ಪೆರ್ಡೂರು ಹುಸೈನಬ್ಬ ಸಾವು ಪ್ರಕರಣ: ಎಸ್ಐ, ಜೀಪು ಚಾಲಕ ಜಾಮೀನು ಕೋರಿ ಅರ್ಜಿ
ಉಡುಪಿ, ಜೂ.7: ಪೆರ್ಡೂರು ಗ್ರಾಮದ ಶೇನರಬೆಟ್ಟು ಬಳಿ ನಡೆದ ಮಂಗಳೂರು ಜೋಕಟ್ಟೆಯ ದನದ ವ್ಯಾಪಾರಿ ಹುಸೇನಬ್ಬ (62) ಸಂಶಯಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಇದೀಗ ಕಾರವಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಹಿರಿಯಡ್ಕ ಪೊಲೀಸ್ ಠಾಣೆಯ ಎಸ್ಐ ಹಾಗೂ ಜೀಪು ಚಾಲಕ ಗುರುವಾರ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಹಿರಿಯಡ್ಕ ಠಾಣೆಯ ಎಸ್ಐ ಡಿ.ಎನ್. ಕುಮಾರ್, ಜೀಪು ಚಾಲಕ ಗೋಪಾಲ್ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದು, ಆರೋಪಿ ಪರ ಕ್ರಮವಾಗಿ ಹಿರಿಯ ವಕೀಲ ಶಾಂತರಾಮ್ ಶೆಟ್ಟಿ, ಎ. ಸಂಜೀವ್ ಅರ್ಜಿ ಸಲ್ಲಿಸಿದ್ದಾರೆ. ಈ ಬಗ್ಗೆ ಜೂ. 11ಕ್ಕೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ನೀಡಿ ಕೋರ್ಟ್ ಆದೇಶ ನೀಡಿದೆ.
ಪ್ರಕರಣದ ಆರೋಪಿ ಪೊಲೀಸ್ ಹೆಡ್ಕಾನ್ಸ್ಟೇಬಲ್ ಮೋಹನ್ ಕೊತ್ವಾಲ್ ಜೂ.4ರಂದು ಉಡುಪಿ ಹೆಚ್ಚುವರಿ ಸಿವಿಲ್ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದು, ಕೋರ್ಟ್ ಬುಧವಾರ ಅರ್ಜಿಯನ್ನು ತಿರಸ್ಕರಿಸಿ ಆದೇಶ ನೀಡಿದೆ.
ಎಸ್ಐ ಡಿ.ಎನ್.ಕುಮಾರ್ ಹಾಗೂ ಜೀಪು ಚಾಲಕ ಗೋಪಾಲ ಜೂ. 5ರಂದು ಜಾಮೀನು ಕೋರಿ ಅರ್ಜಿ ಸಲ್ಲಿಕೆ ಮಾಡಿದ್ದು, ಆಕ್ಷೇಪಣೆ ಸಲ್ಲಿಕೆಗೆ ಜೂ. 8ರಂದು ದಿನ ನಿಗದಿಯಾಗಿದೆ. ಈ ಮಧ್ಯೆ ಇಬ್ಬರೂ ಮತ್ತೆ ಜಿಲ್ಲಾ ನ್ಯಾಯಾಲಯಕ್ಕೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.







