ಬೆಂಗಳೂರು: ಹಾಸ್ಟೆಲ್ ಕೊಠಡಿಯಲ್ಲಿ ಬಾಲಕಿ ನಿಗೂಢ ಮೃತ್ಯು
ಬೆಂಗಳೂರು, ಜೂ. 8: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸರ್ಜಾಪುರದಲ್ಲಿರುವ ಹಾಸ್ಟೆಲ್ನಲ್ಲಿ ಐದನೇ ತರಗತಿ ವಿದ್ಯಾರ್ಥಿನಿಯೊಬ್ಬಳು ನಿಗೂಢವಾಗಿ ಸಾವಿಗೀಡಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ಮಡಿವಾಳದ ದೊಡ್ಡತಿಮ್ಮಸಂದ್ರದ ನಿವಾಸಿ ಆರ್ ವೈಶಾಲಿ (13) ಸಾವಿಗೀಡಾಗಿರುವ ವಿದ್ಯಾರ್ಥಿನಿ. ಆದರೆ ಈಕೆಯ ಮೈಮೇಲೆ ಯಾವುದೇ ಗಾಯದ ಗುರುತುಗಳಿಲ್ಲ ಅಥವಾ ಕೊಠಡಿಯಲ್ಲಿ ಯಾವುದೇ ಅನಪೇಕ್ಷಿತ ಘಟನೆಗಳು ನಡೆದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಅತ್ತಿಬೆಲೆ ರಸ್ತೆಯ ಅಂತಾರಾಷ್ಟ್ರೀಯ ಶಾಲೆ ನಡೆಸುವ ಸಮುದಾಯ ಶಾಲೆಯಲ್ಲಿ ಈಕೆ ಓದುತ್ತಿದ್ದು, ಶಾಲೆಯ ಆಡಳಿತ ಮಂಡಳಿ 10 ಮಕ್ಕಳನ್ನು ಉಚಿತ ಶಿಕ್ಷಣಕ್ಕಾಗಿ ಆಯ್ಕೆ ಮಾಡಿತ್ತು.
ಮಡಿವಾಳದಲ್ಲಿ ಹೂ ಮಾರಾಟ ಮಾಡಿ ಜೀವನ ಸಾಗಿಸುವ ತಾಯಿ ಆರ್.ಸುಗುಣ ತಮ್ಮ ಮಗಳನ್ನು 2010ರಲ್ಲಿ ಶಾಲೆಗೆ ಸೇರಿಸಿದ್ದರು. ದಿನಗೂಲಿಯಾಗಿದ್ದ ಸುಗುಣಳ ಪತಿ ರಾಜೇಂದ್ರ 2009ರಲ್ಲಿ ಪತ್ನಿಯನ್ನು ಬಿಟ್ಟಿದ್ದ. ತಾಯಿಗೆ ಮಗಳನ್ನು ಖಾಸಗಿ ಶಾಲೆಗೆ ಕಳುಹಿಸುವುದು ಅಸಾಧ್ಯವಾದ ಕಾರಣ ಸಮುದಾಯ ಶಾಲೆಯ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಮಾಡಿಕೊಂಡಿದ್ದರು. ಇದರ ಅನ್ವಯ ವೈಶಾಲಿಯನ್ನು ಉಚಿತ ಶಿಕ್ಷಣಕ್ಕೆ ಆಯ್ಕೆ ಮಾಡಲಾಗಿತ್ತು.
ವೈಶಾಲಿಯ ಮೃತದೇಹ ಆಕೆಯ ಬಂಕರ್ನಲ್ಲಿ ಗುರುವಾರ ಮುಂಜಾನೆ ಪತ್ತೆಯಾಗಿದೆ. ಕೆಲ ದಿನಗಳಿಂದ ಅಸ್ವಸ್ಥಳಾಗಿದ್ದ ಆಕೆಗೆ ಚಿಕಿತ್ಸೆ ನೀಡಲಾಗುತ್ತಿತ್ತು ಎಂದು ಶಾಲೆಯ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ. ಆಕೆಯ ತುಟಿ ಹಾಗೂ ಗಲ್ಲದಲ್ಲಿ ರಕ್ತದ ಕಲೆಗಳಿದ್ದು, ಆಕೆ ರಕ್ತ ವಾಂತಿ ಮಾಡಿಕೊಂಡಿರುವ ಸಾಧ್ಯತೆ ಇದೆ. ಅಟಾಪ್ಸಿ ವರದಿ ಬಂದ ಬಳಿಕ ಸ್ಪಷ್ಟತೆ ದೊರೆಯಲಿದೆ ಎಂದು ಪೊಲೀಸರು ವಿವರಿಸಿದ್ದಾರೆ.