ನೀಲಗುಳಿ ಪದ್ಮನಾಭರನ್ನು ವಶಕ್ಕೆ ಪಡೆದ ಕುಂದಾಪುರ ಪೊಲೀಸರು

ಉಡುಪಿ, ಜೂ.7: ಕುಂದಾಪುರ ತಾಲೂಕು ವ್ಯಾಪ್ತಿಯ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ 2004 ಮತ್ತು 2005ರಲ್ಲಿ ದಾಖಲಾದ ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯದ ವಿಚಾರಣೆಗೆ ಹಾಜರಾಗದ ಶಂಕಿತ ನಕ್ಸಲ್ ನೀಲಗುಳಿ ಪದ್ಮನಾಭರನ್ನು ಕುಂದಾಪುರದ ಜೆಎಂಎಫ್ಸಿ ನ್ಯಾಯಾಲಯ ಹೊರಡಿಸಿದ ದಸ್ತಗಿರಿ ವಾರಂಟ್ನಂತೆ ಕುಂದಾಪುರ ಪೊಲೀಸರು ಇಂದು ಉಡುಪಿಯಲ್ಲಿ ವಶಕ್ಕೆ ಪಡೆದು ಕುಂದಾಪುರ ನ್ಯಾಯಾಲಯ ಎದುರು ಹಾಜರು ಪಡಿಸಿದರು.
ಉಡುಪಿ ನ್ಯಾಯಾಲಯದಲ್ಲಿ ಕಳೆದ ನಾಲ್ಕು ದಿನಗಳಿಂದ ನಡೆದಿರುವ ನಕ್ಸಲರಿಂದ ಹತ್ಯೆಗೀಡಾದ ಹೆಬ್ರಿ ಭೋಜ ಶೆಟ್ಟಿ ಪ್ರಕರಣದ ವಿಚಾರಣೆಯ ಕೊನೆಯ ದಿನ ಕಲಾಪ ಮುಗಿಸಿ ನ್ಯಾಯಾಲಯದಿಂದ ಹೊರಬರುತಿದ್ದಂತೆ ಕುಂದಾಪುರ ಪೊಲೀಸರು ನೀಲಗುಳಿ ಪದ್ಮನಾಭರನ್ನು ವಶಕ್ಕೆ ಪಡೆದುಕೊಂಡರು.
2004ರ ಸೆ.30ರಂದು ಕುಂದಾಪುರ ತಾಲೂಕು ಅಮಾಸೆಬೈಲ್ ಪೊಲೀಸ್ ಠಾಣಾ ವ್ಯಾಪ್ತಿಯ ಮಡಾಮಕ್ಕಿ ಗ್ರಾಮದ ಹಂಜಾ ಎಂಬಲ್ಲಿ ಅರಣ್ಯ ಇಲಾಖೆಯ ಕಾಂಕ್ರೀಟ್ ಸೇತುವೆಯನ್ನು ನೀಲಗುಳಿ ಪದ್ಮನಾಭ ಸೇರಿದಂತೆ ಆರು ಮಂದಿ ಶಸ್ತ್ರಸಜ್ಜಿತ ನಕ್ಸಲೀಯರು ಜಖಂ ಗೊಳಿಸಿದ್ದರೆಂದು ಆರೋಪಿಸಿ ಪ್ರಕರಣ ದಾಖಲಾಗಿತ್ತು.
2005ರ ಜೂ.24ರಂದು ದಾಖಲಾದ ಇನ್ನೊಂದು ಪ್ರಕರಣದಲ್ಲಿ ಆಮಾಸೆಬೈಲ್ ಠಾಣಾ ವ್ಯಾಪ್ತಿಯ ಮಡಾಮಕ್ಕಿ ಗ್ರಾಮದ ಬಳ್ಳಿಮನೆ ಎಂಬಲ್ಲಿ ಅರಣ್ಯ ಇಲಾಖೆಗೆ ಸೇರಿದ ಎರಡು ಕಿರು ಸೇತುವೆಗಳನ್ನು ನೀಲಗುಳಿ ಪದ್ಮನಾಭ ಸೇರಿದಂತೆ ಒಟ್ಟು ಐದು ಮಂದಿ ಶಸ್ತ್ರಸಜ್ಜಿತ ನಕ್ಸಲೀಯರು ಹಾಳುಗೆಡ್ಡವಿದ್ದರು ಎಂದು ಆರೋಪಿಸಲಾಗಿತ್ತು.
ಈ ಎರಡು ಘಟನೆಗಳಿಗೆ ಸಂಬಂಧಿಸಿದಂತೆ ದಾಖಲಾಗಿದ್ದ ಪ್ರಕರಣಗಳ ನ್ಯಾಯಾಲಯದ ವಿಚಾರಣೆಗೆ ಹಾಜರಾಗದ ಕಾರಣ ನೀಲಗುಳಿ ಪದ್ಮನಾಭ ವಿರುದ್ಧ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಹೊರಡಿಸಿದ್ದು, ಇಂದು ಉಡುಪಿಯಲ್ಲಿ ಪೊಲೀಸರನ್ನು ಅವರನ್ನು ವಶಪಡೆದು ಕುಂದಾಪುರದ ಜೆಎಂಎಫ್ಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸಿದರು.
ನ್ಯಾಯಾಲಯ ನೀಲಗುಳಿ ಪದ್ಮನಾಭ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಬಳಿಕ ಅವರನ್ನು ಬಂದೋಬಸ್ತ್ನಲ್ಲಿ ಕಾರವಾರ ಜೈಲಿಗೆ ಕಳುಹಿಸಲಾಯಿತು.