ಉಳ್ಳಾಲ ದರ್ಗಾ ವತಿಯಿಂದ ಸಚಿವ ಯು.ಟಿ.ಖಾದರ್ಗೆ ಸನ್ಮಾನ

ಉಳ್ಳಾಲ, ಜೂ.9: ಉಳ್ಳಾಲ ಕೇಂದ್ರ ಜುಮಾ ಮಸೀದಿ ಮತ್ತು ಸೈಯದ್ ಮದನಿ ದರ್ಗಾ ಸಮಿತಿಯ ವತಿಯಿಂದ ಶನಿವಾರ ದರ್ಗಾ ವಠಾರದಲ್ಲಿ ನಗರಾಭಿವೃದ್ಧಿ ಮತ್ತು ವಸತಿ ಖಾತೆಯ ನೂತನ ಸಚಿವ ಯು.ಟಿ.ಖಾದರ್ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಮಾತನಾಡಿದ ಯು.ಟಿ.ಖಾದರ್ ಶಾಸಕನಾಗಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಆರೋಗ್ಯ ಹಾಗೂ ಆಹಾರ ಇಲಾಖೆಯ ಸಚಿವನಾಗಿ ಸರಕಾರದ ಪ್ರತಿ ಯೋಜನೆಯನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸಿದ್ದಲ್ಲದೆ ಬಹಳಷ್ಟು ಜನಪರ ಯೋಜನೆಗಳನ್ನು ಜಾರಿಗೆ ತಂದು ಕ್ಷೇತ್ರ ಹಾಗೂ ರಾಜ್ಯದ ಜನರ ಪ್ರೀತಿಗೆ ಪಾತ್ರನಾಗಿದ್ದೇನೆ. ಪಕ್ಷದ ಮುಖಂಡರು ನನ್ನ ಸೇವೆಯನ್ನು ಪರಿಗಣಿಸಿ ನೂತನ ಸಮಿಶ್ರ ಸರಕಾರದಲ್ಲೂ ಜನರ ಸೇವೆ ಮಾಡಲು ಸಚಿವ ಸ್ಥಾನ ನೀಡಿದ್ದಾರೆ. ಅವರ ನಂಬಿಕೆ ವಿಶ್ವಾಸಕ್ಕೆ ತಕ್ಕಂತೆ ಕೊಟ್ಟ ಇಲಾಖೆಯಡಿ ಸಮರ್ಥವಾಗಿ ಕಾರ್ಯನಿರ್ವಹಿಸುತ್ತೇನೆ ಎಂದು ಹೇಳಿದರು.
ನಾಲ್ಕನೆಯ ಬಾರಿಗೆ ಶಾಸಕನಾಗಿ, ಎರಡನೆಯ ಬಾರಿ ಸಚಿವನಾಗಿ ಮುಂದುವರಿಯಲು ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರ ಶ್ರಮ ಸಾರ್ಥಕಗೊಳಿಸುತ್ತೇನೆ. ನನ್ನನ್ನು ನಂಬಿಕೊಂಡು ಕ್ಷೇತ್ರದಲ್ಲಾಗಬೇಕಾದ ಅಭಿವೃದ್ದಿ ಕಾರ್ಯಕ್ರಮಕ್ಕೆ ಕಾರ್ಯಕರ್ತರು ಜನರ ಮುಂದಿಟ್ಟ ಭರವಸೆ ಈಡೇರಿಸಿದ್ದೇನೆ, ಮುಂದೆಯೂ ಈಡೇರಿಸುತ್ತೇನೆ. ಅಲ್ಲದೆ ನೂತನ ಇಲಾಖೆಯಲ್ಲಿ ಸಮಗ್ರ ಅಭಿವೃದ್ಧಿ ದಾಖಲಿಸುವೆನು ಎಂದ ಸಚಿವ ಖಾದರ್, ಅಧಿಕಾರಕ್ಕಾಗಿ ಯಾರಲ್ಲೂ ಕೇಳಲಿಲ್ಲ. ನನಗೆ ಸಚಿವ ಸ್ಥಾನ ಕೊಡುವುದಕ್ಕೆ ಯಾರದೂ ವಿರೋಧವೂ ಇರಲಿಲ್ಲ. ಸಚಿವನಾಗಿ ರಾಜ್ಯದ ಜನತೆಗೆ ಹತ್ತಿರವಾಗಿದ್ದೇನೆ. ಮುಂದಿನ ದಿನಗಳಲ್ಲಿ ವಸತಿ ಹಾಗೂ ನಗರಾಭಿವೃದ್ಧಿ ಕ್ಷೇತ್ರದಲ್ಲಿ ಮಾದರಿ ಕೆಲಸ ಮಾಡಲು ಶ್ರಮಿಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಅವರನ್ನೂ ಅಭಿನಂದಿಸಲಾಯಿತು. ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರಾದ ಯು.ಕೆ.ಮೋನು ಇಸ್ಮಾಯೀಲ್, ಬಾವ ಮುಹಮ್ಮದ್, ಪ್ರದಾನ ಕಾರ್ಯದರ್ಶಿ ಮುಹಮ್ಮದ್ ತ್ವಾಹ, ಜತೆ ಕಾರ್ಯದರ್ಶಿ ಗಳಾದ ನೌಷಾದ್ ಅಲಿ, ಆಝಾದ್ ಇಸ್ಮಾಯೀಲ್, ಅರಬಿಕ್ ಟ್ರಸ್ಟ್ ಉಪಾಧ್ಯಕ್ಷ ಮುಹಮ್ಮದ್ ಹಳೆಕೋಟೆ, ಕಾರ್ಯದರ್ಶಿ ಆಸಿಫ್ ಅಬ್ದುಲ್ಲಾ, ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಮುಸ್ತಫಾ ಅಬ್ದುಲ್ಲಾ, ಯು.ಕೆ.ಇಬ್ರಾಹೀಂ, ಕಾರ್ಯದರ್ಶಿ ಎ.ಕೆ. ಮುಹಿಯುದ್ದೀನ್ ಉಪಸ್ಥಿತರಿದ್ದರು.