ಚಿಕ್ಕಮಗಳೂರು: ಶತಮಾನೋತ್ಸವದ ಹೊಸ್ತಿಲಲ್ಲಿರುವ ಶಾಲೆ ಮುಚ್ಚಲು ಹುನ್ನಾರ; ಆರೋಪ
ಶಾಲಾ ಆಡಳಿತ ಮಂಡಳಿ ವಿರುದ್ಧ ಶಿಕ್ಷಕರು, ಪೋಷಕರಿಂದ ಧರಣಿ

ಚಿಕ್ಕಮಗಳೂರು, ಜೂ.9: ಆಡಳಿತ ಮಂಡಳಿಯ ನಿರಂತರ ಕಿರುಕುಳದಿಂದ ತಮ್ಮನ್ನು ರಕ್ಷಿಸಬೇಕು, ಸಂಸ್ಥೆಯನ್ನು ಉಳಿಸುವ ನಿಟ್ಟಿನಲ್ಲಿ ಆಡಳಿತ ಮಂಡಳಿಯನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ಬೋಧಕರು ಮತ್ತು ಬೋಧಕೇತರ ಸಿಬ್ಬಂದಿ ಧರಣಿಗೆ ಮುಂದಾದ ಘಟನೆ ಶತಮಾನೋತ್ಸವದ ಹೊಸ್ತಿಲಲ್ಲಿರುವ ನಗರದ ವಿಶ್ವವಿದ್ಯಾಲಯ ವಿದ್ಯಾಸಂಸ್ಥೆಯಲ್ಲಿ ಶನಿವಾರ ನಡೆಯಿತು.
ಆಡಳಿತ ಮಂಡಳಿಯ ಪದಾಧಿಕಾರಿಗಳು ತಮ್ಮನ್ನು ಏಕವಚನ ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ, ಸಂಸ್ಥೆಯನ್ನು ಮುಚ್ಚಲು ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿ ಶಿಕ್ಷಕರು ಮತ್ತು ಸಿಬ್ಬಂದಿ ಶುಕ್ರವಾರ ಜಿಲ್ಲಾಧಿಕಾರಿಗಳು, ಜಿಲ್ಲಾ ಪೋಲೀಸ್ ಮುಖ್ಯಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ದೂರು ಸಲ್ಲಿಸಿದ್ದರು, ಈ ಸಂಬಂಧ ಶನಿವಾರ ಧರಣಿಯನ್ನೂ ಹಮ್ಮಿಕೊಳ್ಳಲು ನಿರ್ಧರಿಸಿದ್ದರು.
ಈ ಹಿನ್ನೆಲೆಯಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಶನಿವಾರ ಸಂಸ್ಥೆಯ ಆವರಣದಲ್ಲಿ ಜಮಾಯಿಸಿದ್ದರು. ಬೆಳಗ್ಗೆ ಶಿಕ್ಷಕರು ಮತ್ತು ಸಿಬ್ಬಂದಿ ಧರಣಿ ನಡೆಸಲು ಮುಂದಾಗುತ್ತಿದ್ದಂತೆ ಅದನ್ನು ತಡೆದ ಆಡಳಿತ ಮಂಡಳಿ ಪದಾಧಿಕಾರಿಗಳು ಶಾಲೆಗೆ ತೆರಳಿ ಪಾಠ ಮಾಡುವಂತೆ ಸೂಚಿಸಿದರು. ಈ ಸಂದರ್ಭದಲ್ಲಿ ಶಿಕ್ಷಕರು, ಸಿಬ್ಬಂದಿ, ಹಳೆಯ ವಿದ್ಯಾರ್ಥಿಗಳು ಆಡಳಿತ ಮಂಡಳಿ ಹಾಗೂ ಸ್ಥಳಕ್ಕಾಗಮಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು.
ಶತಮಾನದ ಅಂಚಿನಲ್ಲಿರುವ ಪ್ರತಿಷ್ಠಿತ ಶಾಲೆಯನ್ನು ಮುಚ್ಚಲು ಆಡಳಿತ ಮಂಡಳಿ ಹುನ್ನಾರ ನಡೆಸುತ್ತಿದೆ. ಆಡಳಿತ ಮಂಡಳಿಯ ಪದಾಧಿಕಾರಿಗಳು ಶಾಲೆಯನ್ನು ತಮ್ಮ ಸ್ವಂತ ಆಸ್ತಿಯೆಂಬಂತೆ ವರ್ತಿಸುತ್ತಿದ್ದಾರೆ. ಬಡಮಕ್ಕಳಿಗೆ ಶಾಲೆ ಎಟುಕದಂತೆ ಸಾವಿರಾರು ರೂ. ಶುಲ್ಕವನ್ನು ಏಕಾಏಕಿ ಹೆಚ್ಚಿಸಿದ್ದಾರೆ. ಶಾಲೆಗೆ ಮಕ್ಕಳನ್ನು ಸೇರಿಸಲು ಬಂದ ಪೋಷಕರನ್ನು ಅವಮಾನಿಸಿ ಕಳುಹಿಸುತ್ತಿದ್ದಾರೆ. ಕಳೆದ 97 ವರ್ಷಗಳಿಂದ ನಗರದಲ್ಲಿ ಸಾವಿರಾರು ಬಡಮಕ್ಕಳಿಗೆ ವಿದ್ಯಾದಾನದ ಮೂಲಕ ಬದುಕನ್ನು ಕಟ್ಟಿಕೊಟ್ಟಿರುವ ಶಾಲೆಯನ್ನು ಉಳಿಸುವ ನಿಟ್ಟಿನಲ್ಲಿ ಆಡಳಿತ ಮಂಡಳಿಯನ್ನು ರದ್ದುಗೊಳಿಸುವಂತೆ ಹಳೆಯ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಈ ವೇಳೆ ಆಗ್ರಹಿಸಿದರು.
ಇದೇ ವೇಳೆ ಮಾಧ್ಯಮಗಳೊಂದಿಗೆ ಅಳಲು ತೋಡಿಕೊಂಡ ಶಿಕ್ಷಕಿಯರು ಹಾಗೂ ಶಿಕ್ಷಕರು, ಆಡಳಿತ ಮಂಡಳಿಯ ಪದಾಧಿಕಾರಿಗಳು ತಮ್ಮನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದಾರೆ. ಸದಾಕಾಲ ಶಾಲೆಯಲ್ಲೇ ಕಾಲ ಕಳೆಯುತ್ತಾ ಟೈಂ ಪಾಸ್ ಮಾಡುತ್ತಿರುವ ಪದಾಧಿಕಾರಿಗಳು ತಮಗೆ ಪಾಠ ಮಾಡಲು ಅಡ್ಡಿ ಪಡಿಸುತ್ತಿದ್ದಾರೆ. ಎಲ್ಲಾ ವಿಷಯಗಳಲ್ಲೂ ಮೂಗು ತೂರಿಸುತ್ತಿದ್ದಾರೆ. ಜಾತಿ ಹೆಸರಿನಲ್ಲಿ ತಮ್ಮನ್ನು ನಿಂದಿಸುತ್ತಿದ್ದಾರೆ. ತಮ್ಮ ಕೈಯಿಂದ ಹೋಟೆಲ್ಗಳಿಂದ ತಿಂಡಿ ತರಿಸುತ್ತಿದ್ದಾರೆ. ಶಿಕ್ಷಕ ಮತ್ತು ಶಿಕ್ಷಕಿಯರಿಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ವೇಳೆ ಮಧ್ಯ ಪ್ರವೇಶಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟರಾಮು ಜೂ.11ರಂದು ಆಡಳಿತ ಮಂಡಳಿ ಮತ್ತು ಶಿಕ್ಷಕರು ಹಾಗೂ ನೌಕರರು ಮತ್ತು ಪೋಷಕರ ಸಭೆ ಕರೆದು ಚರ್ಚಿಸಿ ಸಮಸ್ಯೆಯನ್ನು ಬಗೆಹರಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಧರಣಿಯನ್ನು ಕೈಬಿಡಲಾಯಿತು.
ಸಂಸ್ಥೆಯನ್ನು ಮುಚ್ಚಲು ಪಿತೂರಿ ನಡೆಸಿರುವ ಆಡಳಿತ ಮಂಡಳಿಯ ಪದಾಧಿಕಾರಿಗಳು ಈಗಾಗಲೇ ಶಾಲೆಯ ಬಸ್ಸನ್ನು ಮಾರಿದ್ದಾರೆ. ಸಂಸ್ಥೆಯನ್ನು ಮಾರಾಟ ಮಾಡಿ ಕ್ಲಬ್ ಮಾಡಲು ಮುಂದಾಗಿದ್ದು, ಆ ಹಿನ್ನೆಲೆಯಲ್ಲಿ ಶಾಲೆ ತೊರೆಯುವಂತೆ ತಮಗೆ ಬೆದರಿಕೆ ಹಾಕುತ್ತಿದ್ದಾರೆ. ಶುಲ್ಕವನ್ನು ಸಾವಿರಾರು ರೂ. ಏರಿಸುವ ಮೂಲಕ ಬಡಮಕ್ಕಳು ಶಾಲೆಗೆ ದಾಖಲಾಗದಂತೆ ಮಾಡಿದ್ದಾರೆ. ಇದರಿಂದಾಗಿ ಶಾಲೆಯ ದಾಖಲಾತಿ ಕುಸಿದಿದೆ ಎಂದು ಆರೋಪಿದರು.
- ಆರ್.ಶ್ರೀನಿವಾಸ್, ಶಾಲೆಯ ಮುಖ್ಯ ಶಿಕ್ಷಕ
ಶಿಕ್ಷಕರಿಂದ ಶಾಲೆಯಲ್ಲಿ ಸಾಕಷ್ಟು ಅಕ್ರಮಗಳು ನಡೆಯುತ್ತಿದ್ದವು. ಇದನ್ನು ಕೆಲ ಮಕ್ಕಳ ಪೋಷಕರೇ ಆಡಳಿತ ಮಂಡಳಿಯ ಗಮನಕ್ಕೆ ತಂದಿದ್ದರು. ಈ ಬಗ್ಗೆ ಪರಿಶೀಲಿಸಿದಾಗ ಅಕ್ರಮಗಳು ಬೆಳಕಿಗೆ ಬಂದಿವೆ. ಅಕ್ರಮಗಳಿಗೆ ಕಡಿವಾಣ ಹಾಕಿ ಆಡಳಿತವನ್ನು ಬಿಗಿಗೊಳಿಸಿದ್ದೇವೆ. ಈ ಹಿನ್ನೆಲೆಯಲ್ಲಿ ಶಿಕ್ಷಕರು ಈ ರೀತಿ ವರ್ತಿಸುತ್ತಿದ್ದಾರೆ. ಶಾಲೆಯನ್ನು ಮುಚ್ಚುವ ಪ್ರಸ್ತಾವ ಆಡಳಿತ ಮಂಡಲಿಯ ಮುಂದಿಲ್ಲ. ಶಿಕ್ಷಕರ ಆರೋಪ ನಿರಾಧಾರ.
- ಕೆ.ಭವಾನಿ ಶಂಕರ್, ಆಡಳಿತ ಮಂಡಳಿಯ ಕಾರ್ಯದರ್ಶಿ







