ಭಾರೀ ಮಳೆ: ಇಡಿಪಡ್ಪುಯಲ್ಲಿ ಮುಳುಗಿದ ಕೊಳವೆ ಬಾವಿ, ಪಂಪ್ ಹೌಸ್

ಬಂಟ್ವಾಳ, ಜೂ. 8: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ಗುರುವಾರದಿಂದ ತೀವ್ರಗೊಂಡಿದ್ದು, ತಾಲೂಕಿನ ಹಲವೆಡೆಗಳಲ್ಲಿ ಮಳೆಹಾನಿ ಸಂಭವಿಸಿದೆ. ಸಜಿಪಪಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಂಚಿಲ ಇಡಿಪಡ್ಪು ಎಂಬಲ್ಲಿ ಸಾರ್ವಜನಿಕ ಕುಡಿಯುವ ಕಿರು ನೀರಾವರಿ ಯೋಜನೆ ಕೊಳವೆ ಬಾವಿಯ ಮತ್ತು ಪಂಪ್ ಹೌಸ್ ಮುಳುಗಿದ್ದು, ಗ್ರಾಮದ ಜನರಿಗೆ ಕುಡಿಯಲು ನೀರಿಲ್ಲ ಎನ್ನುವ ಸ್ಥಿತಿ ಉಂಟಾಗಿದೆ.
ವಿಟ್ಲ ಕಸ್ಬಾ ಗ್ರಾಮದ ಪಳಿಕೆ ಅನ್ನಮೂಲೆ ಹರೀಶ್ ಪೂಜಾರಿ ಎಂಬವರ ಮನೆಯ ಆವರಣ ಗೋಡೆಯು ಹತ್ತಿರದ ಮನೆಗೆ ಬಿದ್ದು ಹಾನಿಯಾಗಿದೆ.
ಕೈಕಂಬದಲ್ಲಿ ಮರವೊಂದು ಗೂಡಂಗಡಿಯೊಂದರ ಮೇಲೆ ಬಿದ್ದು ಹಾನಿ ಸಂಭವಿಸಿದೆ. ಮಾಣಿಲ ಗ್ರಾಮದಲ್ಲಿ ಮೂರು ಮನೆಗಳಿಗೆ ಹಾನಿಯಾಗಿದೆ. ಇಲ್ಲಿನ ಭಾಗೀರಥಿ, ಐತಕೊರಗ, ಕೃಷ್ಣ ನಾಯ್ಕ ಎಂಬವರ ಮನೆಗಳಿಗೆ ಹಾನಿಯಾಗಿದ್ದು, ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ತುಂಬಿ ಹರಿಯುತಿರುವ ನೇತ್ರಾವತಿ: ಪಶ್ಚಿಮ ಘಟ್ಟದಲ್ಲಿಯೂ ಉತ್ತಮ ಮಳೆಯಾಗಿರುವುದಿಂದ ನೇತ್ರಾವತಿ ನದಿ ತುಂಬಿ ಹರಿಯುತ್ತಿದೆ. ತುಂಬೆ ವೆಂಟೆಡ್ ಡ್ಯಾಂನಲ್ಲಿ 6ಮೀ. ನಷ್ಟು ಎತ್ತರದ ನೀರನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಒಳಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಹೆಚ್ಚುವರಿ ನೀರನ್ನು ಹೊರ ಬಿಡಲು ಡ್ಯಾಂನ 4 ಬಾಗಿಲನ್ನು ತೆರೆಯಲಾಗಿದೆ. ಇದರಿಂದ ಆಸುಪಾಸಿನ ತಗ್ಗು ಪ್ರದೇಶಗಳೆಲ್ಲಾ ಜಲಾವೃತಗೊಂಡಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ತಾಲೂಕು ಆಡಳಿತ ಮುನ್ನೆಚ್ಚರಿಕೆ ವಹಿಸಿದ್ದು, ಎಲ್ಲ ಅಧಿಕಾರಿಗಳನ್ನು ಕರ್ತವ್ಯದ ಕೇಂದ್ರ ಸ್ಥಾನದಲ್ಲಿರುವಂತೆ ಸೂಚಿಸಿದೆ.
ನದಿ ತಟಗಳಲ್ಲಿ ತೀವ್ರ ಮುನ್ನೆಚ್ಚರಿಕೆ ವಹಿಸಲಾಗಿದ್ದು, ರಬ್ಬರ ಬೋಟ್ಗಳನ್ನು ಸಿದ್ದಪಡಿಸಲಾಗಿದೆ. ಈಜುಪಟುಗಳನ್ನು ಗುರುತಿಸಿ ಸಂಪರ್ಕದಲ್ಲಿರಿಸಿ ಕೊಳ್ಳಲಾಗಿದೆ. ಹಳೆಯ ಮರಗಳು ಹಾಗೂ ಕುಸಿಯುವ ಹಂತದ ಗುಡ್ಡೆಗಳ ಬಗ್ಗೆ ವಿಶೇಷ ಗಮನ ಹರಿಸಲಾಗಿದೆ.
- ರವಿ.ವೈ, ಬಂಟ್ವಾಳ ತಹಶೀಲ್ದಾರ್