ಮದರಸ ಪಠ್ಯಪುಸ್ತಕ ವಿಚಾರ: ತಂಡಗಳ ಮಧ್ಯೆ ಹಲ್ಲೆ
ಬೆಳ್ತಂಗಡಿ, ಜೂ. 6: ಮದರಸದಲ್ಲಿನ ಪಠ್ಯಪುಸ್ತಕದ ಸಿಲೆಬಸ್ ವಿಚಾರವಾಗಿ ತಂಡಗಳೆರಡು ಹೊಡೆದಾಡಿಕೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಪಡ್ಡಂದಡ್ಕ ಮಸೀದಿ ಬಳಿ ಮಂಗಳವಾರ ರಾತ್ರಿ ಸಂಭವಿಸಿದೆ.
ಘಟನೆಯಲ್ಲಿ ಆರಿಫ್, ಮುಝಾಮಿಲ್ ಹಾಗೂ ಶಬೀರ್ ಹಲ್ಲೆಗೊಳಗಾಗಿದ್ದು, ಆರೀಫ್ ನೀಡಿದ ದೂರಿನಂತೆ ಯುಕೆ ಮಹಮ್ಮದ್, ಬಶೀರ್ ಗಾಂಧಿನಗರ, ಶರೀಫ್ ಗಾಂಧಿನಗರ, ಅಶ್ರಫ್ ಗಾಂಧಿನಗರ, ರಹೀಂ ಪೆರಾಡಿ ಹಾಗೂ ಶಬೀರ್ ವಿರುದ್ಧ ಕೇಸು ದಾಖಲಾಗಿದೆ. ಪಠ್ಯಪುಸ್ತಕದ ಸಿಲೆಬಸ್ ವಿಚಾರವಾಗಿ ಆರೋಪಿಗಳು ಮಾತಿಗೆ ಮಾತು ಬೆಳೆಸಿ ಹಲ್ಲೆ ನಡೆಸಿರುವುದಾಗಿ ದೂರಲಾಗಿದೆ.
ಇದೇ ಘಟನೆಗೆ ಸಂಬಂಧಿಸಿದಂತೆ ಇನ್ನೊಂದು ದೂರು ದಾಖಲಾಗಿದ್ದು, ರಿಝ್ವಾನ್, ಮಹಮ್ಮದ್ ಶರೀಫ್, ಮಹಮ್ಮದ್ ಇರ್ಫಾನ್ ಮಜೀದ್ ಎಂಬವರು ಆಸ್ಪತ್ರೆಗೆ ದಾಖಲಾಗಿದ್ದು ಪಿ.ಎಸ್. ಶರೀಫ್, ಅಝೀದ್, ಆರಿಫ್, ಮಹಮ್ಮದ್ ಮುಝಾಮಿಲ್, ಸುರಾಕತ್, ನಿಶಾರ್ ಅಹಮ್ಮದ್ ಹಾಗೂ ಜಮಾಲ್ ಹಲ್ಲೆ ನಡೆಸಿರುವುದಾಗಿ ವೇಣೂರು ಪೊಲೀಸರಿಗೆ ದೂರು ನೀಡಲಾಗಿದೆ.
ಇಲ್ಲಿನ ಮಸೀದಿಯಲ್ಲಿ ಎಸ್ಕೆಎಸ್ಎಸ್ಎಫ್ ಮತ್ತು ಎಸ್ಎಸ್ಎಫ್ ತಂಡಗಳ ನಡುವೆ ಮದರಸದ ಪಠ್ಯಪುಸ್ತಕದ ಸಿಲೆಬಸ್ ವಿಚಾರಲ್ಲಿ ಈ ಹಿಂದಿನಿಂದಲೂ ವೈಷಮ್ಯ ಇತ್ತು ಎನ್ನಲಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳವಾರ ರಾತ್ರಿ 10 ಗಂಟೆಯ ಸುಮಾರಿಗೆ ಈ ತಂಡಗಳ ನಡುವೆ ಮಾತಿಗೆ ಮಾತು ಬೆಳೆದಿದ್ದು ಅದರ ಮುಂದುವರಿದ ಭಾಗವಾಗಿ ಮಸೀದಿ ಹೊರಭಾಗದಲ್ಲಿ ಹೊಡೆದಾಡಿಕೊಂಡಿದ್ದಾರೆ. ಎರಡೂ ತಂಡಕ್ಕೆ ಸೇರಿದವರು ಬೆಳ್ತಂಗಡಿ ಹಾಗೂ ಮೂಡಬಿದ್ರೆ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ದೂರು ಸ್ವೀಕರಿಸಿಕೊಂಡಿರುವ ವೇಣೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡುಸ ತನಿಖೆ ನಡೆಸುತ್ತಿದ್ದಾರೆ.