ಕೋಮು ಧ್ವೇಷ ಭಾವನೆಯಿಂದ ಯಾವುದೇ ಸಮುದಾಯಕ್ಕೂ ಒಳಿತಾಗದು-ಹರೀಶ್ ಕುಮಾರ್

ಪುತ್ತೂರು, ಜೂ. 6: ಕೋಮು ಧ್ವೇಷ ಭಾವನೆಗಳಿಂದ ಯಾವುದೆ ಸಮುದಾಯಕ್ಕೂ ಒಳಿತಾಗದು. ಬಿಜೆಪಿ ರಾಜಕೀಯ ಉದ್ದೇಶಕ್ಕಾಗಿ ಕೋಮು ಧ್ವೇಷ ಭಾವನೆಯನ್ನು ಬಿತ್ತುತ್ತಾ ಹಿಂದುತ್ವದ ಹೆಸರಿನಲ್ಲಿ ಮನೆ ಮನೆಗೆ ತೆರಳಿ ಸುಳ್ಳು ಮತ್ತು ಅಪಪ್ರಚಾರ ನಡೆಸಿ ಗೆಲುವು ಪಡೆದುಕೊಂಡಿದ್ದರೆ. ಇದರ ಮುಂದೆ ಸಿದ್ಧರಾಮಯ್ಯ ಸರಕಾರ ನಡೆಸಿದ ಅಭಿವೃದ್ಧಿ ಕಾರ್ಯಗಳು ಕೂಡ ಕೊಚ್ಚಿಕೊಂಡು ಹೋಗಿವೆ ಎಂದು ನೂತನ ವಿಧಾನ ಪರಿಷತ್ ಸದಸ್ಯರಾಗಿರುವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್ ಹೇಳಿದರು.
ಅವರು ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಪುತ್ತೂರು ಬ್ಲಾಕ್ ಮತ್ತು ವಿಟ್ಲ - ಉಪ್ಪಿನಂಗಡಿ ಬ್ಲಾಕ್ಗಳು ನೀಡಿದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು. ಹಿಂದುತ್ವದ ಹೆಸರಿನಲ್ಲಿ ಬಿಜೆಪಿ ನಡೆಸುತ್ತಿರುವ ಸುಳ್ಳು ಅಭಿಯಾನ ಮತ್ತು ಅಪಪ್ರಚಾರ ತಂತ್ರಕ್ಕೆ ಪ್ರತಿತಂತ್ರ ರೂಪಿಸದಿದ್ದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜಿಲ್ಲೆಯಲ್ಲಿ ಭವಿಷ್ಯವಿಲ್ಲ ಎಂದ ಅವರು ದಕ್ಷಿಣಕನ್ನಡ ಜಿಲ್ಲೆಯಲ್ಲಿದ್ದ 7 ಕಾಂಗ್ರೆಸ್ ಶಾಸಕರು ಹತ್ತು ಸಾವಿರ ಕೋಟಿ ರೂ.ಗಳ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಇದನ್ನೆಲ್ಲ ನೋಡಿ ಜನ ಮತ ನೀಡುತ್ತಾರೆ ಎಂದು ಭಾವಿಸಿದೆವು. ಬಿಜೆಪಿ ಹರಿಯ ಬಿಟ್ಟ ಧಾರ್ಮಿಕ ಭಾವನೆಗಳ ಅಪಪ್ರಚಾರದ ಮುಂದೆ ನಮ್ಮ ಅಭಿವೃದ್ಧಿ ಮಂತ್ರ ಕೆಲಸ ಮಾಡಿಲ್ಲ ಎಂದರು.
ಇಂದಿರಾ ಗಾಂಧಿ ಕಾಲದ ಪ್ರಚಾರ ತಂತ್ರವನ್ನೇ ಈಗಲೂ ಅನುಸರಿಸುತ್ತೇವೆ. ಕಾಂಗ್ರೆಸ್ನ ಜನಪರ ನೀತಿಯಿಂದಾಗಿ ಹಿಂದುಳಿದವರು, ಪರಿಶಿಷ್ಟ ಸಮುದಾಯ ಮತ್ತು ಅಲ್ಪಸಂಖ್ಯಾತರು ಕಾಂಗ್ರೆಸ್ಗೆ ನಿರಂತರ ಮತ ನೀಡುತ್ತಿದ್ದರು. ಇದರಿಂದ 40 ಶೇಕಡಾ ಮತಗಳು ನಮಗೆ ಕಟ್ಟಿಟ್ಟ ಬುತ್ತಿಯಂತೆ ಡೆಪಾಸಿಟ್ ಆಗಿದ್ದವು. ಆಗ ಕೇವಲ ಮನೆ ಮನೆಗೆ ಹೋಗಿ ಚೀಟಿ ಮುಟ್ಟಿಸಿ ಬಿಟ್ಟರೆ ನಮ್ಮ ಕೆಲಸ ಆಗುತ್ತಿತ್ತು. ಕಾಂಗ್ರೆಸಿಗರು ಮನೆಗೆ ಬಂದಿದ್ದಾರೆ ಎಂದರೆ ಸಾಕಾಗುತ್ತಿತ್ತು. ದುರದೃಷ್ಟವಶಾತ್ ಈಗಲೂ ನಾವು ಅದೇ ಕಾರ್ಯತಂತ್ರ ಹೊಂದಿದ್ದೇವೆ. ಈಗ ಚೀಟಿಯನ್ನೂ ಆಯೋಗವೇ ಮುಟ್ಟಿಸುವ ಕಾರಣ ಆ ಕೆಲಸವೂ ನಮಗಿಲ್ಲ. ಆದರೆ ಬಿಜೆಪಿಯವರು ಪೇಜ್ ಪ್ರಮುಖ್, ವಿಸ್ತಾರಕ್ ಮುಂತಾದ ರೂಪದಲ್ಲಿ ನಡೆಸಿದ ಅಭಿಯಾನದ ಮುಂದೆ ನಮ್ಮ ಪ್ರಚಾರ ಏನೂ ಸಾಲದು ಎಂದು ಹೇಳಿದರು.
ಮತಯಂತ್ರಗಳ ಬಗ್ಗೆಯೂ ನಮಗೆ ಬಲವಾದ ಸಂಶಯವಿದ್ದು, ಕೆಪಿಸಿಸಿ ನೇತೃತ್ವದಲ್ಲಿ ಈಗಾಗಲೇ ಬೆಂಗಳೂರಿನಲ್ಲಿ ಸತತ 5 ದಿನಗಳ ಕಾಲ ಕಾನೂನು ತಜ್ಞರು ಮತ್ತು ತಾಂತ್ರಿಕ ತಜ್ಞರ ಜತೆ ಸಮಾಲೋಚನೆ ನಡೆಸಲಾಗಿದೆ. ತಾಂತ್ರಿಕ ಪರಿಣತರು ಮತಯಂತ್ರ ತಿರುಚಲು ಅಥವಾ ದೋಚಲು ಸಾಧ್ಯವಿದೆ ಎನ್ನುತ್ತಾರೆ. ಇದರ ವಿರುದ್ಧ ಹೇಗೆ ಮುಂದುವರಿಯಬಹುದು ಎಂಬ ಕುರಿತು ಯೋಚಿಸಲಾಗಿದ್ದು, ಈಗಾಗಲೇ ಮಂಗಳೂರಿನ ಜೆ.ಆರ್. ಲೊಬೋ ಅವರು ಈ ಬಗ್ಗೆ ಕೋರ್ಟ್ ಮೆಟ್ಟಿಲು ಹತ್ತಿದ್ದಾರೆ. ಆದರೆ ಚುನಾವಣಾ ಆಯೋಗ ಮತಯಂತ್ರದ ವಿರುದ್ಧ ಮಾತನಾಡಬಾರದು ಎಂದು ಧೈರ್ಯ ಕುಂದಿಸುವ ಕೆಲಸ ಮಾಡುತ್ತಿದೆ ಎಂದರು. ಹರೀಶ್ ಕುಮಾರ್ ಅವರನ್ನು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಸನ್ಮಾನಿಸಿ, ಅಭಿನಂದಿಸಿದರು.
ವಿಟ್ಲ ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷ ಮುರಳೀಧರ ರೈ, ನಗರ ಕಾಂಗ್ರೆಸ್ ಅಧ್ಯಕ್ಷ ಸೂತ್ರ ಬೆಟ್ಟು ಜಗನ್ನಾಥ ರೈ, ಸುಳ್ಯದ ಕಾಂಗ್ರೆಸ್ ನಾಯಕ ಡಾ. ಬಿ. ರಘು, ಪಕ್ಷದ ಮುಖಂಡರಾದ ಭರತ್ ಮುಂಡೋಡಿ, ವೇದನಾಥ ಸುವರ್ಣ, ಉಲ್ಲಾಸ್ ಕೋಟ್ಯಾನ್, ಜೋಕಿಂ ಡಿಸೋಜ, ಹಾಜಿ ಯಾಕೂಬ್ ದರ್ಬೆ, ವಿಶಾಲಾಕ್ಷಿ ಬನ್ನೂರು, ವಾಣಿ ಶ್ರೀಧರ್, ಚಂದ್ರಕಲಾ ಮುಕ್ವೆ, ನಿರ್ಮಲ್ ಕುಮಾರ್ ಜೈನ್, ಯು.ಟಿ. ತೌಸಿಫ್. ಕೃಷ್ಣ ಪ್ರಸಾದ್ ಆಳ್ವಾ, ಎಂ.ಬಿ. ವಿಶ್ವನಾಥ ರೈ, ಪ್ರಸಾದ್ ಕೌಶಲ್ ಶೆಟ್ಟಿ, ನಜೀರ್ ಮಠ, ಜಗನ್ನಾಥ ರೈ, ದುರ್ಗಾಪ್ರಸಾದ್ ರೈ ಕುಂಬ್ರ, ಅಶೋಕ್ ಸಂಪ್ಯ, ದಿಲೀಪ್ ಮೊಟ್ಟೆತ್ತಡ್ಕ, ಇಸಾಕ್ ಸಾಲ್ಮರ, ನೂರುದ್ದೀನ್ ಸಾಲ್ಮರ, ರೇಖಾ ಯಶೋಧರ್, ಮತ್ತಿತರರು ಉಪಸ್ಥಿತರಿದ್ದರು.
ಪುತ್ತೂರು ಬ್ಲಾಕ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು.