ಸುಂಟಿಕೊಪ್ಪ: ರಸ್ತೆ ಅಪಘಾತ; ಲಾರಿ ಚಾಲಕ ಮೃತ್ಯು

ಸುಂಟಿಕೊಪ್ಪ,ಜೂ.5: ಸುಂಟಿಕೊಪ್ಪ ರಸ್ತೆಗೆ ಅಡ್ಡಲಾಗಿ ಮಗುಚಿಕೊಂಡಿದ್ದ ಕಾಂಕ್ರಿಟ್ ಸಾಗಿಸುವ ಲಾರಿಯ ನೆರವಿಗೆ ಧಾವಿಸಿದ ಇನ್ನೊಂದು ಲಾರಿಯ ಚಾಲಕನಿಗೆ ಮತ್ತೊಂದು ಹತ್ತು ಚಕ್ರದ ಲಾರಿ ಢಿಕ್ಕಿ ಹೊಡೆದ ಪರಿಣಾಮ ಆತ ಸ್ಥಳದಲ್ಲೇ ಅಸುನಿಗೀರುವ ಘಟನೆ ವರದಿಯಾಗಿದೆ.
ಸೋಮವಾರ ರಂದು ರಾತ್ರಿ ಅಂದಾಜು 10.45 ರ ಸಂದರ್ಭ ಸುಂಟಿಕೊಪ್ಪ ಮಾರ್ಗವಾಗಿ ಮಡಿಕೇರಿ ಕಡೆಗೆ ಸಾಗುತ್ತಿದ್ದ ಕಾಂಕ್ರಿಟ್ ತುಂಬಿದ ಲಾರಿಯು ಚಾಲಕನ ನಿಯಂತ್ರಣ ಕಳೆದುಕೊಂಡು ಗದ್ದೆಹಳ್ಳದ ಆರ್ ಆರ್ ಕಾರ್ ಗ್ಯಾರೇಜ್ ಸಮೀಪದ ತಿರುವಿನಲ್ಲಿ (ಹಳೆ ವಂದಾನಬಾರ್) ಸನಿಹ ಮಗುಚಿಬಿದ್ದಿದೆ. ನಂತರ ಇದೇ ಲಾರಿಯ ಮಾಲಿಕರಾದ ಸ್ಥಳೀಯ ಗುತ್ತಿಗೆದಾರರೊಬ್ಬರ ಇನ್ನೊಂದು ಲಾರಿಯು ಮಗುಚಿಬಿದ್ದ ಲಾರಿಯ ನೆರವಿಗೆ ಬಂದಿದ್ದು, ಅದರ ಚಾಲಕನಾಗಿದ್ದ ರಾಜನ್ ತಾನು ತಂದಿದ್ದ ಲಾರಿಯಲ್ಲಿ ಮಗುಚಿಬಿದ್ದ ಲಾರಿಯ ಕಾಂಕ್ರಿಟ್ನ್ನು ತುಂಬಿಸಿದ್ದಾರೆ. ನಂತರ ಬೇರೆ ಚಾಲಕನಿಗೆ ನೆರವಿಗೆ ತಂದಿದ್ದ ಲಾರಿಯನ್ನು ಒಪ್ಪಿಸಿ ವಾಪಾಸು ಕಳುಹಿಸಿ ಮಗುಚಿಕೊಂಡಿದ್ದ ಕಾಂಕ್ರಿಟ್ ಲಾರಿಯ ಬದಿಯಲ್ಲಿ ನಿಂತಿದ್ದರು ಎನ್ನಲಾಗಿದೆ.
ಈ ವೇಳೆ ಸುಂಟಿಕೊಪ್ಪ ಕಡೆಯಿಂದ ಮಂಗಳೂರು ಕಡೆಗೆ ಸರಕು ತುಂಬಿಸಿಕೊಂಡು ತೆರಳುತ್ತಿದ್ದ 10 ಚಕ್ರದ ಲಾರಿಯೊಂದು ಚಾಲಕ ರಾಜೇಶ್ ರವರಿಗೆ ಢಿಕ್ಕಿಯಾಗಿದ್ದು, ಪರಿಣಾಮ ಗಂಭೀರ ಗಾಯಗೊಳಗಾದ ರಾಜೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರೊಂದಿಗೆ ಇದ್ದ ಇನ್ನೋರ್ವ ಕಾರ್ಮಿಕ ಪ್ರಶಾಂತ್ಗೆ ಗಾಯವಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸುಂಟಿಕೊಪ್ಪ ಠಾಣಾಧಿಕಾರಿ ಜಯರಾಮ್ ಹಾಗೂ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ತೆರಳಿ ಸ್ಥಳ ಪರಿಶೀಲನೆ ನಡೆಸಿ ಲಾರಿ ಚಾಲಕ ಗಿರೀಶ್ ವಿರುದ್ಧ ಮೊಕದ್ದಮೆ ದಾಖಲಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.
ಮೃತ ದೇಹದ ಮರಣೋತ್ತರ ಪರೀಕ್ಷೆಯನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ನಡೆಸಿ ನಂತರ ಕುಟುಂಬಸ್ಥರಿಗೆ ನೀಡಲಾಯಿತು.







