ಬೆಳ್ತಂಗಡಿ: ಹೊಳೆಗೆ ಬಿದ್ದು ಮಹಿಳೆ ಮೃತ್ಯು

ಮುಂಡಾಜೆ ಸಮೀಪ ರಾಷ್ಟ್ರೀಯ ಹೆದ್ದಾರಿಗೆ ಮರ ಉರುಳಿಬಿದ್ದಿರುವುದು.
ಬೆಳ್ತಂಗಡಿ, ಜೂ.9: ಬೆಳ್ತಂಗಡಿ ತಾಲೂಕಿನಲ್ಲಿ ಮಳೆ ಅಬ್ಬರ ಮುಂದುವರಿದಿದ್ದು, ಹೊಳೆ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರು ಕಾಲುಜಾರಿ ಹೊಳೆಗೆ ಬಿದ್ದು ಮೃತಪಟ್ಟ ಘಟನೆ ವೇಣೂರು ಠಾಣಾ ವ್ಯಾಪ್ತಿಯಲ್ಲಿ ಶಿರ್ಲಾಲು ಗ್ರಾಮದಲ್ಲಿ ಇಂದು ಮಧ್ಯಾಹ ನಡೆದಿದೆ.
ಮೃತರನ್ನು ಶಿರ್ಲಾಲು ನಿವಾಸಿ ರೇವತಿ(50) ಎಂದು ಗುರುತಿಸಲಾಗಿದೆ. ಇವರು ಹೊಳೆ ಬದಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲುಜಾರಿ ಹೊಳೆಗೆ ಬಿದ್ದಿರಬೇಕೆಂದು ಶಂಕಿಸಲಾಗಿದೆ. ಮೃತದೇಹ ಪತ್ತೆಯಾಗಿದೆ.
ಮೃತರು ಮೂವರು ಪುತ್ರಿಯರು, ಇಬ್ಬರು ಪುತ್ರರನ್ನು ಅಗಲಿದ್ದು, ಮಕ್ಕಳ ಪೈಕಿ ಇಬ್ಬರು ಮೂಗರು ಎಂದು ತಿಳಿದುಬಂದಿದೆ.
ತಾಲೂಕಿನಲ್ಲಿ ಗಾಳಿಮಳೆ ಅಬ್ಬರ ತೀವ್ರವಾಗಿದ್ದು, ಹಲವೆಡೆ ಮರಗಳು ಉರುಳಿಬಿದ್ದಿರುವ ಘಟನೆ ವರದಿಯಾಗಿದೆ. ಮುಂಡಾಜೆ ಸಮೀಪ ರಾಷ್ಟ್ರೀಯ ಹೆದ್ದಾರಿಗೆ ಮರವೊಂದು ಉರುಳಿಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ಬಳಿಕ ಸ್ಥಳೀಯರ ಸಹಕಾರದಲ್ಲಿ ಮರವನ್ನು ತೆರವುಗೊಳಿಸಲಾಯಿತು.
Next Story