ಜೂ.8: ಕರ್ನಾಟಕ ನೈರುತ್ಯ ವಿಧಾನ ಪರಿಷತ್ ಪದವಿಧರರ ಕ್ಷೇತ್ರ ದಲ್ಲಿ ಚುನಾವಣೆ

ಮಂಗಳೂರು, ಜೂ. 5: ಕರ್ನಾಟಕ ನೈರುತ್ಯ ವಿಧಾನ ಪರಿಷತ್ ಪದವಿಧರರ ಕ್ಷೇತ್ರ ಮತ್ತು ಶಿಕ್ಷಕರ ಕ್ಷೇತ್ರಕ್ಕೆ ಜೂನ್ 8ರಂದು ಬೆ.7ರಿಂದ ಸಂಜೆ 5ರವರೆಗೆ ಜಿಲ್ಲೆಯಲ್ಲಿ ಒಟ್ಟು 37 ಮತದಾನ ಕೇಂದ್ರ ಚುನಾವಣೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಶಿಕ್ಷಕರ ಕ್ಷೇತ್ರಕ್ಕೆ 14 ಮತಗಟ್ಟೆಗಳಲ್ಲಿ ಹಾಗೂ ಪದವಿಧರ ಕ್ಷೇತ್ರಕ್ಕೆ 23 ಮತಗಟ್ಟೆಗಳಲ್ಲಿ ಜಿಲ್ಲೆಯಲ್ಲಿ ಚುನಾವಣೆ ನಡೆಯಲಿದೆ. ಪದವಿಧರ ಕ್ಷೇತ್ರದಲ್ಲಿ 7223 ಪುರುಷರು, 8271 ಮಹಿಳೆಯರು ಸೇರಿದಂತೆ ಒಟ್ಟು 15494 ಮತದಾರರಿದ್ದಾರೆ. ಶಿಕ್ಷಕರ ವಿಭಾಗದಲ್ಲಿ 2944 ಪುರುಷರು ಮತ್ತು 4196 ಮಹಿಳೆಯರು ಸೇರಿದಂತೆ ಒಟ್ಟು 7140 ಮತದಾರರು ಮತಚಲಾಯಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.
ಮತದಾರರಿಗೆ ಸೂಚನೆ:- ಮತಗಟ್ಟೆಯಲ್ಲಿ ನೀಡಲಾಗುವ ಬಣ್ಣದ ಸ್ಕೆಚ್ ಪೆನ್ನನ್ನು ಮಾತ್ರ ಬಳಸಬೇಕು .ಪ್ರಥಮ ಪಾಶಸ್ತ್ಯದ ಮತವನ್ನು (1) ಎನ್ನುವ ಅಂಕಿಯ ಮೂಲಕ ದಾಖಲಿಸ ಬೇಕು .ಉಳಿದಂತೆ 2..3..4 ಎಂದು ಇತರ ಪ್ರಾಶಸ್ತ್ಯದ ಮತ ನೀಡಲು ಅವಕಾಶವಿದೆ. ಒಂದು ಎಂದು ಅಕ್ಷರದಲ್ಲಿ ಬರೆದರೆ ಅಸಿಂಧು ವಾಗುತ್ತದೆ. ಪ್ರಥಮ ಪಾಶಸ್ತ್ಯಮತವನ್ನು ದಾಖಲಿಸುವುದು ಕಡ್ಡಾಯ ಇಲ್ಲದೆ ಇದ್ದರೆ ಅಸಿಂಧುವಾಗುತ್ತದೆ. ಪ್ರಥಮ ಎಣಿಕೆಯ ಸುತ್ತಿನಲ್ಲಿ ಪ್ರಥಮ ಪ್ರಾಶಸ್ತ್ಯದ ಮತಗಳ ಎಣಿಕೆ ಮಾತ್ರ ನಡೆಯುತ್ತಿದೆ. ಯಾವೂದೇ ಅಭ್ಯರ್ಥಿಗೆ ನಿಗದಿ ಪಡಿಸಿದ ಕೋಟಾದಷ್ಟು ಮತಗಳು ಲಭಿಸದೆ ಇದ್ದಾಗ ಮಾತ್ರ ಎರಡನೆ ಪ್ರಾಶಸ್ತ್ಯದ ಮತಗಳ ಎಣಿಕೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಪದವೀಧರ ಕ್ಷೇತ್ರದ ಮತದಾರರಿಗೆ ಬಲಗೈಯ ತೋರು ಬೆರಳಿಗೆ ಮತ್ತು ಶಿಕ್ಷಕರ ಕ್ಷೇತ್ರದ ಮತದಾರರಿಗೆ ಮತದಾನ ಕೇಂದ್ರದಲ್ಲಿ ಬಲಗೈಯ ಮಧ್ಯದ ಬೆರಳಿಗೆ ಅಳಿಸಲಾಗದ ಶಾಹಿಯನ್ನು ಹಾಕಲಾಗುವುದು. ಮತದರರು ಹನ್ನೆರಡು ಗುರುತು ಪತ್ರದಲ್ಲಿ ಯಾವೂದಾದರು ಒಂದನ್ನು ಮತದಾನ ಕೇಂದ್ರದಲ್ಲಿ ಹಾಜರು ಪಡಿಸಬೇಕಾಗಿದೆ. ಜೂನ್ 12ರಂದು ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಚುನಾವಣಾಧಿಕಾರಿ ಪ್ರಾದೇಶಿಕ ಆಯುಕ್ತರ ಸಮ್ಮುಖದಲ್ಲಿ ಮತ ಎಣಿಕೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಹೆಚ್ಚುವರಿ ಜಿಲ್ಲಾಧಿಕಾರಿ ವೈಶಾಲಿ ಉಪಸ್ಥಿತರಿದ್ದರು.







