ಮಡಿಕೇರಿ: ಜಿಲ್ಲಾ ಮಟ್ಟದ ಸಾಹಿತ್ಯ ಶಿಬಿರಕ್ಕೆ ಆಹ್ವಾನ
ಮಡಿಕೇರಿ,ಜೂ.05: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಹಾಗೂ ಸಾಹಿತ್ಯ ಅಕಾಡೆಮಿ ಮತ್ತು ಕೊಡಗು ಜಿಲ್ಲಾ ಲೇಖಕರ ಹಾಗೂ ಕಲಾವಿದರ ಬಳಗದ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಸಾಹಿತ್ಯ ಶಿಬಿರ ಏರ್ಪಡಿಸಲಾಗಿದ್ದು, ಆಸಕ್ತರು ಹೆಸರು ನೋಂದಾಯಿಸಿಕೊಳ್ಳುವಂತೆ ಕೋರಲಾಗಿದೆ.
ಕೊಡವ, ಅರೆಭಾಷೆ ಹಾಗೂ ಕನ್ನಡ ಭಾಷೆಯ ಲೇಖಕರು, ಕವಿಗಳನ್ನು ಒಂದೇ ವೇದಿಕೆಯಲ್ಲಿ ತಂದು ಕಾರ್ಯಕ್ರಮ ನಡೆಸುವ ಕುರಿತು ಕೊಡವ ಸಾಹಿತ್ಯ ಅಕಾಡೆಮಿಯಲ್ಲಿ ಮಂಗಳವಾರ ಪೂರ್ವಭಾವಿ ಸಭೆ ನಡೆಯಿತು. ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪೆಮ್ಮಂಡ ಪೊನ್ನಪ್ಪ, ಅರೆಭಾಷೆ ಅಕಾಡೆಮಿ ಅಧ್ಯಕ್ಷ ಪಿ.ಸಿ.ಜಯರಾಮ್, ಅಕಾಡೆಮಿ ಸದಸ್ಯರು, ಕೊಡಗು ಜಿಲ್ಲಾ ಲೇಖಕರ ಮತ್ತು ಕಲಾವಿದರ ಬಳಗದ ಬಿ.ಎ.ಷಂಶುದ್ದೀನ್ ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.
ಜಿಲ್ಲಾ ಮಟ್ಟದ ಸಾಹಿತ್ಯ ಶಿಬಿರವನ್ನು ಜೂನ್ 24 ರಂದು ಮಡಿಕೇರಿಯಲ್ಲಿ ನಡೆಸಲು ತೀರ್ಮಾನಿಸಲಾಯಿತು. ಅಂದು ಇಬ್ಬರು ಖ್ಯಾತ ಸಾಹಿತಿಗಳನ್ನು ಶಿಬಿರಕ್ಕೆ ಆಹ್ವಾನಿಸಲಾಗುವುದು. ಅವರೊಂದಿಗೆ ಸ್ಥಳೀಯ ಸಾಹಿತಿ, ಕವಿಗಳು ಸಂವಾದ ನಡೆಸಲಿದ್ದಾರೆ. ಜಿಲ್ಲೆಯಲ್ಲಿನ ಸಾಹಿತ್ಯ ಚಟುವಟಿಕೆ, ಸವಾಲುಗಳು, ಅವಕಾಶದ ಕುರಿತು ಚರ್ಚೆ ನಡೆಸಲಿದ್ದಾರೆ. ಈ ಶಿಬಿರದಲ್ಲಿ ಭಾಗವಹಿಸಲು ಆಸಕ್ತರು ಕಾರ್ಯಕ್ರಮದ ಸಂಚಾಲಕರಾದ ಐತಿಚಂಡ ರಮೇಶ್ ಉತ್ತಪ್ಪ (ಮೊ.94830 49005), ಕಡ್ಲೆರ ತುಳಸಿ ಮೋಹನ್ (ಮೊ:9483110940) ಅಥವಾ ಬಿ.ಎ.ಷಂಶುದ್ದೀನ್ (ಮೊ: 9480083264) ಇವರನ್ನು ಸಂಪರ್ಕಿಸುವಂತೆ ಕೋರಲಾಗಿದೆ.