮಾವರ ಮಾರ್ಗವಾಗಿ ಶಂಕರನಾರಾಯಣದ ಹೈರು ಬೈಲುವಿಗೆ ಹೋಗುತ್ತಿದ್ದರು. ಅವರಿಗೆ ದಾರಿ ಮಧ್ಯೆ ಸಾಬರಕಟ್ಟೆ ಸಮೀಪ ಎದೆ ನೋವು ಕಾಣಿಸಿಕೊಂಡಿದ್ದು, ಕೂಡಲೇ ಬಸ್ನಲ್ಲಿದ್ದವರು ಇವರನ್ನು ಸ್ಥಳೀಯ ವೈದ್ಯರ ಬಳಿ ಕರೆದುಕೊಂಡು ಹೋದರು. ಆದರೆ ವೈದ್ಯರು ಪರೀಕ್ಷಿಸಿದಾಗ ವಸಂತ ಪೂಜಾರಿ ಮೃತಪಟ್ಟಿದ್ದರು.
2003ರಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಗೆ ಸೇರ್ಪಡೆಗೊಂಡ ಅವರು ಕೆಲವು ಸಮಯ ಅರಣ್ಯ ಪೊಲೀಸ್ ಪಡೆಯಲ್ಲೂ ಕರ್ತವ್ಯ ನಿರ್ವಹಿಸಿದ್ದರು. ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಮೃತದೇಹವನ್ನು ಅಜ್ಜರ ಕಾಡು ಶವಗಾರದಲ್ಲಿ ಇರಿಸಲಾಗಿದ್ದು, ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ, ಹೆಚ್ಚುವರಿ ಎಸ್ಪಿ ಕುಮಾರಚಂದ್ರ, ಡಿವೈಎಸ್ಪಿ ಜೈಶಂಕರ್, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ನಿರೀಕ್ಷಕ ರಾಘವೇಂದ್ರ ಶವಗಾರಕ್ಕೆ ಭೇಟಿ ನೀಡಿ ಸಂತಾಪ ವ್ಯಕ್ತಪಡಿಸಿದರು.