ಕಾಡು ನಾಶದಿಂದ ಪ್ರಕೃತಿಯಲ್ಲಿ ಅಸಮತೋಲನ: ರವಿಕುಮಾರ್

ಕೊಣಾಜೆ, ಜೂ.6: ಕಾಡು ನಾಶದಿಂದ ಪ್ರಕೃತಿಯಲ್ಲಿ ಅಸಮತೋಲನ ಉಂಟಾಗುತ್ತದೆ. ನಾವು ಬದುಕಲು ಸಸಿ ನೆಟ್ಟು ಪೋಷಿಸುವಂತಹ ಅರಣೀಕರಣ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ಹಮ್ಮಿಕೊಂಡು ಕಾರ್ಯಗತವಾಗಬೇಕು. ಈ ನಿಟ್ಟಿನಲ್ಲಿ ಅರಣ್ಯ ವಿಭಾಗದಿಂದ ಎಲ್ಲಾ ಸಲಹೆ-ಸಹಕಾರಗಳನ್ನು ನೀಡಲು ಸಿದ್ಧ ಎಂದು ಮಂಗಳೂರಿನ ಉಪವಲಯ ಅರಣ್ಯಾಧಿಕಾರಿ ರವಿ ಕುಮಾರ್ ಹೇಳಿದರು.
ಸೌಜನ್ಯ ಸ್ಕೌಟ್ದಳ, ನೇತ್ರಾವತಿ ಇಕೋ ಕ್ಲಬ್ ಹರೇಕಳ ವತಿಯಿಂದ ಹರೇಕಳ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಮಂಗಳವಾರ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮಂಗಳೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಪ್ರೊ.ಪ್ರಶಾಂತ್ ನಾಕ್ ಮಾತನಾಡಿ, ಇಂದು ಕ್ಯಾನ್ಸರ್ಪೀಡಿತರ ಸಂಖ್ಯೆ ಅಪಾಯಕಾರಿ ಮಟ್ಟದಲ್ಲಿ ಏರುತ್ತಿದೆ. ಇದಕ್ಕೆ ಮುಖ್ಯ ಕಾರಣಗಳಲ್ಲಿ ಒಂದು ಪ್ಲಾಸ್ಟಿಕ್ ಮಾಲಿನ್ಯ. ಪ್ಲಾಸ್ಟಿಕ್ನಲ್ಲಿ ಇರುವ ಪುರಾನ್, ಒನ್ಫಿನಾಲ್, ಡೈಯಾಕ್ಲಿನ್, ಕ್ಯಾನ್ಸರ್ಕಾರಕಗಳಾಗಿವೆ. ನಾವು ಬಳಸಿ ಎಸೆಯುವ ಪ್ಲಾಸ್ಟಿಕ್ನಿಂದ ಪರಿಸರದಲ್ಲಿ ನಾನಾ ಸಮಸ್ಯೆಗಳ ಜೊತೆಗೆ ತೀವ್ರತರವಾದ ಆರೋಗ್ಯ ದುಷ್ಪರಿಣಾಮಗಳಿಗೆ ಕಾರಣವಾಗಿದೆ. ಆದುದರಿಂದ ಈ ವರ್ಷದ ವಿಶ್ವ ಪರಿಸರ ದಿನಾಚರಣೆಯ ಘೋಷವಾಕ್ಯ ಪ್ಲಾಸ್ಟಿಕ್ ಬಳಕೆ ಹತ್ತಿಕ್ಕಿ ಇದು ತುಂಬ ಪ್ರಸ್ತುತವಾಗಿದ್ದು, ಅದನ್ನು ನಾವೆಲ್ಲರೂ ಸೇರಿ ಕಾರ್ಯಗತಗೊಳಿಸಬೇಕು ಎಂದರು.
ಸಭಾಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯ ಕೆ.ರವೀಂದ್ರ ರೈ ವಹಿಸಿದ್ದರು. ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಪರಿಸರದ ಬಸ್ ನಿಲ್ದಾಣಗಳನ್ನು ಸ್ಕೌಟ್ಸ್, ಗೈಡ್ಸ್ ಮಕ್ಕಳು ಗುಡಿಸಿ, ಸ್ವಚ್ಛಗೊಳಿಸಿದರು.
ತದ ನಂತರ ಶಾಲೆಯ ಸುತ್ತಮುತ್ತ ಅರಣ್ಯ ಇಲಾಖೆಯಿಂದ ನೀಡಿದ ಸುಮಾರು 20 ಸಸಿಗಳನ್ನು ನೆಡಲಾಯಿತು. ನಿರೀಕ್ಷಾ ಮತ್ತು ಬಳಗ ಪರಿಸರ ಗೀತೆಯನ್ನು ಹಾಡಿದರು. ವಿಜ್ಞಾನ ಶಿಕ್ಷಕರಾದ ಕೃಷ್ಣ ಶಾಸ್ತ್ರಿ ನಿರೂಪಿಸಿದರು. ಶಿಕ್ಷಕರಾದ ರವಿಶಂಕರ್ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ತ್ಯಾಗಂ ಹರೇಕಳ ವಂದಿಸಿದರು.