ಯುನಿವೆಫ್ ಕರ್ನಾಟಕ ದಿಂದ ಇಫ್ತಾರ್ ಕೂಟ, ಸ್ನೇಹ ಮಿಲನ

ಮಂಗಳೂರು, ಜೂ. 7: ಸಾರ್ವತ್ರಿಕ ಸಹೋದರತ್ವದ ಭಾವನೆಗಳು ನಮ್ಮನ್ನು ಸಮಾಜದಲ್ಲಿ ಏಕರೂಪಿಯಾಗಿ ಬೆಸೆಯುತ್ತವೆ. ನಮ್ಮದು ಸುರಕ್ಷಿತ ವಾತಾವರಣ. ಆದರೆ ಕಾಲ್ಪನಿಕ ಭಯದ ಮನೋಸ್ಥಿತಿ ನಿವಾರಣೆಯಾಗಬೇಕು. ಇಂಥ ಕಾರ್ಯಕ್ರಮಗಳು ಈ ಜಾಗೃತಿಗೆ ಸ್ಪೂರ್ತಿಯಾಗುತ್ತವೆ ಎಂದು ಉದಯವಾಣಿ ಸುದ್ದಿ ವಿಭಾಗದ ಮುಖ್ಯಸ್ಥ ಮನೋಹರ್ ಪ್ರಸಾದ್ ಹೇಳಿದರು.
ಯುನಿವೆಫ್ ಕರ್ನಾಟಕ ಮಂಗಳೂರು ಶಾಖೆಯಿಂದ ಕಂಕನಾಡಿಯ ಜಮೀಯತುಲ್ ಫಲಾಹ್ ಹಾಲ್ ನಲ್ಲಿ ಆಯೋಜಿಸಲಾದ ಇಫ್ತಾರ್ ಕೂಟ ಮತ್ತು ಸ್ನೇಹ ಮಿಲನಲ್ಲಿ ಸಹಿಷ್ಣುತೆ ಮತ್ತು ನಮ್ಮ ಪರಿಸರ ಎಂಬ ವಿಷಯದಲ್ಲಿ ನಡೆದ ಚರ್ಚಾ ಕೂಟದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.
ಈ ಚರ್ಚಾ ಕೂಟದಲ್ಲಿ ಸಿಎಸ್ಐ ಹೆಬಿಕ್ ಮೆಮೋರಿಯಲ್ ಚರ್ಚ್ನ ಸಭಾಪಾಲಕ ರೆ. ಗೋಲ್ಡಿನ್ ಜೆ. ಬಂಗೇರ, ವಿಜಯಕರ್ನಾಟಕ ಇದರ ಮುಖ್ಯ ವರದಿಗಾರ ಮುಹಮ್ಮದ್ ಆರಿಫ್, ವಿ4ನ್ಯೂಸ್ ಕಾರ್ಯಕ್ರಮ ಮುಖ್ಯಸ್ಥ ಮೈಮ್ ರಾಮದಾಸ್ ಹಾಗೂ ನವಮಂಗಳೂರು ಬಂದರು ಮಂಡಳಿಯ ನಿವೃತ್ತ ಉಪನಿರ್ದೇಶಕ ಖಾಲಿದ್ ತಣ್ಣೀರುಭಾವಿ ಭಾಗವಹಿಸಿ ಮಾತನಾಡಿದರು.
ಅಧ್ಯಕ್ಷ ಸ್ಥಾನವನ್ನು ವಹಿಸಿ ಚರ್ಚಾ ಕೂಟವನ್ನು ನಿರೂಪಿಸಿದ ಯುನಿವಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಅವರು ದೇಶದಲ್ಲಿ ಸಹಿಷ್ಣುತೆಯು ತನ್ನ ಕೊನೆಯ ಹಂತಕ್ಕೆ ತಲುಪಿದ್ದು ಶಿಷ್ಟರ ಮೌನ ಈ ದೇಶವನ್ನು ಗಂಡಾಂತರದ ಹಂತಕ್ಕೆ ಕೊಂಡೊಯ್ಯುತ್ತಿದೆ ಎಂದು ಹೇಳಿದರು.
ಯುನಿವೆಫ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಯು.ಕೆ. ಖಾಲಿದ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ರಾಹಿಲ್ ರಝಾಕ್ ಸಯೀದ್ ಕಿರ್ಅತ್ ಪಠಿಸಿದರು. ಜಿಲ್ಲಾಧ್ಯಕ್ಷ ಸೈದುದ್ದೀನ್ ಕುದ್ರೋಳಿ ಕಾರ್ಯಕ್ರಮ ನಿರೂಪಿಸಿದರು.