ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆ ಅಪಾರವಾಗಿದೆ: ಯದುವೀರ್
ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಆಚರಣೆ

ಮೈಸೂರು,ಜೂ.4: ನಮ್ಮ ನಾಡಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆ ಅಪಾರವಾಗಿದೆ ಎಂದು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಬಣ್ಣಿಸಿದರು.
ಮೈಸೂರು ಅರಮನೆ ಆವರಣದಲ್ಲಿ ಸೋಮವಾರ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಆಚರಣೆ ಸಂದರ್ಭ ಒಡೆಯರ್ ಪುತ್ಥಳಿಗೆ ಪುಷ್ಪಾರ್ಚನೆ ಗೈದು ಗೌರವ ಸಮರ್ಪಿಸಿದರು. ಬಳಿಕ ಮಾತನಾಡಿದ ಅವರು ನಾಲ್ವಡಿ ಕೃಷ್ಣರಾಜ ಒಡೆಯರು ಆ ಕಾಲದಲ್ಲೇ ಯುವಕರಿಗೆ ಸ್ಫೂರ್ತಿಯಾಗುವಂತಹ ಆಡಳಿತ ಕೊಟ್ಟಿದ್ದಾರೆ. ಮೈಸೂರು ಪ್ರಾಂತ್ಯಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ. ಅವರು ದೂರದೃಷ್ಟಿಯ ವ್ಯಕ್ತಿತ್ವವುಳ್ಳವರಾಗಿದ್ದರು ಎಂದು ಹೇಳಿದರು.
ಆ ಕಾಲದಲ್ಲಿ ಅವರು ಕೊಟ್ಟ ಕೊಡುಗೆಯನ್ನು ಇವತ್ತಿಗೂ ನಾವು ನೋಡುತ್ತಿದ್ದೇವೆ. ಇವತ್ತು ಪಾಲಿಕೆ ವತಿಯಿಂದ ನಾಲ್ವಡಿ ಒಡೆಯರ್ ಜಯಂತಿ ಆಚರಿಸುತ್ತಿದ್ದಾರೆ. ಮುಂದೆ ಇದು ದೊಡ್ಡ ಮಟ್ಟದಲ್ಲಿ ಆಗಬೇಕಿದೆ ಎಂದರು.
ಯದುವೀರ್ ಅವರ ಜೊತೆ ಜಯಂತಿ ಆಚರಣೆಯ ವೇಳೆ ಅರಮನೆ ಆಡಳಿತ ಮಂಡಳಿಯ ಉಪನಿರ್ದೇಶಕ ಸುಬ್ರಮಣ್ಯ ಕೂಡ ಪಾಲ್ಗೊಂಡು ಒಡೆಯರ್ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಿದರು.





