ಲಿಂಗತ್ವ ಅಲ್ಪಸಂಖ್ಯಾತರಿಗೆ ಸ್ವ ಉದ್ಯೋಗಾವಕಾಶ
ಕೃಷಿ ವಿಜ್ಞಾನ ಕೇಂದ್ರದಲ್ಲಿ ಉತ್ಪಾದನಾ ಘಟಕದ ವ್ಯವಸ್ಥೆ: ಡಾ.ಶಿವಕುಮಾರ್ ಮಗದ

ಮಂಗಳೂರು, ಜೂ.6: ಲಿಂಗತ್ವ ಅಲ್ಪಸಂಖ್ಯಾತರು ಸ್ವಾಭಿಮಾನಿ ಬದುಕನ್ನು ಕಟ್ಟಿಕೊಳ್ಳಲು ಪೂರಕವಾಗುವ ಕೃಷಿ ಆಧಾರಿತ ಸ್ವ ಉದ್ಯೋಗಗಳನ್ನು ಕೈಗೊಳ್ಳಲು ಸಾಧ್ಯವಾಗುವಂತೆ ಜಾಗದ ವ್ಯವಸ್ಥೆಯೊಂದಿಗೆ ಉತ್ಪಾದನಾ ಘಟಕಕ್ಕೆ ನಗರ ಕೃಷಿ ವಿಜ್ಞಾನ ಕೇಂದ್ರದಲ್ಲಿ ವ್ಯವಸ್ಥೆ ಒದಗಿಸುವುದಾಗಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಶಿವಕುಮಾರ್ ಮಗದ ಭರವಸೆ ನೀಡಿದರು.
ಅವರು ಇಂದು ಜಿಲ್ಲಾ ಪಂಚಾಯತ್ನ ಸಭಾಂಗಣದಲ್ಲಿ ಪರಿವರ್ತನಾ ಟ್ರಸ್ಟ್ನಡಿ ಲಿಂಗತ್ವ ಅಲ್ಪಸಂಖ್ಯಾತರಿಗೆ ಸ್ವ ಉದ್ಯೋಗಗಳನ್ನು ಹಮ್ಮಿಕೊಳ್ಳುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಕೌಶಲ್ಯ ತರಬೇತಿ ಕುರಿತಾದ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡುತ್ತಾ ಈ ಭರವಸೆ ನೀಡಿದರು.
ಯಾವುದೇ ಬಂಡವಾಳವಿಲ್ಲದೆ, ಯಾವುದೇ ವಿದ್ಯಾರ್ಹತೆಯ ಅಗತ್ಯವೂ ಇಲ್ಲದೆ ಹೈನುಗಾರಿಕೆ, ಅಣಬೆ ಕೃಷಿ, ಕೃಷಿ ಉತ್ಪನ್ನಗಳ ತಯಾರಿ, ಬೇಕರಿ ಖಾದ್ಯಗಳು, ಅಲಂಕಾರಿಕ ಮೀನು ಸಾಕಾಣೆ ಮೊದಲಾದ ಸ್ವ ಉದ್ಯೋಗಗಳನ್ನು ಮಾಡಲು ಸಾಧ್ಯ ಎಂದು ಅವರು ಮಾಹಿತಿ ನೀಡಿದರು.
ಈ ಸಂದರ್ಭ ಸಂಜನಾ ಪ್ರತಿಕ್ರಿಯಿಸಿ, ‘‘ನಾವಿರುವುದೇ ಬಾಡಿಗೆ ಮನೆಯಲ್ಲಿ. ಆ ಬಾಡಿಗೆ ಹಣವನ್ನೂ ಕೊಡಲು ನಮಗೆ ಕಷ್ಟಸಾಧ್ಯವಾಗುತ್ತಿದೆ. ಮಾತ್ರವಲ್ಲದೆ, ನಮಗೆ ಪ್ರತ್ಯೇಕವಾಗಿ ನಗರದಲ್ಲಿ ಯಾರೂ ಬಾಡಿಗೆ ಮನೆಯನ್ನು ನೀಡಲು ಕೂಡಾ ಹಿಂದೆ ಮುಂದೆ ನೋಡುತ್ತಾರೆ. ಇಂತಹ ವ್ಯವಸ್ಥೆಯಲ್ಲಿ ನಾವು ಈ ರೀತಿಯ ಅಣಬೆ ಕೃಷಿ, ಹೈನುಗಾರಿಕೆಗೆ ಮುಂದಾದರೆ ಜಾಗಕ್ಕೇನು ಮಾಡುವುದು?’’ ಎಂದು ಪ್ರಶ್ನಿಸಿದರು.
ತಕ್ಷಣ ಪ್ರತಿಕ್ರಿಯಿಸಿದ ಡಾ.ಶಿವಾನಂದ ಮಗದ, ‘‘ನೀವು ಮುಂದೆ ಬಂದಲ್ಲಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಉತ್ಪನ್ನಗಳ ತಯಾರಿ ಹಾಗೂ ಉತ್ಪಾದನಾ ಘಟಕಕ್ಕೆ ವ್ಯವಸ್ಥೆ ಮಾಡಿಕೊಡಲಾಗುವುದು. ತರಬೇತಿ ಹಾಗೂ ಉತ್ಪಾದನೆಯ ಸಂದರ್ಭದಲ್ಲಿ ಅಲ್ಲಿ ವಾಸ್ತವ್ಯಕ್ಕೂ ವ್ಯವಸ್ಥೆ ಇದೆ. ಬರೀ ಕೈನಲ್ಲಿ ಬಂದರೂ ಕಚ್ಚಾ ವಸ್ತುಗಳಿಗೆ ಮೂಲಬಂಡವಾಳಕ್ಕೂ ವ್ಯವಸ್ಥೆ ಮಾಡಲಾಗುವುದು. ಬೇಕಿದ್ದಲ್ಲಿ ನಿಮ್ಮದೇ ಆದ ‘ಪರಿವರ್ತನಾ’ ಬ್ರಾಂಡ್ ಹೆಸರಿನಲ್ಲಿಯೇ ನೀವು ಬಯಸುವ ಉತ್ಪನ್ನಗಳನ್ನು ಮಾರುಕಟ್ಟೆ ಮಾಡಬಹುದು’’ ಎಂದು ಸಲಹೆ ನೀಡಿದರು.
ಸವಿರುಚಿಯನ್ನೂ ನಗರವಾಸಿಗಳಿಗೆ ನೀಡಲು ಸಾಧ್ಯ
ಈ ಹಿಂದೆ ರಾಜ್ಯ ಸರಕಾರವು ಮಹಿಳೆಯರಿಗಾಗಿಯೇ ಜಾರಿಗೆ ತಂದಿರುವ ಸವಿರುಚಿ ಕೈತುತ್ತು ಕ್ಯಾಂಟೀನ್ಗೆ ಭಾರೀ ಬೇಡಿಕೆ ಇದೆ. ಶುಚಿತ್ವದೊಂದಿಗೆ ಆಧುನಿಕ ವೈಜ್ಞಾನಿಕ ಕ್ಯಾಂಟೀನ್ ಇದಾಗಿದ್ದು, ಅಡುಗೆಯಲ್ಲಿ ಆಸಕ್ತಿ ಹೊಂದಿರುವ ಲಿಂಗತ್ವ ಅಲ್ಪಸಂಖ್ಯಾತರು ಈ ಯೋಜನೆಯಲ್ಲಿ ತೊಡಗಿಕೊಳ್ಳಲು ಅವಕಾಶ ಕಲ್ಪಿಸಬಹುದು’’ ಎಂದು ಶಿವಾನಂದ ಮಗದ ತಿಳಿಸಿದರು.
ಈಸಂದರ್ಭ ಪ್ರತಿಕ್ರಿಯಿಸಿದ ಲಿಂಗತ್ವ ಅಲ್ಪಸಂಖ್ಯಾತರೊಬ್ಬರು, ‘‘ನಾವೇನೋ ಚೆನ್ನಾಗಿ ಅಡುಗೆ ಮಾಡುತ್ತೇವೆ. ಆದರೆ ನಾವು ಮಾಡಿರುವ ಅಡುಗೆಯನ್ನು ತಿನ್ನುವವರು ಬೇಕಲ್ಲ. ಸಮಾಜ ಇನ್ನೂ ನಮ್ಮನ್ನು ಸ್ವೀಕರಿಸದಿರುವಾಗ, ನಮ್ಮ ಅಡುಗೆಯನ್ನು ಸ್ವೀಕರಿಸದಿದ್ದರೆ ಏನು ಪ್ರಯೋಜನ’’ ಎಂದು ಬೇಸರಿಸಿದರು.
ಸರಕಾರಿ ಪ್ರಾಯೋಜಿತ ಕಾರ್ಯಕ್ರಮಗಳಿಗೆ ಪರಿವರ್ತನಾ ಟ್ರಸ್ಟ್ನಡಿ ಲಿಂಗತ್ವ ಅಲ್ಪಸಂಖ್ಯಾತರು ತಯಾರಿಸುವ ಊಟ-ತಿಂಡಿ, ಟಿಫನ್ಗೆ ಅವಕಾಶ ಕಲ್ಪಿಸುವ ಮೂಲಕ ಹೊಸ ಅವಕಾಶಕ್ಕೆ ನಾಂದಿ ಹಾಡಬಹುದಾಗಿದೆ. ಪರಿವರ್ತನೆ ಸಮಾಜವೂ ಆಗಬೇಕಾಗಿದೆ. ಹಾಗಾಗಿ ಸರಕಾರಿ ವ್ಯವಸ್ಥೆಯ ಮೂಲಕವೇ ಪರಿವರ್ತನೆ ಆರಂಭಿಸೋಣ ಎಂದು ಜಿಲ್ಲಾ ಪಂಚಾಯತ್ನ ಯೋಜನಾಧಿಕಾರಿ ಲೋಕೇಶ್ ಸಲಹೆ ನೀಡಿದರು.
ಕಾರ್ಯಾಗಾರದಲ್ಲಿ ರುಡ್ಸೆಟ್ನ ನಿರ್ದೇಶಕರಾದ ಜೇಮ್ಸ್ ಡಿಸೋಜ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಫ್ರಾನ್ಸಿಸ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಸುಂದರ ಪೂಜಾರಿ, ಕೆಜಿಟಿಟಿಐನ ಸಿಬ್ಬಂದಿಯಾದ ಮೇಘಾ ಮತ್ತು ಪ್ರಿಯಾ ತಮ್ಮ ಇಲಾಖೆಗಳಲ್ಲಿನ ವಿವಿಧ ಸ್ವ ಉದ್ಯೋಗ ಯೋಜನೆಗಳ ಕುರಿತಂತೆ ಮಾಹಿತಿ ನೀಡಿದರು.
‘ನಮ್ಮನ್ನು ನಿಮ್ಮಂತೆಯೇ ಕಾಣಿರಿ’!
‘‘ಸಮಾಜದಲ್ಲಿ ಸಾಕಷ್ಟು ಬದಲಾವಣೆ ಆಗಿದೆ ಎನ್ನಲಾಗುತ್ತದೆ. ಸಮಾಜ ನಮ್ಮನ್ನು ನೋಡುವ ದೃಷ್ಟಿ ಬದಲಾಗಿದೆ, ನಾವು ಸಮಾಜದ ಮುಖ್ಯವಾಹಿನಿಗೆ ಬರಬೇಕು ಅನ್ನಲಾಗುತ್ತದೆ. ನಾನೂ ಬ್ಯೂಟಿಶಿಯನ್ ಕೆಲಸ ಕಲಿತು ಬ್ಯೂಟಿಶಿಯನ್ ಆಗಿ ದುಡಿಯುತ್ತಿದ್ದೇನೆ. ಆದರೆ ಕೆಲ ದಿನಗಳ ಹಿಂದೆ ರಾತ್ರಿ ಹೊತ್ತು ನನ್ನ ಸ್ನೇಹಿತೆಯರ ಜತೆ ಇದ್ದ ಸಂದರ್ಭ ಪೊಲೀಸರು ನನಗೆ ವಿನಾ ಕಾರಣ ಬೆತ್ತಲುಗೊಳಿಸಿ ಕೆಟ್ಟ ಮಾತುಗಳನ್ನು ಹೇಳಿ ಥಳಿಸಿದ್ದಾರೆ’’ ಎಂದು ಕಾರ್ಯಾಗಾರದಲ್ಲಿ ಲಿಂಗತ್ವ ಅಲ್ಪಸಂಖ್ಯಾತರೊಬ್ಬರು ಕೆಲ ದಿನಗಳ ಹಿಂದೆ ತಮಗಾದ ಅನ್ಯಾಯವನ್ನು ಬಹಿರಂಗವಾಗಿಯೇ ತೋಡಿಕೊಂಡರು.
‘‘ನಾವು ನಿಮ್ಮ ಜತೆ ಬದುಕಲು ಬಯಸುತ್ತೇವೆ. ಹಾಗಿದ್ದರೂ ನಮ್ಮನ್ನು ಮಂಗಳಮುಖಿಯರು ಎಂದು ಪ್ರತ್ಯೇಕಿಸಲಾಗುತ್ತದೆ. ನಾವು ಹೆಣ್ಣುಗಳ ಹಾಗೆ ಕಾಣಿಸುವುದಿಲ್ಲವೇ? ನನ್ನ ಮೇಲಾದ ಹಲ್ಲೆ ಹೆಣ್ಣೊಬ್ಬಳ ಮೇಲೆ ಆಗಿದ್ದರೆ ಸಮಾಜದಲ್ಲಿ ಏನಾಗುತ್ತಿತ್ತು. ನಮಗೆ ಯಾಕೆ ಈ ಪ್ರತ್ಯೇಕತೆ. ನಮ್ಮನ್ನೂ ನಿಮ್ಮವರಾಗಿ ಕಾಣಿ, ನಿಮ್ಮಂತೆ ಬದುಕಲು ಅವಕಾಶ ಕೊಡಿ’’ ಎಂದು ಅವರು ಬೇಡಿಕೊಂಡರು.
ಪರಿವರ್ತನಾ ಟ್ರಸ್ಟ್ನ ಮುಖ್ಯಸ್ಥ ವೈಲೆಟ್ ಪಿರೇರ ಹಾಗೂ ಸುಮಾರು 20ಕ್ಕೂ ಅಧಿಕ ಲಿಂಗತ್ವ ಅಲ್ಪಸಂಖ್ಯಾತರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ದಯಾನಂದ ಕಾರ್ಯಕ್ರಮ ನಿರೂಪಿಸಿದರು.