ಚೊಕ್ಕಬೆಟ್ಟುವಿನಲ್ಲಿ ಕೊಲೆ ಪ್ರಕರಣ: ಆರೋಪಿಗಳ ಬಂಧನ

ಮಂಗಳೂರು, ಜೂ. 5: ಕಳೆದ ಶನಿವಾರ ಚೊಕ್ಕಬೆಟ್ಟು ಸೇತುವೆ ಅಡಿಭಾಗದ ತೋಡಿನಲ್ಲಿ ಕತ್ತರಿಸಲ್ಪಟ್ಟ ರೀತಿಯಲ್ಲಿ ಪತ್ತೆಯಾಗಿದ್ದ ಮೃತದೇಹಕ್ಕೆ ಸಂಬಂಧಿಸಿ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಬಾಗಲಕೋಟೆ ಹುನುಗುಂದ ತಾಲೂಕಿನ ಗೌಡಪ್ಪ ಗೌಡ ಸಣ್ಣಗೌಡ್ರ (55) ಮತ್ತು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹುಲ್ಲಪ್ಪ ಬಸಪ್ಪಸೂಡಿ (28) ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಜೂ. 2ರಂದು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮಡಿಯಪ್ಪ (45) ಎಂಬವರ ಮೃತದೇಹವು ತುಂಡರಿಸಲ್ಪಟ್ಟು ಕತ್ತರಿಸಲಾದ ಒಂದು ಭಾಗವು ಚೊಕ್ಕಬೆಟ್ಟುವಿನಲ್ಲಿ ಪತ್ತೆಯಾಗಿತ್ತು. ಅದೇ ದಿನ ಮಧ್ಯಾಹ್ನ 2-45 ಗಂಟೆಗೆ ಮೃತ ದೇಹದ ಉಳಿದ ಸೊಂಟದಿಂದ ಕೆಳಗಿನ ಭಾಗವು ತೋಡಿನಲ್ಲಿ ಪತ್ತೆಯಾಗಿತ್ತು. ಈ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣವು ದಾಖಲಾಗಿದೆ.
ಈ ಕುರಿತಂತೆ ಮೃತನ ಸಂಬಂಧಿಕರನ್ನು ಪತ್ತೆ ಮಾಡಿ, ಅವರನ್ನು ವಿಚಾರಿಸಿದಲ್ಲಿ, ಮೃತ ಮರಿಯಪ್ಪರು ಗೌಡಪ್ಪ ಮತ್ತು ಸಣ್ಣಗೌಡ್ರು ಎಂಬವರ ಜೊತೆ ವಾಸ ಮಾಡುತ್ತಿರುವ ಬಗ್ಗೆ ಮಾಹಿತಿಯನ್ನು ನೀಡಿದ್ದರು. ಈ ಮಾಹಿತಿಯ ಆಧಾರದ ಮೇಲೆ ಗೌಡಪ್ಪ ಗೌಡ, ಸಣ್ಣಗೌಡ್ರು ಎಂಬವರನ್ನು ದಿನಾಂಕ ಜೂ. 4ರಂದು ವಶಕ್ಕೆ ಪಡೆಯಲಾಗಿದೆ. ಮೃತರು ಮತ್ತು ಆರೋಪಿಗಳಿಬ್ಬರು ಒಂದೇ ಕೊಠಡಿಯಲ್ಲಿ ವಾಸವಿದ್ದು, ಆರೋಪಿ ಗೌಡಪ್ಪ ಗೌಡನು ಮೃತ ಮರಿಯಪ್ಪರಿಗೆ ಹಣವನ್ನು ನೀಡಬೇಕಾಗಿದ್ದು, ಈ ವಿಷಯದ ಕುರಿತು ಆರೋಪಿಗಳಿಬ್ಬರು ಸೇರಿ ಮರಿಯಪ್ಪರವರನ್ನು ಕೊಲೆ ಮಾಡಿರುವುದಾಗಿದೆ. ಪ್ರಸ್ತುತ ಆರೋಪಿಗಳಿಬ್ಬರು ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳ ಪತ್ತೆ ಕಾರ್ಯದಲ್ಲಿ ಮಂಗಳೂರು ಉತ್ತರ ಉಪ ವಿಭಾಗದ ಪ್ರಭಾರ ಸಹಾಯಕ ಪೊಲೀಸ್ ಆಯುಕ್ತ ಗೋಪಾಲಕೃಷ್ಣ ನಾಯಕ್ ಅವರ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಕೆ.ಜಿ ರಾಮಕೃಷ್ಣ, ಸುರತ್ಕಲ್ ಪೊಲೀಸ್ ಠಾಣಾ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಸಹಾಯಕ ಪೊಲೀಸ್ ಆಯುಕ್ತರ ಕಚೇರಿ ಸಿಬ್ಬಂದಿ ಭಾಗವಹಿಸಿದ್ದರು.







