ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸಲು ಶಾಸಕ ಸುನಿಲ್ ನಾಯ್ಕ ಕರೆ

ಭಟ್ಕಳ, ಜೂ. 5: ವಿದ್ಯಾರ್ಥಿಗಳು ತಮ್ಮ ಪರಿಸರವನ್ನು ಸ್ವಚ್ಚವಾಗಿಟ್ಟು ಕೊಳ್ಳುವ ಮೂಲಕ ತಮ್ಮ ತಮ್ಮ ಪ್ರದೇಶವನ್ನು ಉತ್ತಮವಾಗಿಟ್ಟುಕೊಳ್ಳಬೇಕು. ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸಲು ಎಲ್ಲರ ಸಹಕಾರ ಅಗತ್ಯ ಎಂದು ಶಾಸ ಸುನಿಲ್ ನಾಯ್ಕ ಕರೆ ನೀಡಿದರು.
ಅವರು ಅರಣ್ಯ ಇಲಾಖೆ, ಶಿಕ್ಷಣ ಇಲಾಖೆ, ಭಟ್ಕಳ ಸಿಟಿ ಜೇಸೀಸ್ ಸಹಯೋಗದೊಂದಿಗೆ ಎರ್ಪಡಿಸಲಾಗಿದ್ದ ಪರಿಸರ ದಿನಾಚರಣೆ, ಬೃಹತ್ ಪರಿಸರ ಜಾಗೃತಿ ಜಾಥಾವನ್ನು ಹಸಿರು ನಿಶಾನೆ ತೋರಿಸುವ ಮೂಲಕ ಉದ್ಘಾಟಿಸಿ ನಂತರ ನಡೆದ ಬೀದಿ ನಾಟಕವನ್ನು ವೀಕ್ಷಿಸಿ ಮಾತನಾಡುತ್ತಿದ್ದರು.
ಪರಿಸರ ದಿನಾಚರಣೆಯನ್ನು ಇಲ್ಲಿನ ಅರಣ್ಯ ಇಲಾಖೆಯ ಆವರಣದಲ್ಲಿ ಶಾಸಕ ಸುನಿಲ್ ನಾಯ್ಕ ಹಸಿರು ನಿಶಾನೆ ತೋರಿಸುವ ಮೂಲಕ ಪರಿಸರ ಜಾಥಾಕ್ಕೆ ಚಾಲನೆ ನೀಡಿದ ನಂತರ ಪರಿಸರ ಜಾಥಾ ಹೊರಟು ಶಂಶುದ್ಧೀನ್ ಸರ್ಕಲ್ ಮೂಲಕ ಬಂದರ ರಸ್ತೆಯಲ್ಲಿರುವ ಪುರಸಭೆಯ ಸರ್ದಾರ್ ವಲ್ಲಭಭಾಯಿ ಪಟೇಲ್ ಉದ್ಯಾನವನ್ನು ತಲುಪಿತು. ನಂತರ ಅಲ್ಲಿ ಗಿಡವನ್ನು ನೆಟ್ಟ ಶಾಸಕ ಸುನಿಲ್ ನಾಯ್ಕ, ಹಾಗೂ ಅಧಿಕಾರಿಗಳು, ವಿದ್ಯಾರ್ಥಿಗಳು ಆನಂದ ಆಶ್ರಮ ಕಾನ್ವೆಂಟ್ಶಾಲೆಯ ಆರವಣಕ್ಕೆ ತೆರಳಿದರು.
ಆನಂದ ಆಶ್ರಮ ಕಾನ್ವೆಂಟ್ ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳಿಂದ ಬೀದಿ ನಾಟಕ ನಡೆಸಲಾಯಿತು. ಬೀದಿ ನಾಟಕವನ್ನು ಪ್ರದರ್ಶಿಸಿದ ವಿದ್ಯಾರ್ಥಿಗಳು ಮರವನ್ನು ಕಡಿಯುವುದರ ಮೂಲಕ ಯಾವ ರೀತಿಯಲ್ಲಿ ಪರಿಸರ ಹಾಳಾಗುತ್ತದೆ, ತನ್ಮೂಲಕ ಮಾನವನ ಆರೋಗ್ಯದ ಮೇಲೆ ಬೀಳುವ ಪರಿಣಾವನ್ನು ಸಹ ಬಿಂಬಿಸಿ, ಪರಿಸರ ಉಳಿಸುವ ಕುರಿತು ನಾಟಕ ಪ್ರದರ್ಶಿಸಿದರು.
ಈ ಸಂದರ್ಭದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬಾಲಕೃಷ್ಣ, ವಲಯ ಅರಣ್ಯಾಧಿಕಾರಿ ಶಂಕರ ಗೌಡ, ತಹಸೀಲ್ದಾರ್ ವಿ.ಪಿ. ಕೊಟ್ರಳ್ಳಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಆರ್. ಮುಂಜಿ, ಪುರಸಭಾ ಅಧ್ಯಕ್ಷ ಮುಹಮ್ಮದ್ ಸಾಧಿಕ್ ಮಟ್ಟಾ, ನಾಮಧಾರಿ ಅಭಿವೃದ್ಧಿ ಸಂಘದ ಅಧ್ಯಕ್ಷ ಎಂ. ಆರ್. ನಾಯಕ, ತಂಜೀಂ ಸದಸ್ಯ ಮೀರಾ ಸಾಬ್, ಜೇಸೀಸ್ ಅಧ್ಯಕ್ಷ ಜಬ್ಬಾರ್ ಸಾಬ್, ಮಾಜಿ ಅಧ್ಯಕ್ಷ ನಾಗರಾಜ ಶೇಟ್, ಸದಸ್ಯ ರಮೇಶ ಖಾರ್ವಿ ಸೇರಿದಂತೆ ನಾಗರೀಕರು, ಶಿಕ್ಷಕರು, ಉಪಾಧ್ಯಕ್ಷರು ಉಪಸ್ಥಿತರಿದ್ದರು.