ಪೇಜಾವರ ಶ್ರೀಗೆ ಮಾಹಿತಿ ಕೊರತೆ: ಶೋಭಾ ಕರಂದ್ಲಾಜೆ
'ಸರಕಾರದ ಸಾಧನೆ ನಿರೀಕ್ಷಿತ ಮಟ್ಟದಲ್ಲಿ ಇಲ್ಲ' ಸ್ವಾಮೀಜಿ ಹೇಳಿಕೆ

ಮಂಗಳೂರು, ಜೂ. 5: ಪೇಜಾವರ ಶ್ರೀಗಳು ಸನ್ಯಾಸಿಗಳು. ಅವರು ಕೇಂದ್ರ ಸರಕಾರದ ಯೋಜನೆಗಳ ಬಗ್ಗೆ ಮಾಧ್ಯಮಗಳಿಂದ ಎಷ್ಟು ತಿಳಿದುಕೊಂಡಿದ್ದಾರೆ. ಕಾರ್ಯಕರ್ತರಿಂದ ಅವರಿಗೆ ಎಷ್ಟು ಮಾಹಿತಿ ಇದೆ ಎಂದು ತಿಳಿದಿಲ್ಲ. ಹಾಗಾಗಿ ಹಿರಿಯರ ಮೂಲಕ ಕೇಂದ್ರ ಸರಕಾರದ ಅಭಿವೃದ್ಧಿ ಕಾರ್ಯಗಳ ಕುರಿತಂತೆ ಅವರಿಗೆ ಮಾಹಿತಿ ಒದಗಿಸಲು ಪ್ರಯತ್ನಿಸಲಾಗುವುದು ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಬಿಜೆಪಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸರಕಾರದ ಸಾಧನೆ ನಿರೀಕ್ಷಿತ ಮಟ್ಟದಲ್ಲಿ ಇಲ್ಲ ಎಂಬ ಪೇಜಾವರ ಶ್ರೀಗಳ ಹೇಳಿಕೆ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಅವರು ಈ ಪ್ರತಿಕ್ರಿಯೆ ನೀಡಿದರು.
ಪೇಜಾವರ ಶ್ರೀ ಯಾವ ಆಧಾರದಲ್ಲಿ ಈ ಹೇಳಿಕೆ ನೀಡಿದ್ದಾರೆಂಬ ಬಗ್ಗೆ ಮಾಹಿತಿ ಇಲ್ಲ. ಗಂಗಾ ಶುದ್ಧೀಕರಣ ಬಹಳ ದೊಡ್ಡ ಯೋಜನೆ. ಆಗ್ರಾದಿಂದ ಹಿಡಿದು ದೇಶದ ವಿವಿಧ ಭಾಗಗಳಿಂದ ಗಂಗೆಯನ್ನು ಸೇರುವ ತ್ಯಾಜ್ಯವನ್ನು ಶುದ್ಧಗೊಳಿಸುವುದು ಸುಲಭದ ಕೆಲಸವಲ್ಲ. ಹಾಗಿದ್ದರೂ ಕಳೆದ ನಾಲ್ಕು ವರ್ಷಗಳಿಂದ ಗಂಗೆಯನ್ನು ನೋಡಿದವರಿಗೆ ಹಿಂದೆ ಹೇಗಿತ್ತು ಮತ್ತು ಈಗ ಹೇಗಿದೆ ಎಂಬುದು ತಿಳಿಯುತ್ತದೆ ಎಂದರು.
ವಿದೇಶದಲ್ಲಿರುವ ಕಪ್ಪು ಹಣವನ್ನು ತರುವ ಕುರಿತಂತೆಯೂ ಕೇಂದ್ರ ಸರಕಾರ ಕಾನೂನು ರೂಪಿಸಿದೆ. ವಿದೇಶಗಳಲ್ಲಿರುವ ಕಾನೂನಿಗೆ ಹೊಂದಾಣಿಕೆ ಮಾಡಿಕೊಂಡು ಕಪ್ಪು ಹಣವನ್ನು ತರಿಸಬೇಕಾಗಿದೆ. ಆ ನಿಟ್ಟಿನಲ್ಲಿ ಕ್ರಮಗಳು ನಡೆಯುತ್ತಿವೆ ಎಂದು ಸಂಸದೆ ಪ್ರತಿಕ್ರಿಯಿಸಿದರು.
ಹಿಂದಿನ ಅವ್ಯವಹಾರ ಮುಚ್ಚಿ ಹಾಕಲು ಮತ್ತೆ ಅದೇ ಖಾತೆಗೆ ಪಟ್ಟು
ಹಿಂದಿನ ಸರಕಾರದ ಅವಧಿಯಲ್ಲಿ ಇಂಧನ ಸಚಿವರಾಗಿದ್ದು ಡಿ.ಕೆ. ಶಿವಕುಮಾರ್ ಆ ಖಾತೆಯನ್ನು ಯಾವ ರೀತಿ ನಿರ್ವಹಿಸಿದ್ದಾರೆಂಬ ಬಗ್ಗೆ ಮಾಹಿತಿ ಇಲ್ಲ. ಆದರೆ ನಾನು ಇಂಧನ ಖಾತೆ ಸಚಿವೆಯಾಗುವ ಹಿಂದಿನ ಸಚಿವರು ಯಾವ ರೀತಿ ಖಾತೆಯನ್ನು ನಡೆಸಿದ್ದರು ಎಂಬುದು ನನಗೆ ತಿಳಿದಿದೆ. ಇದೀಗ ಆ ಖಾತೆಗಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಪ್ರತಿನಿಧಿಗಳಿಬ್ಬರೂ ರಚ್ಚೆ ಹಿಡಿದು ಕೇಳುತ್ತಿರುವ ಹಿಂದಿನ ಉದ್ದೇಶ ನನಗೆ ತಿಳಿದಿಲ್ಲ. ಆದರೆ ಕಳೆದ ಬಾರಿ ಈ ಖಾತೆಯನ್ನು ಅತ್ಯಂತ ಕೆಟ್ಟದಾಗಿ ನಡೆಸಲಾಗಿದೆ. ಆ ಸಂದರ್ಭದಲ್ಲಿ ನಡೆದಿರುವ ಅವ್ಯವಹಾರವನ್ನು ಮುಚ್ಚಿ ಹಾಕುವುದಕ್ಕಾಗಿಯೇ ಮತ್ತೆ ಅದೇ ಖಾತೆಯನ್ನು ಡಿಕೆಶಿ ಕೇಳುತ್ತಿದ್ದಾರೆ ಎಂದು ಶೋಭಾ ಕರಂದ್ಲಾಜೆ ಆರೋಪಿಸಿದರು.
ರಾಜ್ಯದಲ್ಲಿ ಸದ್ಯ ಸರಕಾರ ಇರುವುದೇ ಅರಿವಾಗುತ್ತಿಲ್ಲ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ಮಾತ್ರ ಕಾಣುತ್ತಾರೆ. ಚುನಾವಣೆಯ ಮತ ಎಣಿಕೆ ಬಳಿಕ 10 ದಿನಗಳ ಕಾಲ ಎರಡೂಪಕ್ಷಗಳ ಶಾಸಕರು ರೆಸಾರ್ಟ್ ರಾಜಕೀಯದಲ್ಲಿ ಕಳೆದರು. ಇದೀಗ ಡೆಲ್ಲಿ ರಾಜಕಾರಣದಲ್ಲಿ ತಲ್ಲೀನರಾಗಿದ್ದಾರೆ. ರಾಜ್ಯದ ಜನತೆಯ ಸಂಕಷ್ಟಗಳ ಬಗ್ಗೆ ಸರಕಾರಕ್ಕೆ ಪರಿವೇ ಇಲ್ಲವಾಗಿದೆ ಎಂದು ಸಂಸದೆ ಆರೋಪಿಸಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ನಾಲ್ಕು ವರ್ಷಗಳ ಸಾಧನೆಯನ್ನು ವಿವರಿಸಿದ ಅವರು, ನರೇಂದ್ರ ಮೋದಿ ಪ್ರಧಾನಿ ಆದ ಬಳಿಕ ವಿಶ್ವದ ರಾಷ್ಟ್ರಗಳು ಭಾರತಕ್ಕೆ ಕೆಂಪು ಹಾಸಿನ ಸ್ವಾಗತವನ್ನು ನೀಡುತ್ತಿವೆ. ದೇಶದ ಜಿಡಿಪಿ ಏರಿಕೆಯಾಗಿದೆ ಎಂದರು.
ಪಾಕಿಸ್ತಾನಕ್ಕೆ ಅಮೆರಿಕ ಕೊಡುತ್ತಿದ್ದ ಹಲವಾರು ಸೌಲಭ್ಯಗಳನ್ನು ನಿಲ್ಲಿಸಲಾಗಿದೆ. ವಿಶ್ವಸಂಸ್ಥೆಯೂ ಪಾಕಿಸ್ತಾನ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದೆ ಎಂದು ಹೇಳಿಕೊಂಡಿದೆ. ಇತರ ರಾಷ್ಟ್ರಗಳಿಂದ ಪಾಕಿಸ್ತಾನವನ್ನು ಏಕಾಂಗಿಯಾಗಿಸುವ ಭಾರತದ ಉದ್ದೇಶ ಈಡೇರಿದೆ. ಯುಪಿಎ ಆಡಳಿತಾವಧಿಯಲ್ಲಿ ಮಾಡಲಾದ ಎಲ್ಲಾ ಹೊಂಡಗಳನ್ನು ತುಂಬಿಸಿ ಭಾರತ ಅಭಿವೃದ್ಧಿಗೊಂಡಿದೆ. ಆರ್ಥಿಕ ಪರಿಸ್ಥಿತಿ ಸುಸ್ಥಿತಿಗೆ ಬಂದಿದೆ. ನೋಟು ಅಮಾನ್ಯೀಕರಣದಿಂದ ಅಕ್ರಮ ಹಣವನ್ನು ಪತ್ತೆ ಹಚ್ಚುವ ಕೆಲಸವಾಗಿದೆ. ಕಾಂಗ್ರೆಸ್ ಗಾಂಧೀಜಿಯನ್ನು ಓಟ್ ಬ್ಯಾಂಕ್ ಆಗಿ ಮಾತ್ರವೇ ಉಪಯೋಗಿಸಿಕೊಂಡಿತ್ತು. ಆದರೆ ಮೋದಿ ಸರಕಾರ ಗಾಂಧೀಜಿಯವರ ಸ್ವಚ್ಛ ಭಾರತ ಕಲ್ಪನೆಯನ್ನು ಸಾಕಾರಗೊಳಿಸಿದೆ. ಆದ್ದರಿಂದಾಗಿ 3.5 ಲಕ್ಷ ಗ್ರಾಮಗಳು ಬಯಲು ಶೌಚಮುಕ್ತವಾಗಿವೆ. 7.80 ಕೋಟಿ ಮನೆಗಳಿಗೆ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಸರಕಾರಿ ಆಸ್ಪತ್ರೆಗಳಿಗೆ ವೈದ್ಯರ ನೇಮಕವಾಗಿದೆ. 20 ಹೊಸ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು, 497 ಡಯಾಲಿಸಿಸ್ ಕೇಂದ್ರಗಲು, ವಿದ್ಯುದ್ದೀಕರಣ ಯೋಜನೆಯಿಂದ 18500 ಹಳ್ಳಿಗಳು ಹೊಸತಾಗಿ ವಿದ್ಯುತ್ ಪಡೆದುಕೊಂಡಿವೆ. ಕೇಂದ್ರ ಸರಕಾರವು 30 ಕೋಟಿ ಎಲ್ಇಡಿ ಬಲ್ಬ್ಗಳನ್ನು ನೀಡಿದ್ದು, ರಾಜ್ಯ ಸರಕಾರವು ಅದನ್ನು ತಮ್ಮ ಯೋಜನೆ ಎಂದು ಬಿಂಬಿಸಿ ಪ್ರಚಾರ ಪಡೆದುಕೊಂಡಿದೆ. ಇದು ಕೇಂದ್ರದ ಯೋಜನೆಯಾಗಿದ್ದು, ಇದಕ್ಕಾಗಿ 25000 ಕೋಟಿ ರೂ. ಹಣವನ್ನು ಕೇಂದ್ರ ಒದಗಿಸಿದೆ ಎಂದು ಅವರು ಕೇಂದ್ರ ಸರಕಾರದ ಸಾಧನೆಗಳ ವಿವರ ನೀಡಿದರು.
ಗೋಷ್ಠಿಯಲ್ಲಿ ಬ್ರಿಜೇಶ್ ಚೌಟ, ಕಿಶೋರ್ ರೈ, ಪ್ರಭಾಮಾಲಿನಿ, ಕರುಣಾಕರ್, ಪ್ರತಾಪ್ ಸಿಂಹ ನಾಯಕ್, ರವಿಚಂದ್ರ, ಪ್ರೇಮಾನಂದ ಶೆಟ್ಟಿ, ಭಾಸ್ಕರ ಚಂದ್ರ ಶೆಟ್ಟಿ ಮೊದಲಾವದರು ಉಪಸ್ಥಿತರಿದ್ದರು.